ಸೌರವ್ ಗಂಗೂಲಿ, ಜಯ್ ಶಾ ಅಧಿಕಾರ ಮುಂದುರಿಕೆ: ಸುಪ್ರೀಂ ನಲ್ಲಿ ವಿಚಾರಣೆ ಆರಂಭ
Team Udayavani, Dec 10, 2020, 3:19 PM IST
ನವದೆಹಲಿ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ ಅವರ ಅಧಿಕಾರಾವಧಿಯನ್ನು ವಿಸ್ತರಿಸಬೇಕೆಂಬ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ಕೈಗೆತ್ತಿಕೊಂಡಿದೆ. ಕೆಲವು ತಿಂಗಳ ಹಿಂದೆಯೇ ಗಂಗೂಲಿ ಮತ್ತು ಜಯ್ ಶಾ ಅವರ ಅಧಿಕಾರಾವಧಿ ಮುಗಿದುಹೋಗಿದೆ.
ಸದ್ಯ ಅವರು ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಅಧಿಕಾರದಲ್ಲಿ ಮುಂದುವರಿದ್ದಾರೆ. ಬಿಸಿಸಿಐನ ಹೊಸ ನಿಯಮಗಳ ಪ್ರಕಾರ, ಪದಾಧಿಕಾರಿಗಳು ಸತತ 6 ವರ್ಷಗಳ ಅಧಿಕಾರಾವಧಿ ನಂತರ 3 ವರ್ಷ ಕಡ್ಡಾಯ ವಿಶ್ರಾಂತಿ ಪಡೆಯಲೇಬೇಕು. ಬಿಸಿಸಿಐ ಮತ್ತು ರಾಜ್ಯಸಂಸ್ಥೆಯಲ್ಲಿ ಪ್ರತ್ಯೇಕವಾಗಿ 6 ವರ್ಷವಾಗಿರಬಹುದು, ಎರಡೂ ಸೇರಿಯೂ ಆಗಿರಬಹುದು; 3 ವರ್ಷ ವಿಶ್ರಾಂತಿ ಅನಿವಾರ್ಯ. ಈ ನಿಯಮವನ್ನು ಬದಲಿಸಬೇಕು ಎನ್ನುವುದು ಬಿಸಿಸಿಐ ಸಲ್ಲಿಸಿದ ಅರ್ಜಿಯ ಮುಖ್ಯಾಂಶ.
ಒಂದು ವೇಳೆ ನ್ಯಾಯಪೀಠ ಇದನ್ನು ಒಪ್ಪಿಕೊಂಡರೆ ಲೋಧಾ ಸಮಿತಿ ಮಾಡಿದ ನಿಯಮವೇ ಸಡಿಲವಾದಂತಾಗುತ್ತದೆ. ಒಪ್ಪಿಕೊಳ್ಳದಿದ್ದರೆ ಗಂಗೂಲಿಯಂತಹ ಸಮರ್ಥರು ಬಿಸಿಸಿಐ ಆಡಳಿತದಿಂದ ದೂರಾಗುವ ಪರಿಸ್ಥಿತಿ ಎದುರಿಸುತ್ತಾರೆ. ಇದು ಸ್ವತಃ ಕ್ರಿಕೆಟ್ ಬೆಳವಣಿಗೆಗೂ ಅಪಾಯಕಾರಿ ಎಂದು ವಾದಿಸಲಾಗಿದೆ