ಸಯ್ಯದ್ ಮೋದಿ ಬ್ಯಾಡ್ಮಿಂಟನ್: ಹಿಂದೆ ಸರಿದ ಸೈನಾ ನೆಹ್ವಾಲ್
Team Udayavani, Nov 26, 2019, 5:50 AM IST
ಲಕ್ನೋ: “ಸಯ್ಯದ್ ಮೋದಿ ಇಂಟರ್ನ್ಯಾಶನಲ್ ಬ್ಯಾಡ್ಮಿಂಟನ್’ ಪಂದ್ಯಾವಳಿ ಮಂಗಳವಾರದಿಂದ ಲಕ್ನೋದಲ್ಲಿ ಆರಂಭವಾಗಲಿದ್ದು, ತವರಿನ ಆಟಗಾರರ ಸಾಮರ್ಥ್ಯ ಅನಾವರಣಗೊಳಿಸಲು ಉತ್ತಮ ವೇದಿಕೆಯಾಗಿದೆ. ಆದರೆ ಫಾರ್ಮ್ ಹಾಗೂ ಫಿಟ್ನೆಸ್ ಸಮಸ್ಯೆಯಿಂದ ಸೈನಾ ನೆಹ್ವಾಲ್ ಕೊನೇ ಕ್ಷಣದಲ್ಲಿ ಹಿಂದೆ ಸರಿಯುವ ನಿರ್ಧಾರ ಪ್ರಕಟಿಸಿದ್ದಾರೆ.ಇಲ್ಲಿ ಕೇಂದ್ರಬಿಂದುವಾಗಿರುವ ಭಾರತೀಯನೆಂದರೆ ಲಕ್ಷ್ಯ ಸೇನ್.
ಅತ್ಯುತ್ತಮ ಫಾರ್ಮ್ ನಲ್ಲಿರುವ ಸೇನ್ ಒಂದು ದಿನದ ಹಿಂದಷ್ಟೇ “ಸ್ಕಾಟಿಷ್ ಓಪನ್’ ಕಿರೀಟ ಧರಿಸಿದ ಸಂಭ್ರಮದಲ್ಲಿದ್ದಾರೆ. ಋತುವಿನ 5ನೇ ಪ್ರಶಸ್ತಿಯ ಜತೆಗೆ 3ನೇ ಬಿಡಬ್ಲ್ಯುಎಫ್ ಚಾಂಪಿಯನ್ ಆಗುವ ಹಾದಿಯಲ್ಲಿದ್ದಾರೆ.
ಸೈನಾ, ಸಿಂಧು ಗೈರು
3 ಬಾರಿಯ ಚಾಂಪಿ ಯನ್ ಸೈನಾ ನೆಹ್ವಾಲ್ ಸೋಮವಾರ ಸಂಜೆ ದಿಢೀರನೇ ಹೊರಗುಳಿಯುವ ನಿರ್ಧಾರಕ್ಕೆ ಬಂದರು. ಪಿ.ವಿ. ಸಿಂಧು ಕೂಡ ಈ ಕೂಟದಲ್ಲಿ ಆಡುತ್ತಿಲ್ಲ.
ಮುಂದಿನ ಋತುವಿನ ಕೂಟ ಗಳಿಗೆ ಸಿದ್ಧತೆ ನಡೆಸುವ ಸಲುವಾಗಿ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ ನಿಂದ (ಪಿಬಿಎಲ್) ಹೊರಗುಳಿ ಯಲು ನಿರ್ಧರಿಸಿರುವ ಸೈನಾ ನೆಹ್ವಾಲ್, ತವರಿನ ಕೂಟದಲ್ಲಿ ಮರಳಿ ಫಾರ್ಮ್ ಕಂಡುಕೊಳ್ಳುವ ಯೋಜನೆ ಹಾಕಿಕೊಂಡಿದ್ದರು. ಆದರೆ ಈ ಯೋಜನೆ ತಲೆ ಕೆಳಗಾಗಿದೆ.
ಪುರುಷರ ವಿಭಾಗದ ಭರವಸೆ
ಪುರುಷರ ಸಿಂಗಲ್ಸ್ನಲ್ಲಿ 2016ರ ಚಾಂಪಿಯನ್ ಕೆ. ಶ್ರೀಕಾಂತ್, 2 ಬಾರಿಯ ವಿಜೇತ ಪಿ. ಕಶ್ಯಪ್ ಮೇಲೆ ಭರವಸೆ ಇಡಲಾಗಿದೆ. ಶ್ರೀಕಾಂತ್ ಮೊದಲ ಸುತ್ತಿನಲ್ಲಿ ರಶ್ಯದ ವ್ಲಾದಿಮಿರ್ ಮಾಲ್ಕೋವ್ ಅವರನ್ನು ಎದುರಿಸಲಿದ್ದಾರೆ. ಕಶ್ಯಪ್ ಅವರ ಎದುರಾಳಿ ಫ್ರಾನ್ಸ್ನ ಲುಕಾಸ್ ಕೊರ್ವೀ.
ಹಾಲಿ ಚಾಂಪಿಯನ್ ಸಮೀರ್ ವರ್ಮ, ವಿಶ್ವ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಗೆದ್ದ ಬಿ. ಸಾಯಿ ಪ್ರಣೀತ್ ಕೂಡ ನಿರೀಕ್ಷೆ ಮೂಡಿಸಿದ್ದಾರೆ. ಸಮೀರ್ ವರ್ಮ ಭಾರತದವರೇ ಆದ ಅಜಯ್ ಜಯರಾಮ್ ಜತೆ ಸೆಣಸಬೇಕಿದೆ. ಸಾಯಿ ಪ್ರಣೀತ್ ಅವರ ಎದುರಾಳಿ ಮಲೇಶ್ಯದ ಇಸ್ಕಂದರ್ ಜುಲ್ಕರ್ನೆçನ್. ಸಮೀರ್ ಅವರ ಅಣ್ಣ ಸೌರಭ್ ವರ್ಮ ಕೂಡ ಸ್ಪರ್ಧೆಯಲ್ಲಿದ್ದು, ಹಾಂಕಾಂಗ್ನ ಲೀ ಚೆಕ್ ಯಿಯು ವಿರುದ್ಧ ಆಡಲಿದ್ದಾರೆ.
ಪುರುಷರ ಡಬಲ್ಸ್ನಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ, ಬಿ. ಸುಮೀತ್ ರೆಡ್ಡಿ-ಮನು ಅತ್ರಿ; ಮಿಶ್ರ ಡಬಲ್ಸ್ನಲ್ಲಿ ಸಾತ್ವಿಕ್ ಸಾಯಿರಾಜ್-ಅಶ್ವಿನಿ ಪೊನ್ನಪ್ಪ, ಧ್ರುವ ಕಪಿಲ-ಮೇಘನಾ ಜಕ್ಕಂಪುಡಿ, ಪ್ರಣವ್ ಜೆರ್ರಿ ಚೋಪ್ರಾ-ಎನ್. ಸಿಕ್ಕಿ ರೆಡ್ಡಿ; ವನಿತಾ ಡಬಲ್ಸ್ ನಲ್ಲಿ ಅಶ್ವಿನಿ ಪೊನ್ನಪ್ಪ-ಸಿಕ್ಕಿ ರೆಡ್ಡಿ ಕಣಕ್ಕಿಳಿಯಲಿದ್ದಾರೆ.