ಟಿ20: ಗುವಾಹಾಟಿಯ ಹಾಸ್ಯಾಸ್ಪದ ಘಟನೆಗಳಿಂದ ಬಿಸಿಸಿಐಗೆ ಮುಜುಗರ
Team Udayavani, Jan 7, 2020, 6:13 AM IST
ಗುವಾಹಾಟಿ: ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಎದ್ದಿದ್ದ ಗಲಾಟೆ ಇತ್ತೀಚೆಗಷ್ಟೇ ಅಸ್ಸಾಂನಲ್ಲಿ ತಣ್ಣಗಾಗಿದೆ. ಅಂತಹ ಹೊತ್ತಿನಲ್ಲಿ ಸವಾಲು ಸ್ವೀಕರಿಸಿ, ಅಲ್ಲಿಯೇ ಶ್ರೀಲಂಕಾ-ಭಾರತ ನಡುವಿನ ಮೊದಲನೇ ಟಿ20 ಪಂದ್ಯವನ್ನು ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಆಯೋಜಿಸಿತ್ತು.
ವಿಪರ್ಯಾಸವೆಂದರೆ ಅಸ್ಸಾಂ ಕ್ರಿಕೆಟ್ ಸಂಸ್ಥೆಯ ನೂತನ ಪದಾಧಿಕಾರಿಗಳ ಅನುಭವದ ಪರಿಣಾಮದಿಂದ ರವಿವಾರ ಕೆಲವು ಮುಜುಗರದ ಸಂಗತಿಗಳು ನಡೆದವು. ಮಳೆ ಬಂದು, ಅದು ನಿಂತ ಮೇಲೆ ಅಂಕಣವನ್ನು ಪಂದ್ಯಕ್ಕೆ ಸಿದ್ಧಪಡಿಸಲಾಗದೇ ಸಿಬಂದಿ ಒದ್ದಾಡಿದರು. ಈ ಹಾಸ್ಯಾಸ್ಪದ ಸಂಗತಿ ವಿಶ್ವಕ್ಕೆ ನೇರಪ್ರಸಾರವಾಗಿದ್ದು ನೋಡಿ, ಸ್ವತಃ ಬಿಸಿಸಿಐ ಮುಜುಗರ ಕ್ಕೊಳಗಾಗಿದೆ.
ಆಗಿದ್ದೇನು ?
ರವಿವಾರ ರಾತ್ರಿ 8 ಗಂಟೆಗೆ ಗುವಾಹಾಟಿಯಲ್ಲಿ ಸುರಿದ ಭಾರೀ ಮಳೆ ನಿಂತುಹೋಯಿತು. ಮಾಮೂಲಿಯಾಗಿ ಮೈದಾನದ ಮುಖ್ಯಭಾಗವಾದ ವಿಕೆಟ್ ನೆಡುವ ಜಾಗದ ಸುತ್ತಮುತ್ತ ಪ್ರದೇಶವನ್ನು ಹೊದಿಕೆಯಿಂದ ಮುಚ್ಚಲಾಗಿರುತ್ತದೆ. ಅಂಕಣ ನೆನೆಯದಿರಲಿ ಎನ್ನುವುದು ಇಂಗಿತ. ಇಲ್ಲಿ ಹೊದಿಕೆಯೇ ತೂತಾಗಿತ್ತು. ಪರಿಣಾಮ ಮಳೆ ನಿಂತ ಮೇಲೆ ಅಂಕಣದಲ್ಲಿ ಕುಳಿಗಳು ಬಿದ್ದಿದ್ದವು! ಇದನ್ನು ಹೊರತು ಪಡಿಸಿದರೆ ಬೇರೆ ಯಾವುದೇ ಸಮಸ್ಯೆಯಿರಲಿಲ್ಲ. ವ್ಯವಸ್ಥೆ ಸರಿಯಿದ್ದರೆ ಮುಂದಿನ ಅರ್ಧಗಂಟೆಯಲ್ಲಿ ಪಂದ್ಯವನ್ನು ಆರಂಭಿಸಲು ಅಡ್ಡಿಯೇ ಇರಲಿಲ್ಲ. ಅವ್ಯವಸ್ಥೆಯ ಪರಿಣಾಮ ಅಂಪಾಯರ್ಗಳು ಪಂದ್ಯವನ್ನು ರದ್ದುಪಡಿಸಿದರು. ಹೀಗಾಗಿ ಬಿಸಿಸಿಐ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ಅನುಭವಿಸಿತು.
ಮಳೆಯಿಂದ ಹಾನಿಗೊಳಗಾದ ಅಂಕಣ ಸರಿಪಡಿಸಲು ಸೂಪರ್ ಸಾಪರ್ ಬಳಸಲಾಯಿತು. ಅದರ ಜತೆಗೆ ಇಸಿŒಪೆಟ್ಟಿಗೆ, ಹೇರ್ಡ್ರೈಯರ್, ಕಬ್ಬಿಣದ ಸಲಾಕೆಗಳನ್ನೂ ಬಳಸ ಲಾಯಿತು! ಇವೆಲ್ಲ ಅಂಕಣ ಒಣಗಿಸಲು ಮಾಡಿದ ತಂತ್ರ! ಈ ಅಷ್ಟೂ ಸಂಗತಿಗಳು ನೇರಪ್ರ ಸಾರವಾಗಿದ್ದರಿಂದ ಕೋಟ್ಯಂತರ ವೀಕ್ಷಕರು ಅಚ್ಚರಿಪಟ್ಟರು. ಆಧುನಿಕ ಕ್ರಿಕೆಟ್ ವ್ಯವಸ್ಥೆಯಲ್ಲಿ ಇಂತಹ ಅವ್ಯವಸ್ಥೆ ಬಹುಶಃ ಇದೇ ಮೊದ ಲಿರಬೇಕು ಎಂದು ಅಭಿಮಾನಿಗಳು ಅಣಕಿಸಿದರು.
ವರದಿ ಕೇಳಿದ ಬಿಸಿಸಿಐ
ಈ ದುಃಸ್ಥಿತಿಗೆ ಮುಖ್ಯಕಾರಣ ಅಸ್ಸಾಂ ಕ್ರಿಕೆಟ್ ಸಂಸ್ಥೆಯ ನೂತನ, ಅನನುಭವಿ ಪದಾಧಿಕಾರಿಗಳು. ಆದರೆ ಬಿಸಿಸಿಐ ಸಿಇಒ ರಾಹುಲ್ ಜೊಹ್ರಿ, ಕ್ಯುರೇಟರ್ ಆಶಿಷ್ ಭೌಮಿಕ್ ಮೇಲೂ ಅಪಸ್ವರ ಕೇಳಿಬಂದಿದೆ. ಈ ಇಬ್ಬರು ಅಂತಿಮ ಹಂತದಲ್ಲಿ ಇದನ್ನೆಲ್ಲ ಪರಿಶೀಲಿಸಬೇಕಿತ್ತು ಎಂದು ಕೆಲವರು ಆರೋಪಿಸಿದ್ದಾರೆ. ಆದ್ದರಿಂದ ಬಿಸಿಸಿಐ ಭೌಮಿಕ್ರಿಂದ ವರದಿ ಕೇಳಿದೆ.