ಮಂಗಳೂರಿಗೆ ಕೃತಜ್ಞ: ರಾಹುಲ್
Team Udayavani, Jun 5, 2018, 6:00 AM IST
ಮಂಗಳೂರು: ಭಾರತದ ಖ್ಯಾತ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ ಮಂಗಳೂರು ಮೂಲದ ಕೆ. ಎಲ್. ರಾಹುಲ್ ಅವರನ್ನು ಎಸ್ಬಿಐ ಮಂಗಳೂರು ಸೆಂಟರ್ ವತಿಯಿಂದ ಸೋಮವಾರ ನಗರದ ಓಶಿಯನ್ ಪರ್ಲ್ ಸಭಾಂಗಣದಲ್ಲಿ ಸಮ್ಮಾನಿಸಲಾಯಿತು.
“ನನ್ನ ಕ್ರಿಕೆಟ್ ಜೀವನ ಆರಂಭವಾದದ್ದು ಮಂಗಳೂರಿನಲ್ಲೇ. ಇಲ್ಲಿರುವಾಗಲೇ ನಾನು 15ಕ್ಕಿಂತ ಕಿರಿಯರ ಕರ್ನಾಟಕ ತಂಡದ ನಾಯಕನಾಗಿದ್ದೆ. ಮಂಗಳೂರಿನ ಜನತೆಗೆ ನಾನು ಕೃತಜ್ಞನಾಗಿದ್ದೇನೆ. ಟೀಮ್ ಇಂಡಿಯಾದಲ್ಲಿ ದೊರೆತಿರುವ ಅವಕಾಶಗಳನ್ನು ಬದ್ಧತೆಯಿಂದ ನಿರ್ವಹಿಸುತ್ತೇನೆ’ ಎಂದು ರಾಹುಲ್ ಹೇಳಿದರು. ರಾಹುಲ್ ಅವರ ತಂದೆ ಪ್ರೊ| ಕೆ. ಎನ್. ಲೋಕೇಶ್ ಉಪಸ್ಥಿತರಿದ್ದರು.
ಎಸ್ಬಿಐನ ಡಿಜಿಎಂ ಸುಕುಮಾರ್ ಕೆ. ವಿ. ಅವರು ಸಮ್ಮಾನಿಸಿದರು. ರಾಹುಲ್ ಅವರ ಸಾಧನೆ ಅದ್ವಿತೀಯ ಎಂದು ಅಭಿನಂದಿಸಿದರು. ಮಂಗಳೂರು ಶಾಲಾ ದಿನಗಳಲ್ಲೇ ರಾಹುಲ್ ಅವರ ಪ್ರತಿಭೆ ಗುರುತಿಸಿ ಎಸ್ಬಿಐ ಸಮ್ಮಾನಿಸಿತ್ತೆಂದು ಶುಭಾ ಶಂಸನೆಗೈದ ಪಣಂಬೂರು ಬೀಚ್ ಅಭಿವೃದ್ಧಿ ಯೋಜನೆಯ ಸಿಇಒ ಯತೀಶ್ ಬೈಕಂಪಾಡಿ ನೆನಪಿಸಿದರು. ಬ್ಯಾಂಕಿನ ರೀಜನಲ್ ಮೆನೇಜರ್ ಕಿಶೋರ್ ಕುಮಾರ್ ವಂದಿಸಿದರು.
ಚಿತ್ರ ಕಲಾವಿದೆ ಶಬರಿ ಗಾಣಿಗ ಸ್ಥಳದಲ್ಲೇ ರಚಿಸಿದ ರಾಹುಲ್ ಕಲಾಕೃತಿಯನ್ನು ವಿಶೇಷ ಕೊಡುಗೆಯಾಗಿ ನೀಡಲಾಯಿತು. ಕಲಾವಿದೆಯನ್ನು ರಾಹುಲ್ ಅಭಿನಂದಿಸಿದರು.