ಇಂದು ಭಾರತ-ಪಾಕಿಸ್ಥಾನ ಸೂಪರ್ ಫೋರ್ ಶೋ
Team Udayavani, Sep 23, 2018, 6:00 AM IST
ದುಬಾೖ: ಏಶ್ಯ ಕಪ್ ಗೆಲ್ಲುವ ನೆಚ್ಚಿನ ತಂಡಗಳಾದ ಭಾರತ ಮತ್ತು ಪಾಕಿಸ್ಥಾನ ತಂಡಗಳು ಪ್ರಸಕ್ತ ಕೂಟದಲ್ಲಿ ಎರಡನೇ ಹೋರಾಟಕ್ಕೆ ಅಣಿಯಾಗಿವೆ. ರವಿವಾರದ “ಸೂಪರ್ ಫೋರ್’ ಹಂತದಲ್ಲಿ ತಮ್ಮ ಸಾಮರ್ಥ್ಯವನ್ನು ತೆರೆದಿಡಲು ಸನ್ನದ್ಧಗೊಂಡಿವೆ. ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ಫೈನಲ್ನಲ್ಲೂ ಈ ತಂಡಗಳೇ ಎದುರಾಗುವ ಸಾಧ್ಯತೆಯೊಂದು ನಿಚ್ಚಳವಾಗುತ್ತಿದೆ. ಆಗ ಇತ್ತಂಡಗಳ ಅಭಿಮಾನಿಗಳ ಪಾಲಿಗೆ ಇದೊಂದು “ತ್ರಿಬಲ್ ಧಮಾಕಾ’ ಆಗಲಿದೆ!
ಈಗಾಗಲೇ “ಎ’ ವಿಭಾಗದ ಲೀಗ್ ಪಂದ್ಯದಲ್ಲಿ ಭಾರತ-ಪಾಕಿಸ್ಥಾನ ತಂಡಗಳು ಮುಖಾಮುಖೀಯಾಗಿದ್ದವು. ಈ ಪಂದ್ಯದ ದೃಶ್ಯಾವಳಿ ಇನ್ನೂ ಕಣ್ಮುಂದೆ ಇದೆ. ದುಬಾೖ ಅಂಗಳದಲ್ಲೇ ಸಾಗಿದ ಈ ಸೆಣಸಾಟದಲ್ಲಿ ಭಾರತ 8 ವಿಕೆಟ್ಗಳ ಭರ್ಜರಿ ಗೆಲುವು ಒಲಿಸಿಕೊಂಡಿತ್ತು. ಪಾಕ್ 43.1 ಓವರ್ಗಳಲ್ಲಿ 162ಕ್ಕೆ ಕುಸಿದ ಬಳಿಕ ಅಮೋಘ ಚೇಸಿಂಗ್ ನಡೆಸಿದ ಟೀಮ್ ಇಂಡಿಯಾ 29 ಓವರ್ಗಳಲ್ಲಿ ಎರಡೇ ವಿಕೆಟಿಗೆ 164 ರನ್ ಪೇರಿಸಿ ಜಯಭೇರಿ ಮೊಳಗಿಸಿತ್ತು.
ಕಾಣಬೇಕಿದೆ ಭಾರತ-ಪಾಕ್ ಜೋಶ್
ಭಾರತ-ಪಾಕಿಸ್ಥಾನ ನಡುವಿನ ಎಂದಿನ ಜೋಶ್ ಈ ಪಂದ್ಯದಲ್ಲಿ ಕಂಡುಬಂದಿರಲಿಲ್ಲ. ಏಕಪಕ್ಷೀಯವಾಗಿ ಸಾಗಿದ ಮುಖಾಮುಖೀಯಲ್ಲಿ ಪಾಕ್ ಸುಲಭದಲ್ಲೇ ಭಾರತಕ್ಕೆ ಶರಣಾಗಿತ್ತು. ಅನಂತರ ರೋಹಿತ್ ಪಡೆ ಬಾಂಗ್ಲಾವನ್ನು ನಿರಾಯಾಸವಾಗಿ ಮಣಿಸಿದರೆ, ಪಾಕಿಸ್ಥಾನ ಒಂದಿಷ್ಟು ಒತ್ತಡದ ಬಳಿಕ ಅಫ್ಘಾನಿಸ್ಥಾನ ವಿರುದ್ಧ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ರವಿವಾರ ಗೆದ್ದವರಿಗೆ ಫೈನಲ್ ಟಿಕೆಟ್ ಖಾತ್ರಿಯಾಗುತ್ತದೆ. ಇದೇ ವೇಳೆ ಬಾಂಗ್ಲಾದೇಶ-ಅಫ್ಘಾನಿಸ್ಥಾನ ತಂಡಗಳೂ ಪರಸ್ಪರ ಎದುರಾಗಲಿವೆ. ಇಲ್ಲಿ ಸೋತ ತಂಡ ಕೂಟದಿಂದ ನಿರ್ಗಮಿಸಲಿದೆ.
ಲೀಗ್ ಪಂದ್ಯದಲ್ಲಿ ಭಾರತದೆದುರು ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳಲು ಪಾಕಿಸ್ಥಾನ ಹಾತೊರೆಯುತ್ತಿರುವುದರಲ್ಲಿ ಅನುಮಾನವಿಲ್ಲ. ಭಾರತದ ಕೈಯಲ್ಲಿ ಸತತ ಪಂದ್ಯಗಳಲ್ಲಿ ಸೋಲುವುದನ್ನು ಅದು ಯಾವ ಕಾರಣಕ್ಕೂ ಬಯಸದು. ಪಾಕಿಸ್ಥಾನದ ಕ್ರಿಕೆಟ್ ಪ್ರತಿಷ್ಠೆಗೆ ಇದರಿಂದ ದೊಡ್ಡ ಹಾನಿಯಾಗಲಿದೆ. ಆದರೆ ಹಾಂಕಾಂಗ್ ವಿರುದ್ಧ ಪರದಾಡಿದ ಬಳಿಕ ತಪ್ಪುಗಳನ್ನು ತಿದ್ದಿಕೊಂಡು ಆಡುತ್ತಿರುವ ಟೀಮ್ ಇಂಡಿಯಾ ಹೆಚ್ಚು ಉತ್ಸಾಹದಲ್ಲಿರುವುದು ಸುಳ್ಳಲ್ಲ. ಪಾಕಿಸ್ಥಾನ ವಿರುದ್ಧ ನಡೆಯುವುದು “ಕೇವಲ ಮತ್ತೂಂದು ಪಂದ್ಯ’ ಎಂಬ ಲೆಕ್ಕಾಚಾರ ರೋಹಿತ್ ಬಳಗದ್ದು.
ರಾಹುಲ್, ಪಾಂಡೆ ಆಡುವರೇ?
ನಿಜಕ್ಕಾದರೆ ಭಾರತ ಇನ್ನೂ ಪೂರ್ಣ ಸಾಮರ್ಥ್ಯದ ತಂಡವನ್ನು ಕಣಕ್ಕಿಳಿಸಿಲ್ಲ. ಏಕದಿನ ಸ್ಪೆಷಲಿಸ್ಟ್ಗಳೇ ಆಗಿರುವ ಕೆ.ಎಲ್. ರಾಹುಲ್, ಮನೀಷ್ ಪಾಂಡೆ ಅವರೆಲ್ಲ ವೀಕ್ಷಕರಾಗಿಯೇ ಉಳಿದುಕೊಂಡಿದ್ದಾರೆ. ಈ ಸ್ಪೆಷಲಿಸ್ಟ್ಗಳ ಬದಲು ಎರಡನೇ ಕೀಪರ್ ದಿನೇಶ್ ಕಾರ್ತಿಕ್ ಆವರಿಗೆ ಸಾಲು ಸಾಲು ಅವಕಾಶ ನೀಡುತ್ತಿರುವುದು ಅರ್ಥವಾಗದ ಸಂಗತಿ. ಮುಂದಿನ ವರ್ಷದ ವಿಶ್ವಕಪ್ ಒಳಗಾಗಿ ಮಧ್ಯಮ ಕ್ರಮಾಂಕವನ್ನು ಗಟ್ಟಿಗೊಳಿಸಬೇಕೆಂಬ ಯೋಜನೆಯಲ್ಲಿರುವ ಭಾರತ, ಇದರಲ್ಲಿ ಎಡವುತ್ತಿರುವುದು ಸ್ಪಷ್ಟ. ಪಾಕ್ ವಿರುದ್ಧವಾದರೂ ರಾಹುಲ್ ಅಥವಾ ಪಾಂಡೆ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುತ್ತಾರೋ ನೋಡಬೇಕು.
ಆರಂಭಿಕರ ಸತತ ಯಶಸ್ಸು
ಈ ಪಂದ್ಯಾವಳಿಯಲ್ಲಿ ಭಾರತದ ಆರಂಭಿಕ ಜೋಡಿ ನಿರಂತರ ಯಶಸ್ಸು ಕಾಣುತ್ತ ಬಂದಿರುವುದೊಂದು ಶುಭ ಸೂಚನೆ. ಕಪ್ತಾನನ ಆಟವಾಡುತ್ತಿರುವ ರೋಹಿತ್ ಶರ್ಮ ಹಾಗೂ ಇವರಿಗೆ ಉತ್ತಮ ಸಾಥ್ ಕೊಡುತ್ತಿರುವ ಶಿಖರ್ ಧವನ್ ಗಟ್ಟಿಮುಟ್ಟಾದ ಅಡಿಪಾಯ ನಿರ್ಮಿಸುತ್ತ ಬಂದಿದ್ದಾರೆ. ಖಾಯಂ ಕಪ್ತಾನ ವಿರಾಟ್ ಕೊಹ್ಲಿ ಗೈರಲ್ಲಿ ಇಂಥದೊಂದು ಸಶಕ್ತ ಆರಂಭದ ಅಗತ್ಯವೂ ಭಾರತಕ್ಕಿತ್ತು.
ಓಪನರ್ಗಳ ಬಳಿಕ ಗಮನ ಸೆಳೆದದ್ದು ಭಾರತದ ಬೌಲಿಂಗ್. ಹಾಂಕಾಂಗ್ ಆರಂಭಿಕರಿಗೆ 174 ರನ್ ಬಿಟ್ಟುಕೊಟ್ಟ ಬಳಿಕ ಬೌಲಿಂಗ್ ಪಡೆ ದೊಡ್ಡದೊಂದು ಪಾಠ ಕಲಿತಂತಿದೆ. ಭುವನೇಶ್ವರ್, ಬುಮ್ರಾ ಪೇಸ್ ಬೌಲಿಂಗ್ನಲ್ಲಿ ಯಶಸ್ಸು ಕಾಣುತ್ತಿದ್ದರೆ, ಸ್ಪಿನ್ ವಿಭಾಗದಲ್ಲಿ ಪಾರ್ಟ್ಟೈಮರ್ಗಳೇ ಮಿಂಚುತ್ತಿದ್ದಾರೆ. ಪಾಕ್ ಎದುರಿನ ಲೀಗ್ ಪಂದ್ಯದಲ್ಲಿ ಕೇದಾರ್ ಜಾಧವ್, ಬಾಂಗ್ಲಾ ವಿರುದ್ಧ ರವೀಂದ್ರ ಜಡೇಜ ನಿರೀಕ್ಷೆಗೂ ಮೀರಿದ ಯಶಸ್ಸು ಸಾಧಿಸಿದ್ದಾರೆ. ಇವರೆದುರು ಸ್ಪೆಷಲಿಸ್ಟ್ ಸ್ಪಿನ್ನರ್ಗಳಾದ ಕುಲದೀಪ್ ಯಾದವ್-ಯಜುವೇಂದ್ರ ಚಾಹಲ್ ಮಂಕಾಗಿರುವುದು ಸುಳ್ಳಲ್ಲ! ರವಿವಾರ ಇವರಲ್ಲೊಬ್ಬರು ಹೊರಗುಳಿಯಲೂಬಹುದು.
ಸ್ಫೂರ್ತಿಯಾಗಬೇಕಿದೆ ಮಲಿಕ್
ಭಾರತದ ವಿರುದ್ಧ ಮೇಲುಗೈ ಸಾಧಿಸಬೇಕಾದರೆ ಪಾಕಿಸ್ಥಾನದ ಬ್ಯಾಟಿಂಗ್ನಲ್ಲಿ ದೊಡ್ಡ ಮಟ್ಟದ ಸುಧಾರಣೆ ಆಗಬೇಕಿದೆ. ಆರಂಭಕಾರ ಫಕಾರ್ ಜಮಾನ್ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಬಾರತದ ವಿರುದ್ಧ ಶತಕ ಬಾರಿಸಿದ್ದ ಫಕಾರ್ ಜಮಾನ್ ಈಗಾಗಲೇ ಎರಡು ಸೊನ್ನೆ ಸುತ್ತಿರುವುದು ಪಾಕ್ ಪಾಲಿನ ಆತಂಕದ ಸಂಗತಿಯಾಗಿದೆ. ಇಮಾಮ್, ಬಾಬರ್ ಮೇಲೆ ಹೆಚ್ಚಿನ ಬ್ಯಾಟಿಂಗ್ ಭಾರ ಬಿದ್ದಿದೆ. ನಾಯಕ ಸಫìರಾಜ್ ಕೂಡ ವಿಫಲರಾಗುತ್ತಿದ್ದಾರೆ.
ಮೇಲ್ನೋಟಕ್ಕೆ ಬೌಲಿಂಗ್ ಘಾತಕವಾದರೂ ಈವರೆಗೆ ಇದು ಸಾಬೀತಾಗಿಲ್ಲ. ಒಟ್ಟಾರೆ, ತಂಡಕ್ಕೆ ಅನುಭವಿ ಶೋಯಿಬ್ ಮಲಿಕ್ ಅವರೇ ಸ್ಫೂರ್ತಿ ಆಗಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ
IPL; ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ
IPL; ಆಸ್ಟ್ರೇಲಿಯನ್ ಆಲ್ರೌಂಡರ್ ಮಾರ್ಷ್ ಔಟ್
IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್ ನೀಡಿದ ಆರ್ಸಿಬಿ!
IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ
MUST WATCH
ಹೊಸ ಸೇರ್ಪಡೆ
Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ