ಗೆಲುವಿಗಾಗಿ ಮುಂಬೈ ಇಂಡಿಯನ್ಸ್-ಕೋಲ್ಕತಾ ನೈಟ್ರೈಡರ್ ಪ್ರಯತ್ನ
Team Udayavani, May 9, 2022, 6:25 AM IST
ನವಿ ಮುಂಬೈ: ಕೋಲ್ಕತಾ ನೈಟ್ರೈಡರ್ ತಂಡವು ಸೋಮವಾರದ ಐಪಿಎಲ್ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.
ಗೆಲುವು ಸಾಧಿಸುವ ಉದ್ದೇಶದಿಂದ ಎರಡೂ ತಂಡಗಳು ಹೋರಾಡಲಿದೆ. ವೈಯಕ್ತಿಕ ಸಾಧನೆಗಾಗಿ ಆಟಗಾರರು ಪೈಪೋಟಿ ನಡೆಸುವ ಸಾಧ್ಯತೆಯಿದೆ.
ಅಗ್ರ ಕ್ರಮಾಂಕದಲ್ಲಿ ಬಹಳಷ್ಟು ಪ್ರಯೋಗ ನಡೆಸಿದರೂ ಯಾವುದೇ ಜೋಡಿ ಉತ್ತಮ ಜತೆಯಾಟ ನೀಡಲು ವಿಫಲವಾಗಿದೆ. ಇದರಿಂದಾಗಿ ಕೆಕೆಆರ್ ತಂಡವು ಈ ಋತುವಿನಲ್ಲಿ ನೀರಸ ಪ್ರದರ್ಶನ ನೀಡುತ್ತಿದೆ. ಶನಿವಾರ ನಡೆದ ಪಂದ್ಯದಲ್ಲಿ ಕೆಕೆಆರ್ ಕೇವಲ 101 ರನ್ನಿಗೆ ಆಲೌಟಾಗಿರುವುದು ತಂಡದ ಬ್ಯಾಟಿಂಗ್ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಈ ಪಂದ್ಯದಲ್ಲಿ 75 ರನ್ನುಗಳ ಜಯ ಸಾಧಿಸಿದ ಲಕ್ನೋ ತಂಡವು ಸದ್ಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಮುಂಬೈ ತಂಡ ಈ ಹಿಂದಿನ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ 5 ರನ್ನುಗಳ ಗೆಲುವು ಸಾಧಿಸಿತ್ತು. ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಗುಜರಾತ್ ತಂಡವನ್ನು ಸೋಲಿಸಿದ್ದರಿಂದ ಮುಂಬೈ ಭಾರೀ ಉತ್ಸಾಹದಲ್ಲಿದೆ. ರೋಹಿತ್ ಶಮರ ನೇತೃತ್ವದ ಮುಂಬೈ ತಂಡವು ಆಡಿದ 10 ಪಂದ್ಯಗಳಿಂದ ಕೇವಲ ನಾಲ್ಕಂಕ ಗಳಿಸಿದ್ದರಿಂದ ಈಗಾಗಲೇ ಪ್ಲೇ ಆಫ್ ನಿಂದ ಹೊರಬಿದ್ದಿದೆ. ಒಂದು ವೇಳೆ ಇನ್ನುಳಿದ ಪಂದ್ಯಗಳಲ್ಲಿ ಗೆದ್ದರೂ ಅದು ಪ್ಲೇ ಆಫ್ ಗೆ ತೇರ್ಗಡೆಯಾಗಲು ಸಾಧ್ಯವಾಗುವುದಿಲ್ಲ. ಐದು ಬಾರಿಯ ಚಾಂಪಿಯನ್ ಆಗಿರುವ ಮುಂಬೈ ಇನ್ನುಳಿದ ಪಂದ್ಯಗಳಲ್ಲಿ ಗೆಲ್ಲುವ ಉದ್ದೇಶದಿಂದ ಆಡಬಹುದು.
ಎರಡು ಬಾರಿಯ ಚಾಂಪಿಯನ್ ಕೆಕೆಆರ್ ತಂಡವು ಹೊಸ ನಾಯಕ ಶ್ರೇಯಸ್ ಅಯ್ಯರ್ನಡಿ ಆಡುತ್ತಿದ್ದರೂ ಬ್ಯಾಟಿಂಗ್ ವೈಫಲ್ಯ ಕಾಣುತ್ತಿದೆ. ಲಕ್ನೋ ವಿರುದ್ಧ 75 ರನ್ನುಗಳ ಸೋಲಿನಿಂದಾಗಿ ಕೆಕೆಆರ್ ಇದೀಗ ಆಡಿದ 11 ಪಂದ್ಯಗಳಿಂದ ಕೇವಲ ಎಂಟಂಕ ಹೊಂದಿದೆ. ಇನ್ನು ತಂಡಕ್ಕೆ ಆಡಲು ಮೂರು ಪಂದ್ಯಗಳು ಬಾಕಿ ಉಳಿದಿದ್ದು ಗರಿಷ್ಠ 14 ಅಂಕ ಗಳಿಸಬಹುದು. ಹೀಗಾಗಿ ತಂಡ ನಾಲ್ಕನೇ ಸ್ಥಾನ ಕೂಡ ಪಡೆಯುವುದು ಅನುಮಾನವೆಂದು ಹೇಳಬಹುದು.
ಈ ಐಪಿಎಲ್ ಮುಕ್ತಾಯದ ಹಂತದಲ್ಲಿರುವ ಕಾರಣ ಎರಡೂ ತಂಡಗಳು ಮುಂದಿನ ಐಪಿಎಲ್ ಬಗ್ಗೆ ತನ್ನ ಯೋಜನೆ ರೂಪಿಸುವ ಸಾಧ್ಯತೆಯಿದೆ. ಇದರ ಜತೆ ತಮ್ಮ ನಿರಾಶಾದಾಯಕ ನಿರ್ವಹಣೆಯನ್ನು ಗೆಲುವಿನ ಮೂಲಕ ಅಂತ್ಯಗೊಳಿಸುವ ಇರಾದೆಯೂ ತಂಡದ ಮೇಲೆ ಇರಲಿದೆ. ಕೆಕೆಆರ್ ವಿರುದ್ಧ ಇಷ್ಟರವರೆಗಿನ 30 ಮುಖಾಮುಖಿ ಯಲ್ಲಿ ಮುಂಬೈ 22 ಪಂದ್ಯಗಳಲ್ಲಿ ಗೆದ್ದಿರುವುದು ತಂಡದ ಉತ್ಸಾಹವನ್ನು ಹೆಚ್ಚಿಸಿದೆ. 8ರಲ್ಲಿ ಮಾತ್ರ ಸೋತಿದೆ.
ರೋಹಿತ್ 5 ಸಾವಿರ ರನ್ ?
ನಾಯಕ ರೋಹಿತ್ ಮತ್ತು ಇಶಾನ್ ಕಿಶನ್ ಉತ್ತಮ ಫಾರ್ಮ್ ನಲ್ಲಿರುವುದು ಮುಂಬೈಯ ಪ್ಲಸ್ ಪಾಯಿಂಟ್ ಆಗಿದೆ. ಗುಜರಾತ್ ವಿರುದ್ಧ ಭರ್ಜರಿ ಆಟದ ಪ್ರದರ್ಶನ ನೀಡಿದ್ದ ಅವರಿಬ್ಬರು ಕೆಕೆಆರ್ ವಿರುದ್ಧವೂ ಅದೇ ಆಟ ಮುಂದುವರಿಸುವ ನಿರೀಕ್ಷೆಯಿದೆ. ರೋಹಿತ್ ಐಪಿಎಲ್ನಲ್ಲಿ ಮುಂಬೈ ಪರ 5 ಸಾವಿರ ರನ್ ಪೂರ್ತಿಗೊಳಿಸಲು ಇನ್ನು 88 ರನ್ನುಗಳ ಆವಶ್ಯಕತೆಯಿದೆ. ಇದನ್ನು ಅವರು ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಪೂರ್ತಿಗೊಳಿಸುವ ಸಾಧ್ಯತೆಯಿದೆ.
ರೋಹಿತ್, ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಅವರು ಪವರ್ಪ್ಲೇಯಲ್ಲಿ ಅಮೋಘ ಆಟ ಆಡುತ್ತಿದ್ದರೆ ಕೆಕೆಆರ್ ತಂಡವು ಆರಂಭದ ಆರು ಓವರ್ಗಳಲ್ಲಿ ನಿರಂತರವಾಗಿ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದೆ. ಲಕ್ನೋ ವಿರುದ್ಧ ಸೋಲಿಗೆ ಬ್ಯಾಟಿಂಗ್ ವೈಫಲ್ಯವೇ ಕಾರಣವೆಂದು ಮುಖ್ಯ ಕೋಚ್ ಬ್ರೆಂಡನ್ ಮೆಕಲಮ್ ಹೇಳಿದ್ದಾರೆ. ಕೆಕೆಆರ್ನ ನಿರ್ವಹಣೆ ಉತ್ತಮವಾಗಬೇಕಾದರೆ ಪವರ್ಪ್ಲೇಯಲ್ಲಿ ಆಟಗಾರರು ಆಕ್ರಮಣಕಾರಿಯಾಗಿ ಆಡುವ ಅಗತ್ಯವಿದೆ.