ಟಿಟಿ: ನಿರೀಕ್ಷೆಗೂ ಮೀರಿ ಹರಿದು ಬಂದ ಆರ್ಥಿಕ ನೆರವು
Team Udayavani, Jul 2, 2020, 5:24 AM IST
ಹೊಸದಿಲ್ಲಿ: ಕೋವಿಡ್-19 ಸಂತ್ರಸ್ತರಿಗಾಗಿ ನಿಧಿ ಸಂಗ್ರಹಕ್ಕೆ ಮುಂದಾಗಿರುವ ಭಾರತದ ಟಿಟಿಪಟುಗಳಾದ ಶರತ್ ಕಮಲ್ ಮತ್ತು ಜಿ. ಸಥಿಯನ್ ನಿರೀಕ್ಷೆಗೂ ಮೀರಿ 13 ಲಕ್ಷ ರೂ. ಸಂಗ್ರಹಿಸಿದ್ದಾರೆ. ಇದರಿಂದ ಸುಮಾರು 130 ಸಂತ್ರಸ್ತರಿಗೆ ಆರ್ಥಿಕ ನೆರವು ನೀಡಲು ನಿರ್ಧರಿಸಿದ್ದಾರೆ.
ಆರಂಭದಲ್ಲಿ ಇವರು 10 ಲಕ್ಷ ರೂ. ಮೊತ್ತದ ಗುರಿ ಇರಿಸಿಕೊಂಡಿದ್ದರು. ಆಗ ಸುಮಾರು 100 ಜನರಿಗೆ ನೆರವು ನೀಡುವ ಯೋಜನೆ ಹಾಕಿಕೊಂಡಿದ್ದರು. ತೀವ್ರ ಸಂಕಟದಲ್ಲಿರುವ ಟಿಟಿ ಆಟಗಾರರು, ತರಬೇತುದಾರರು, ಅಂಪಾಯರ್ಗಳು ಮತ್ತು ಅವರ ಕುಟುಂಬದವರಿಗೆ ಈ ನೆರವು ಒದಗಿಸಲಾಗುವುದು. ಪ್ರತಿಯೊಬ್ಬರ ಖಾತೆಗೆ 10 ಸಾವಿರ ರೂ. ಜಮೆ ಮಾಡಲು ನಿರ್ಧರಿಸಲಾಗಿದೆ.
ಟಿಟಿಪಟುಗಳ ಈ ಅಭಿಯಾನದಲ್ಲಿ ಅಲ್ಟಿಮೇಟ್ ಟೇಬಲ್ ಟೆನಿಸ್ ಲೀಗ್ (ಯುಟಿಟಿ), ವಿಟಾ ದಾನಿ ಮತ್ತು ನೀರಜ್ ಬಜಾಜ್ ಕೂಡ ಧನಸಹಾಯ ಮಾಡಿದರು. ಎಲ್ಲರಿಗೂ ಶರತ್ ಕಮಲ್ ಕೃತಜ್ಞತೆ ಸಲ್ಲಿಸಿದ್ದಾರೆ.