ಅ.19 ಫೈನಲ್ ಹೊಡೆದಾಟ: ಸೇಡಿಗೆ ಸೇಡು ತೀರಿಸಿಕೊಂಡ್ವಿ; ಬಾಂಗ್ಲಾ ಕ್ರಿಕೆಟಿಗನ ಸಮರ್ಥನೆ
Team Udayavani, Feb 17, 2020, 10:07 AM IST
ಢಾಕಾ: ಭಾರತ -ಬಾಂಗ್ಲಾದೇಶ ನಡುವಿನ ಕಿರಿಯರ ವಿಶ್ವಕಪ್ ಏಕದಿನ ಕ್ರಿಕೆಟ್ ಪಂದ್ಯದ ವೇಳೆ ಇತ್ತಂಡಗಳ ಆಟಗಾರರು ಹೊಡೆದಾಟ ನಡೆಸಿದ್ದು, ಬಳಿಕ ಐಸಿಸಿಯಿಂದ ಕಠಿಣ ಶಿಕ್ಷೆಗೆ ಗುರಿಯಾಗಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಇದೀಗ ಅಂದಿನ ಘಟನೆಯನ್ನು ಬಾಂಗ್ಲಾ ತಂಡದ ಸದಸ್ಯ ಶೊರಿಫುಲ್ ಇಸ್ಲಾಂ ಸಮರ್ಥಿಸಿಕೊಂಡು ಟೀಕೆಗೆ ಗುರಿಯಾಗಿದ್ದಾರೆ.
ಶೊರಿಫುಲ್ ಇಸ್ಲಾಂ ಹೇಳಿರುವ ಪ್ರಕಾರ ಅದೊಂದು ಸೇಡಂತೆ, ಭಾರತಕ್ಕೂ ಅವಮಾನವಾದರೆ ಹೇಗಿರುತ್ತದೆ ಎಂದು ತಿಳಿಸಿಕೊಡಲು ಮಾಡಿದ್ದಂತೆ. ಈ ಬಗ್ಗೆ ಸ್ವತಃ ಶೊರಿಫುಲ್ ಇಸ್ಲಾಂ ಹೇಳಿದ್ದು ಹೀಗೆ ನೋಡಿ, “2018ರಲ್ಲಿ ಏಷ್ಯಾ ಕಪ್ ಸೆಮಿಫೈನಲ್, 2019 ಏಷ್ಯಾ ಕಪ್ ಫೈನಲ್ನಲ್ಲಿ ನಾವು ಭಾರತಕ್ಕೆ ಸೋತಿದ್ವಿ. ಆ ಸೋಲಿನನಂತರ ನಮ್ಮನ್ನು ಭಾರತ ಆಟಗಾರರು ನಮ್ಮದೇ ನೆಲದಲ್ಲಿ ಅಣಕಿಸಿದ್ದರು. ಆಗ ನಾವೆಲ್ಲ ತುಂಬಾ ಸಮಾಧಾನದಿಂದ ಇದ್ದೆವು.
ಇದಕ್ಕೆ ಸೇಡು ತೀರಿಸಿಕೊಳ್ಳಲು ಒಳ್ಳೆಯ ಸಮಯ ಕಾಯುತ್ತಿದ್ವಿ. ಹಿಯ್ಯಾಳಿಸಿದಾಗ ಆಗುವ ನೋವನ್ನು ಅವರಿಗೂ ಗೊತ್ತುಪಡಿಸುವುದು ನಮ್ಮ ಉದ್ದೇಶವಾಗಿತ್ತು. ವಿಶ್ವಕಪ್ ಫೈನಲ್ನಲಿ ಭಾರತೀಯರಿಗೆ ಉತ್ತರಿಸಲು ಒಳ್ಳೆಯ ಅವಕಾಶವೂ ಸಿಕ್ಕಿತ್ತು. ಅವರದ್ದೇ ಶೈಲಿಯಲ್ಲಿ ನಾವು ಪಂದ್ಯದ ನಂತರ ಉತ್ತರಿಸಿ ಸೇಡು ತೀರಿಸಿದೆವು’ ಎಂದು ಘಟನೆಯನ್ನು ಶೊರಿಫುಲ್ ಸಮರ್ಥಿಸಿಕೊಂಡರು. ಜಂಟಲ್ ಮ್ಯಾನ್ ಆಟ ಎಂದು ಕರೆಯಲ್ಪಡುವ ಕ್ರಿಕೆಟ್ ನಲ್ಲಿ ಬಾಂಗ್ಲಾ ಆಟಗಾರರು ನಡೆದುಕೊಂಡ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.