ಯು-19 ವಿಶ್ವಕಪ್ ಫೈನಲ್ ಪ್ರಕರಣ: ಐವರು ಕ್ರಿಕೆಟಿಗರ ವಿರುದ್ಧ ಐಸಿಸಿ ಶಿಸ್ತು ಕ್ರಮ
Team Udayavani, Feb 12, 2020, 7:15 AM IST
ದುಬಾೖ: ಅಂಡರ್-19 ವಿಶ್ವಕಪ್ ಫೈನಲ್ ಬಳಿಕ ಎರಡೂ ತಂಡಗಳ ಆಟಗಾರರ ನಡುವೆ ಚಕಮಕಿ, ತಳ್ಳಾಟ ಪ್ರಕರಣವನ್ನು ಐಸಿಸಿ ಗಂಭೀರವಾಗಿ ಪರಿಗಣಿಸಿದೆ. ಇತ್ತಂಡಗಳ ಐವರು ಆಟಗಾರರಿಗೆ ನಿಷೇಧ ಅಂಕ ಹೇರಿದೆ. ಭಾರತದ ಆಕಾಶ್ ಸಿಂಗ್, ರವಿ ಬಿಶ್ನೋಯ್, ಬಾಂಗ್ಲಾದ ತೌಹಿದ್ ಹೃದಯ್, ಶಮೀಮ್ ಹುಸೇನ್, ರಕಿಬುಲ್ ಹಸನ್ಗೆ ದಂಡಾಂಕ ವಿಧಿಸಲಾಗಿದೆ. ಅಷ್ಟೂ ಆಟಗಾರರು ಐಸಿಸಿ ವಿಧಿ 2.21 ಅನ್ನು ಉಲ್ಲಂ ಸಿದ ಆರೋಪಕ್ಕೊಳಗಾಗಿದ್ದಾರೆ.
ಐಸಿಸಿ ನೀಡಿದ ಶಿಕ್ಷೆಯನ್ನು ಎಲ್ಲ ಆಟಗಾರರು ಸ್ವೀಕರಿಸಿದ್ದಾರೆ. ಭಾರತದ ಆಕಾಶ್ ಸಿಂಗ್ 8, ರವಿ ಬಿಶ್ನೋಯ್ಗೆ 7 ನಿಷೇಧಾಂಕ, ಬಾಂಗ್ಲಾದ ತೌಹಿದ್ಗೆ 10, ಹೊಸೇನ್ಗೆ 8, ರಕಿಬುಲ್ಗೆ 5 ನಿಷೇಧಾಂಕ ವಿಧಿಸಲಾಗಿದೆ. ಈ ನಿಷೇಧಾಂಕ 2 ವರ್ಷ ಚಾಲ್ತಿಯಲ್ಲಿರಲಿದೆ. ಮುಂದೆ ಇಂಥ ಅಶಿಸ್ತನ್ನು ಪುನರಾವರ್ತಿಸಿದರೆ ಆಗ ನಿಷೇಧ ಶಿಕ್ಷೆ ಎದುರಾಗಬಹುದು. ಒಂದು ವೇಳೆ ಆಟಗಾರರು ನೇರವಾಗಿ ಹಿರಿಯರ ತಂಡ ಪ್ರವೇಶಿಸಿದರೆ “ಸಂಭಾವ್ಯ ನಿಷೇಧ’ದಿಂದ ಪಾರಾಗಲಿದ್ದಾರೆ.
2.21 ವಿಧಿ ಏನು ಹೇಳುತ್ತದೆ?
ಆಟಗಾರರಲ್ಲಿ ಶಿಸ್ತನ್ನು ಕಾಪಾಡಲು ಐಸಿಸಿ ರೂಪಿಸಿದ ನೀತಿಸಂಹಿತೆಯ ವಿಧಿಗಳಲ್ಲಿ ಇದೂ ಒಂದು. ಕ್ರೀಡೆಗೆ ಅಗೌರವ ತಂದ ಪ್ರಕರಣಗಳ ವೇಳೆ ಇದು ಅನ್ವಯವಾಗುತ್ತದೆ. ಇದರಡಿ ಸಾರ್ವಜನಿಕ ತಪ್ಪುವರ್ತನೆ, ಕ್ರೀಡೆಗೆ ಅಗೌರವ ತರುವ ಅಸಂಬದ್ಧ ಹೇಳಿಕೆಗಳು ಬರುತ್ತವೆ. 2.21ರಡಿ ಹೇರಿದ ಒಂದೊಂದು ನಿಷೇಧ ಅಂಕ, ಒಂದು ಏಕದಿನ ಅಥವಾ ಟಿ20 ಪಂದ್ಯದ ನಿಷೇಧ ಹೇರಿದ್ದಕ್ಕೆ ಸಮನಾಗಿರುತ್ತದೆ.