ನಿಮ್ಮಿಬ್ಬರಲ್ಲಿ ನಾನು ಜಗತ್ತನ್ನೇ ಕಂಡಿದ್ದೆ : ಹೃದಯ ಕರಗುವ ವೇದಾ ಸಂದೇಶ
Team Udayavani, May 11, 2021, 6:55 AM IST
ಚಿಕ್ಕಮಗಳೂರು: ಮಹಾಮಾರಿ ಕೊರೊನಾದಿಂದಾಗಿ ಇತ್ತೀಚೆಗೆ ತನ್ನ ಪ್ರೀತಿಯ ಅಮ್ಮ ಹಾಗೂ ಅಕ್ಕನನ್ನು ಕಳೆದುಕೊಂಡ ಕರ್ನಾಟಕದ ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಹೃದಯ ಕರಗುವ ಸಂದೇಶವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. “ನಿಮ್ಮಿಬ್ಬರಲ್ಲಿ ನಾನು ಜಗತ್ತನ್ನೇ ಕಂಡಿದ್ದೆ’ ಎಂದು ಬಹಳ ದುಃಖದಿಂದ ಹೇಳಿಕೊಂಡಿದ್ದಾರೆ.
“ನೀವಿಬ್ಬರೂ ಮನೆಯ ಅಡಿಪಾಯದಂತೆ ಇದ್ದಿರಿ. ನಮ್ಮ ಜತೆಗೆ ನೀವು ಇರುವುದಿಲ್ಲ ಎಂದು ನಾನು ಯಾವತ್ತೂ ಅಂದುಕೊಂಡಿರಲಿಲ್ಲ. ನನ್ನನ್ನು ಬಹಳ ಧೈರ್ಯವಂತಳಾಗಿ ಬೆಳೆಸಿದಿರಿ. ಬದುಕಿನ ಪ್ರತಿಯೊಂದು ಸವಾಲನ್ನೂ ನಿಭಾಯಿಸಲು ಹೇಳಿಕೊಟ್ಟಿರಿ. ಅಮ್ಮಾ, ನೀವು ಅತೀ ಸುಂದರ. ನಿಸ್ವಾರ್ಥ ಸೇವೆ ಸಲ್ಲಿಸುವ ತಾಯಿ ಆಗಿದ್ದಿರಿ’ ಎಂದು ಅಮ್ಮನ ನೆನಪನ್ನು ಸ್ಮರಿಸಿಕೊಂಡಿದ್ದಾರೆ.
“ಅಕ್ಕಾ, ನನಗೆ ಗೊತ್ತು, ನಾನು ನಿನ್ನ ನೆಚ್ಚಿನ ತಂಗಿಯಾಗಿದ್ದೆ. ಬಾಲ್ಯದ ಜಗಳದ ಆ ನೆನಪು ಮರೆಯುವಂಥದ್ದಲ್ಲ. ಕೊನೆಯ ಕ್ಷಣದ ವರೆಗೂ ನೀನು ತೋರಿದ ಆತ್ಮಸ್ಥೈರ್ಯವೇ ನನಗೆ ಪ್ರೇರಣೆ’ ಎಂದು ಅಕ್ಕ ವತ್ಸಲಾ ಅವರನ್ನು ನೆನಪಿಸಿಕೊಂಡಿದ್ದಾರೆ.
“ನಿಮ್ಮೊಂದಿಗೆ ಕಳೆದ ಕ್ಷಣವೆಲ್ಲವೂ ಅತ್ಯಂತ ಖುಷಿಯದ್ದಾಗಿತ್ತು. ಅದಿನ್ನು ಬಾರದು. ನೀವಿಲ್ಲದ ನಮ್ಮ ಬದುಕು ಹೇಗೆ ಸಾಗುತ್ತದೋ ತಿಳಿಯದು’ ಎಂದು ವೇದಾ ಕೃಷ್ಣಮೂರ್ತಿ ತೀರಾ ನೋವಿನಿಂದ ಹೇಳಿದ್ದಾರೆ.
ಅಭಿಮಾನಿಗಳಿಂದ ಸಾಂತ್ವನ
ಅಭಿಮಾನಿಗಳು, ಫೇಸ್ ಬುಕ್ ಗೆಳೆಯರೆಲ್ಲ ವೇದಾ ಕುಟುಂಬಕ್ಕೆ ಧೈರ್ಯ-ಸಾಂತ್ವನ ತುಂಬಿದ್ದು, ಈ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಹಾರೈಸಿದ್ದಾರೆ.