ಚೊಚ್ಚಲ ಬಾರಿ ಫೈನಲಿಗೇರುವ ಸನಿಹದಲ್ಲಿ ವಿದರ್ಭ
Team Udayavani, Dec 21, 2017, 8:27 AM IST
ಕೋಲ್ಕತಾ: ದ್ವಿತೀಯ ಇನ್ನಿಂಗ್ಸ್ನಲ್ಲಿ ಘೋರ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಕರ್ನಾಟಕ ತಂಡವು ವಿದರ್ಭ ತಂಡದೆದುರಿನ ರಣಜಿ ಟ್ರೋಫಿ ಕ್ರಿಕೆಟ್ ಕೂಟದ ಸೆಮಿಫೈನಲ್ ಪಂದ್ಯದಲ್ಲಿ ಸೋಲಿನ ಸುಳಿಗೆ ಸಿಲುಕಿದೆ.
ಲೀಗ್ ಮತ್ತು ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಅಮೋಘ ನಿರ್ವಹಣೆ ದಾಖಲಿಸಿದ್ದ ಕರ್ನಾಟಕ ತಂಡವು ಸೆಮಿಫೈನಲ್ನಲ್ಲಿಯೂ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿ ಫೈನಲಿಗೇರುವ ಸಾಧ್ಯತೆಯನ್ನು ಹೆಚ್ಚಿಸಿಕೊಂಡಿತ್ತು. ಆದರೆ ಪಂದ್ಯದ ನಾಲ್ಕನೇ ದಿನ ವಿದರ್ಭದ ರಜನೀಶ್ ಗುರ್ಬಾನಿ ಮಾರಕ ದಾಳಿ ಸಂಘಟಿಸಿ ಪಂದ್ಯದ ಗತಿಯನ್ನೇ ಬದಲಿಸಿದ್ದರಿಂದ ಕರ್ನಾಟಕ ಸೋಲಿನತ್ತ ಮುಖ ಮಾಡಿದೆ.
ಗೆಲ್ಲಲು 198 ರನ್ ಗಳಿಸುವ ಅವಕಾಶ ಪಡೆದ ಕರ್ನಾಟಕ ತಂಡವು ನಾಲ್ಕನೇ ದಿನದಾಟದ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡಿದ್ದು 111 ರನ್ ಗಳಿಸಿದೆ. 19 ರನ್ ಗಳಿಸಿದ ನಾಯಕ ವಿನಯ್ ಕುಮಾರ್ ಮತ್ತು ಶ್ರೇಯಸ್ ಗೋಪಾಲ್ (1 ಬ್ಯಾಟಿಂಗ್) ಕ್ರೀಸ್ನಲ್ಲಿದ್ದಾರೆ. ಅಂತಿಮ ದಿನದಾಟದಲ್ಲಿ ಕರ್ನಾಟಕ ಗೆಲ್ಲಲು ಇನ್ನೂ 87 ರನ್ ಗಳಿಸಬೇಕಾಗಿದೆ. ವಿನಯ್ ಮತ್ತು ಗೋಪಾಲ್ ಛಲದ ಬ್ಯಾಟಿಂಗ್ ಪ್ರದರ್ಶಿಸಿದರೆ ಕರ್ನಾಟಕ ಗೆಲ್ಲುವ ಸಾಧ್ಯತೆಯಿದೆ.
ಈ ಮೊದಲು 4 ವಿಕೆಟಿಗೆ 195 ರನ್ನುಗಳಿಂದ ದಿನದಾಟ ಆರಂಭಿಸಿದ ವಿದರ್ಭ ತಂಡವು ಆದಿತ್ಯ ಸರ್ವಟೆ ಅವರ ಅರ್ಧಶತಕದಿಂದಾಗಿ 313 ರನ್ ಗಳಿಸಿ ಆಲೌಟಾಯಿತು. ಎಡಗೈ ಸ್ಪಿನ್ನರ್ ಆಗಿರುವ ಸರ್ವಟೆ 55 ರನ್ ಸಿಡಿಸಿದ್ದರಿಂದ ವಿದರ್ಭ ಇದೀಗ ಗೆಲುವಿನ ಕನಸು ಕಾಣುತ್ತಿದೆ. 92 ಎಸೆತ ಎದುರಿಸಿದ್ದ ಅವರು 5 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿದ್ದರು.
ಮೂರನೇ ದಿನ 71 ರನ್ ಗಳಿಸಿದ್ದ ಗಣೇಶ್ ಸತೀಶ್ 10 ರನ್ ಸೇರಿಸಿ ಮಿಥುನ್ಗೆ ವಿಕೆಟ್ ಒಪ್ಪಿಸಿದರು. ವಿನಯ್ ಕುಮಾರ್ ಮತ್ತು ಆಲ್ರೌಂಡರ್ ಸ್ಟುವರ್ಟ್ ಬಿನ್ನಿ ತಲಾ ಮೂರು ವಿಕೆಟ್ ಪಡೆದರೆ ಶ್ರೀನಾಥ್ ಅರವಿಂದ್ 2 ವಿಕೆಟ್ ಕಿತ್ತರು.
198 ರನ್ ಗುರಿ
ಗೆಲ್ಲಲು 198 ರನ್ ಗಳಿಸುವ ಗುರಿ ಪಡೆದ ಕರ್ನಾಟಕ ತಂಡವು ಶೋಚನೀಯ ಆರಂಭ ಪಡೆಯಿತು. ಈ ಹಿಂದಿನ ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಮಯಾಂಕ್ ಅಗರ್ವಾಲ್ ದ್ವಿತೀಯ ಇನ್ನಿಂಗ್ಸ್ನಲ್ಲೂ ಬೇಗನೇ ಔಟಾದರು. ಉಮೇಶ್ ಯಾದವ್ಗೆ ರಿಟರ್ನ್ ಕ್ಯಾಚ್ ನೀಡಿದ ಅಗರ್ವಾಲ್ ನಿರಾಶೆ ಮೂಡಿಸಿದರು. ಸಮರ್ಥ್ ಮತ್ತು ನಿಶ್ಚಲ್ 5 ರನ್ ಅಂತರದಲ್ಲಿ ಪೆವಿಲಿಯನ್ ಸೇರಿಕೊಂಡರು. ಮೊದಲ ಇನ್ನಿಂಗ್ಸ್ನಲ್ಲಿ ಶತಕ ಸಿಡಿಸಿ ಮುನ್ನಡೆ ಸಾಧಿಸಲು ನೆರವಾಗಿದ್ದ ಕರುಣ್ ನಾಯರ್ ಔಟಾಗಿ ರುವುದು ಕರ್ನಾಟಕಕ್ಕೆ ದೊಡ್ಡ ಹೊಡೆತವಾಗಿದೆ. 41 ಎಸೆತ ಎದುರಿಸಿದ್ದ ಅವರು 30 ರನ್ ಹೊಡೆದಿದ್ದರು. ಸಿಎಂ ಗೌತಮ್ ಮತ್ತು ಸ್ಟುವರ್ಟ್ ಬಿನ್ನಿ ಅಂತಿಮ ಅವಧಿಯ ಆಟದ ವೇಳೆ ಔಟಾದ ಕಾರಣ ಕರ್ನಾಟಕ ಕಳೆದ ಐದು ವರ್ಷಗಳಲ್ಲಿ ಮೂರನೇ ಬಾರಿ ಫೈನಲಿಗೇರುವ ಸಾಧ್ಯತೆ ಕಠಿನವಾಗಿದೆ. ವಿನಯ್ ಮತ್ತು ಗೋಪಾಲ್ ಅವರ ಆಟದ ಮೇಲೆ ಕರ್ನಾಟಕದ ಫೈನಲ್ ನಿರೀಕ್ಷೆ ಉಳಿದಿದೆ.
ಮಾರಕ ದಾಳಿ ಸಂಘಟಿಸಿದ ರಜನೀಶ್ ಗುರ್ಬಾನಿ ತನ್ನ 15 ಓವರ್ಗಳ ದಾಳಿಯಲ್ಲಿ 35 ರನ್ನಿಗೆ 4 ವಿಕೆಟ್ ಉರುಳಿಸಿದರೆ ನೆರಾಲ್ 2 ವಿಕೆಟ್ ಪಡೆದಿದ್ದಾರೆ. ಗುರ್ಬಾನಿ ಮೊದಲ ಇನ್ನಿಂಗ್ಸ್ನಲ್ಲಿ 94 ರನ್ನಿಗೆ 5 ವಿಕೆಟ್ ಕಿತ್ತು ಮಿಂಚಿದ್ದರು.
ಸ್ಕೋರ್ಪಟ್ಟಿ
ವಿದರ್ಭ ಪ್ರಥಮ ಇನ್ನಿಂಗ್ಸ್ 184
ಕರ್ನಾಟಕ ಪ್ರಥಮ ಇನ್ನಿಂಗ್ಸ್ 301
ವಿದರ್ಭ ದ್ವಿತೀಯ ಇನ್ನಿಂಗ್ಸ್
(ಮಂಗಳವಾರ 4 ವಿಕೆಟಿಗೆ 195)
ಗಣೇಶ್ ಸತೀಶ್ ಸಿ ಅರವಿಂದ್ ಬಿ ಮಿಥುನ್ 81
ಅಕ್ಷಯ್ ವಾಡ್ಕರ್ ಸಿ ನಾಯರ್ ಬಿ ಬಿನ್ನಿ 28
ಆದಿತ್ಯ ಸರ್ವಟೆ ಎಲ್ಬಿಡಬ್ಲ್ಯು ವಿನಯ್ 55
ಅಕ್ಷಯ್ ವಖಾರೆ ಸಿ ಸಮರ್ಥ್ ಬಿ ಬಿನ್ನಿ 0
ಸಿದ್ಧೇಶ್ ನೆರಾಲ್ ಸಿ ಅಗರ್ವಾಲ್ ಬಿ ವಿನಯ್ 12
ಉಮೇಶ್ ಯಾದವ್ ಸಿ ವಿನಯ್ ಬಿ ಗೋಪಾಲ್ 13
ರಜನೀಶ್ ಗುರ್ಬಾನಿ ಔಟಾಗದೆ 7
ಇತರ 18
ಒಟ್ಟು (ಆಲೌಟ್) 313
ವಿಕೆಟ್ ಪತನ: 5-222, 6-224, 7-228, 8-245, 9-283
ಬೌಲಿಂಗ್:
ವಿನಯ್ ಕುಮಾರ್ 18.1-2-71-3
ಅಭಿಮನ್ಯು ಮಿಥುನ್ 18-3-47-1
ಶ್ರೀನಾಥ್ ಅರವಿಂದ್ 23-5-56-2
ಸ್ಟುವರ್ಟ್ ಬಿನ್ನಿ 14-1-74-3
ಕೃಷ್ಣಪ್ಪ ಗೌತಮ್ 3-0-12-0
ಶ್ರೇಯಸ್ ಗೋಪಾಲ್ 8-1-35-1
ಕರ್ನಾಟಕ ದ್ವಿತೀಯ ಇನ್ನಿಂಗ್ಸ್ (ಗೆಲುವಿಗೆ 198 ರನ್ ಗುರಿ)
ಆರ್. ಸಮರ್ಥ್ ಎಲ್ಬಿಡಬ್ಲ್ಯು ನೆರಾಲ್ 24
ಮಯಾಂಕ್ ಅಗರ್ವಾಲ್ ಸಿ ಮತ್ತು ಬಿ ಯಾದವ್ 3
ಡಿ. ನಿಶ್ಚಲ್ ಸಿ ವಾಡ್ಕರ್ ಬಿ ನೆರಾಲ್ 7
ಕರುಣ್ ನಾಯರ್ ಸಿ ವಾಡ್ಕರ್ ಬಿ ಗುರ್ಬಾನಿ 30
ಸಿ.ಎಂ. ಗೌತಮ್ ಸಿ ವಾಡ್ಕರ್ ಬಿ ಗುರ್ಬಾನಿ 24
ಸ್ಟುವರ್ಟ್ ಬಿನ್ನಿ ಎಲ್ಬಿಡಬ್ಲ್ಯು ಗುರ್ಬಾನಿ 0
ವಿನಯ್ ಕುಮಾರ್ ಬ್ಯಾಟಿಂಗ್ 19
ಕೆ. ಗೌತಮ್ ಎಲ್ಬಿಡಬ್ಲ್ಯು ಗುರ್ಬಾನಿ 1
ಶ್ರೇಯಸ್ ಗೋಪಾಲ್ ಬ್ಯಾಟಿಂಗ್ 1
ಇತರ: 2
ಒಟ್ಟು (7ವಿಕೆಟಿಗೆ) 111
ವಿಕೆಟ್ ಪತನ: 1-7, 2-35, 3-40, 4-81, 5-87, 6-100, 7-104
ಬೌಲಿಂಗ್:
ಉಮೇಶ್ ಯಾದವ್ 13-3-32-1
ರಜನೀಶ್ ಗುರ್ಬಾನಿ 15-3-35-4
ಆದಿತ್ಯ ಸರ್ವಟೆ 5-2-5-0
ಸಿದ್ಧೇಶ್ ನೆರಾಲ್ 10-4-37-2