ಡಿಆರ್ಎಸ್: ಅಂಪಾಯರ್ಗಳೂ ಅಸಹಾಯಕರು!
Team Udayavani, Dec 10, 2020, 4:19 PM IST
ಸಿಡ್ನಿ: ಭಾರತ-ಆಸ್ಟ್ರೇಲಿಯ ನಡುವಿನ ಅಂತಿಮ ಟಿ20 ಪಂದ್ಯದಲ್ಲಿ ಸುದ್ದಿಯಾದ ಡಿಆರ್ಎಸ್ ವಿವಾದದ ವೇಳೆ ಅಂಪಾಯರ್ಗಳೂ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು ಎಂಬುದಾಗಿ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಜತೆಗೆ, 15 ಸೆಕೆಂಡ್ಗಳ ಅವಧಿಗೂ ಮೊದಲೇ ಟೀವಿ ರೀಪ್ಲೇ ತೋರಿಸಿದ ಎಡವಟ್ಟು ಮುಂದೆ ಸಂಭವಿಸಬಾರದು ಎಂದಿದ್ದಾರೆ.
“ಇದೊಂದು ವಿಚಿತ್ರ ಲೆಗ್ ಬಿಫೋರ್ ವಿದ್ಯಮಾನವಾಗಿತ್ತು. ವೇಡ್ ಕಾಲಿಗೆ ಬಡಿದ ಆ ಎಸೆತ ಮತ್ತು ಡಿಆರ್ಎಸ್ ಕುರಿತು ಚರ್ಚಿಸುತ್ತಿರುವಾಗಲೇ ಅಂಗಳದ ಸ್ಕ್ರೀನ್ನಲ್ಲಿ ರೀಪ್ಲೇ ಮೂಡಿಬಂದಿತ್ತು. ಆಗ ನಾವು ಡಿಆರ್ಎಸ್ ತೆಗೆದುಕೊಳ್ಳಲು ತೀರ್ಮಾನಿಸಿದೆವು. ಆದರೆ ಆಗಲೇ ಟೀವಿ ರೀಪ್ಲೇಯಲ್ಲಿ ಇದರ ದೃಶ್ಯಾವಳಿ ಕಂಡುಬಂದ ಕಾರಣ ರೀವ್ಯೂ ಅಸಾಧ್ಯ ಎಂಬುದಾಗಿ ಅಂಪಾಯರ್ ಹೇಳಿದರು’ ಎಂದು ಕೊಹ್ಲಿ ಘಟನೆ ಬಗ್ಗೆ ವಿವರಿಸಿದ್ದಾರೆ.
“ಆಗ ನಾನು ಅಂಪಾಯರ್ ರಾಡ್ ಟ್ಯುಕರ್ ಜತೆ ಮಾತುಕತೆಗೆ ಇಳಿದೆ. ಇಂಥ ಸಂದರ್ಭದಲ್ಲಿ ನಾವೇನು ಮಾಡಬೇಕು ಎಂದು ಕೇಳಿದೆ. ಏನೂ ಮಾಡಲಾಗದು, ಇದು ಟೀವಿಯವರು ಮಾಡಿದ ತಪ್ಪು, ನಾವೇನೂ ಮಾಡುವಂತಿಲ್ಲ ಎಂದವರು ಅಸಹಾಯಕತೆ ವ್ಯಕ್ತಪಡಿಸಿದರು’ ಎಂಬುದಾಗಿ ಕೊಹ್ಲಿ ಹೇಳಿದರು.
“ಭಾರತ ತಂಡದ ಆಡಳಿತ ಮಂಡಳಿ ಈ ಘಟನೆ ಬಗ್ಗೆ ತನ್ನ ಅಸಮಾಧಾನ ವ್ಯಕ್ತಪಡಿಸಿದೆ. ಅಂತಾರಾಷ್ಟ್ರೀಯ ಪಂದ್ಯಗಳ ವೇಳೆ ಇಂಥ ತಪ್ಪುಗಳು ಖಂಡಿತವಾಗಿಯೂ ಸ್ವೀಕಾರಾರ್ಹವಲ್ಲ ಎಂಬ ಅಭಿಪ್ರಾಯಕ್ಕೆ ಬಂದಿದೆ. ಹಾಗೆಯೇ ಟೀವಿ ಮಂದಿ ಇಂಥ ತಪ್ಪನ್ನು ಪುನರಾವರ್ತಿಸುವುದಿಲ್ಲ ಎಂಬ ನಂಬಿಕೆ ನನಗಿದೆ’ ಎಂದು ಕೊಹ್ಲಿ ಈ ಘಟನೆಗೆ ಮಂಗಳ ಹಾಡಿದರು.