ಗೌತಮ್ ಗಂಭೀರ್ ಟೀಕೆಗೆ ವಿರಾಟ್ ಕೊಹ್ಲಿ ತಿರುಗೇಟು
Team Udayavani, Mar 24, 2019, 6:58 AM IST
ಚೆನ್ನೈ: ನಾಯಕರಾಗಿ ಒಂದೂ ಐಪಿಎಲ್ ಟ್ರೋಫಿ ಗೆಲ್ಲದಿದ್ದರೂ ಆರ್ಸಿಬಿ ನಾಯಕ ಸ್ಥಾನದಲ್ಲಿ ಉಳಿದುಕೊಳ್ಳಲು ಕೊಹ್ಲಿ ಅದೃಷ್ಟ ಮಾಡಿದ್ದರು ಎಂದು ಇತ್ತೀಚೆಗಷ್ಟೇ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಲೇವಡಿ ಮಾಡಿದ್ದರು. ಇದಕ್ಕೆ ಕೊಹ್ಲಿ ಅಷ್ಟೇ ಕಟು ಪ್ರತಿಕ್ರಿಯೆ ನೀಡಿದ್ದಾರೆ.
“ಪ್ರತಿಯೊಬ್ಬರೂ ಟ್ರೋಫಿ ಗೆಲ್ಲಬೇಕೆಂದು ಬಯಸುತ್ತಾರೆ. ನಾನೂ ಕೂಡ ಅದಕ್ಕೆ ಏನೇನು ಮಾಡಬಹುದೋ ಅಷ್ಟೆಲ್ಲವನ್ನೂ ಮಾಡುತ್ತೇನೆ. ನಾನು ಟ್ರೋಫಿ ಗೆದ್ದಿದ್ದೇನೋ, ಇಲ್ಲವೋ ಎಂಬುದನ್ನೇ ಮಾನದಂಡವಾಗಿಟ್ಟುಕೊಂಡು ಅಳೆಯುವುದಾದರೆ ಅದಕ್ಕೆಲ್ಲ ಸ್ವಲ್ಪವೂ ತಲೆಕೆಡಿಸಿಕೊಳ್ಳಲಾರೆ’ ಎಂದು ಕೊಹ್ಲಿ ಹೇಳಿದರು.
ತಮ್ಮ ಮಾತಿನ ವೇಳೆ ಎಲ್ಲೂ ಗಂಭೀರ್ ಹೆಸರನ್ನು ಪ್ರಸ್ತಾವಿಸದ ಕೊಹ್ಲಿ, ಹೊರಗಿನವರು ಹೇಳುವ ಮಾತಿಗೆಲ್ಲ ನಾನು ಚಿಂತೆ ಮಾಡಿದ್ದೇ ಆದರೆ 5 ಪಂದ್ಯ ಆಡಲೂ ನನ್ನ ಕೈಲಾಗುತ್ತಿರಲಿಲ್ಲ ಎಂದರು.