ಒತ್ತಾಯದ ಕಾರಣದಿಂದ ವಿರಾಟ್ ಟೆಸ್ಟ್ ನಾಯಕತ್ವ ತ್ಯಜಿಸಿದ್ದಾರೆ: ಮಾಜಿ ಕ್ರಿಕೆಟಿಗನ ಆರೋಪ
Team Udayavani, Jan 23, 2022, 1:03 PM IST
ಮುಂಬೈ: ಭಾರತೀಯ ಕ್ರಿಕೆಟ್ ತಂಡದ ನಾಯಕನ ಸ್ಥಾನಕ್ಕೆ ವಿರಾಟ್ ಕೊಹ್ಲಿ ರಾಜೀನಾಮೆ ನೀಡಿದ ಬಳಿಕ ಹಲವಾರು ಕ್ರಿಕೆಟಿಗರು ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪಾಕಿಸ್ಥಾನದ ಮಾಜಿ ಆಟಗಾರ ಶೋಯೆಬ್ ಅಖ್ತರ್ ಕೂಡಾ ಈ ಬಗ್ಗೆ ಮಾತನಾಡಿದ್ದು, “ವಿರಾಟ್ ಕೊಹ್ಲಿ ಸ್ವ ಇಚ್ಛೆಯಿಂದ ಅಲ್ಲ, ಒತ್ತಾಯಪೂರ್ವಕವಾಗಿ ರಾಜೀನಾಮೆ ನೀಡಿದ್ದಾರೆ” ಎಂದು ಆರೋಪಿಸಿದ್ದಾರೆ.
ವಿರಾಟ್ ತಾನಾಗಿಯೇ ನಾಯಕತ್ವ ತ್ಯಜಿಸಲಿಲ್ಲ. ಆದರೆ ತೊರೆಯಲು ಒತ್ತಾಯಿಸಲಾಯಿತು. ಇದು ಅವನಿಗೆ ಉತ್ತಮ ಸಮಯವಲ್ಲ, ವಿರಾಟ್ ಒಬ್ಬ ಶ್ರೇಷ್ಠ ವ್ಯಕ್ತಿ ಮತ್ತು ಕ್ರಿಕೆಟಿಗ. ಬೇರೆ ಏನೋ ಮಾಡಲು ಹೋಗಬೇಡಿ, ಮೈದಾನಕ್ಕಿಳಿದು ಕ್ರಿಕೆಟ್ ಆಡಿ. ಅವರು ಶ್ರೇಷ್ಠ ಬ್ಯಾಟ್ಸ್ಮನ್ ಮತ್ತು ವಿಶ್ವದ ಇತರರಿಗಿಂತ ಹೆಚ್ಚಿನ ಸಾಧನೆ ಮಾಡಿದ್ದಾರೆ. ಆತ ತನ್ನ ನಿಜವಾದ ಆಟ ಆಡಬೇಕು ಎಂದು ಅಖ್ತರ್ ಹೇಳಿದರು.
ಇದನ್ನೂ ಓದಿ:ಸ್ವಯಂ ಘೋಷಿತ ಸಂವಿಧಾನ ಪಂಡಿತ: ಮುಂದುವರಿದ ಸಿದ್ದು-ಹೆಚ್ ಡಿಕೆ ಟ್ವೀಟ್ ಸಮರ
ಭಾರತದ ಮುಂದಿನ ಟೆಸ್ಟ್ ನಾಯಕನ ಕುರಿತು ಮಾತನಾಡಿದ ವೇಗಿ, “ಬಿಸಿಸಿಐ ಈ ಬಗ್ಗೆ ಜಾಣ್ಮೆಯ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ನನಗೆ ತಿಳಿದಿದೆ” ಎಂದು ಹೇಳಿದರು.
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಸೋಲಿನ ಬಳಿಕ ವಿರಾಟ್ ಕೊಹ್ಲಿ ಟೆಸ್ಟ್ ತಂಡದ ನಾಯಕತ್ವಕ್ಕೆ ವಿದಾಯ ಹೇಳಿದ್ದರು.
ಮುಂದಿನ ಟಿ20 ವಿಶ್ವಕಪ್ ನಲ್ಲಿ ಭಾರತ- ಪಾಕಿಸ್ಥಾನ ಪಂದ್ಯದ ಕುರಿತು ಮಾತನಾಡಿದ ರಾವಲ್ಪಿಂಡಿ ಎಕ್ಸ್ ಪ್ರೆಸ್, “ನಾವು ಮತ್ತೆ ಮೆಲ್ಬೋರ್ನ್ನಲ್ಲಿ ಭಾರತವನ್ನು ಸೋಲಿಸುತ್ತೇವೆ. ಟಿ 20 ಕ್ರಿಕೆಟ್ನಲ್ಲಿ ಭಾರತಕ್ಕಿಂತ ಪಾಕಿಸ್ತಾನ ಉತ್ತಮ ತಂಡವಾಗಿದೆ. ನಾವು ಕ್ರಿಕೆಟ್ನಲ್ಲಿ ಎರಡೂ ದೇಶಗಳ ಮುಖಾಮುಖಿಯಾದಾಗಲೆಲ್ಲಾ ಭಾರತೀಯ ಮಾಧ್ಯಮಗಳು ತಮ್ಮ ತಂಡದ ಮೇಲೆ ಅನಗತ್ಯ ಒತ್ತಡ ಹೇರುತ್ತದೆ. ಈ ಬಾರಿಯೂ ಭಾರತವು ಸೋಲಲಿದೆ” ಎಂದರು.