ಭಾರತವನ್ನು ಸೋಲಿಸಬಲ್ಲೆವು: ಡಿ’ಸಿಲ್ವ
Team Udayavani, Jul 3, 2019, 5:52 AM IST
ಲಂಡನ್: ಶ್ರೀಲಂಕಾ ಈಗಾಗಲೇ ವಿಶ್ವ ಕಪ್ನಿಂದ ಹೊರ ಬಿದ್ದಿರಬಹುದು. ಆದರೆ ಶನಿವಾರ ನಡೆಯುವ ಭಾರತ ವಿರುದ್ಧದ ಪಂದ್ಯದಲ್ಲಿ ಜಯ ಸಾಧಿಸಿ ತಮ್ಮ ಅಭಿಯಾನ ಅಂತ್ಯಗೊಳಿಸುವ ನಂಬಿಕೆ ನಮ್ಮದು ಎಂದು ತಂಡದ ಆಫ್ ಸ್ಪಿನ್ನರ್ ಧನಂಜಯ ಡಿ’ಸಿಲ್ವ ಹೇಳಿದ್ದಾರೆ.
ಸೋಮವಾರ ನಡೆದ ಪಂದ್ಯದಲ್ಲಿ ಶ್ರೀಲಂಕಾ ತಂಡವು ಬೃಹತ್ ಮೊತ್ತದ ಸೆಣಸಾಟದಲ್ಲಿ ವೆಸ್ಟ್ಇಂಡೀಸ್ ತಂಡ ವನ್ನು 23 ರನ್ನುಗಳಿಂದ ಸೋಲಿಸಿ ಸಮಾಧಾನಪಟ್ಟುಕೊಂಡಿದೆ. ಈ ಮೊದಲು ಇದೇ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾವು ದಕ್ಷಿಣ ಆಫ್ರಿಕಾಕ್ಕೆ 9 ವಿಕೆಟ್ಗಳಿಂದ ಶರಣಾಗಿತ್ತು.
ಇದು ಈ ವಿಶ್ವಕಪ್ನಲ್ಲಿ ಶ್ರೀಲಂಕಾದ 3ನೇ ಗೆಲುವು ಆಗಿದೆ. ಇಂಗ್ಲೆಂಡನ್ನು ಸದೆಬಡಿದಿದ್ದ ಶ್ರೀಲಂಕಾ ತಂಡವು ಹೆಡಿಂಗ್ಲೆಯಲ್ಲಿ ವಿರಾಟ್ ಕೊಹ್ಲಿ ಪಡೆಯನ್ನು ಉರುಳಿಸಲು ಎದುರು ನೋಡುತ್ತಿದೆ ಎಂದು ಡಿ’ಸಿಲ್ವ ತಿಳಿಸಿದ್ದಾರೆ.
ಭಾರತ-ಶ್ರೀಲಂಕಾ ನಡುವೆ ಈ ಹಿಂದೆ ನಡೆದ 8 ಏಕದಿನ ಪಂದ್ಯ ಗಳಲ್ಲಿ ಶ್ರೀಲಂಕಾ ಒಂದರಲ್ಲಿ ಮಾತ್ರ ಜಯ ಗಳಿಸಿದೆ. ಓವಲ್ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಲಂಕಾ ಭಾರತವನ್ನು 7 ವಿಕೆಟ್ಗಳಿಂದ ಮಣಿಸಿತ್ತು.
ಶನಿವಾರದ ಪಂದ್ಯವು 2011ರ ವಿಶ್ವಕಪ್ ಕೂಟದ ಫೈನಲ್ ಪಂದ್ಯದ ಪುನರಾವರ್ತನೆಯಾಗಲಿದೆ. ಈ ಫೈನಲ್ನಲ್ಲಿ ಭಾರತ ಜಯಭೇರಿ ಬಾರಿಸಿತ್ತು.
ಐದನೇ ಸ್ಥಾನ ?
ಐಸಿಸಿಯ ಇತರ ಕೂಟಗಳಲ್ಲಿ ನಾವು ಭಾರತ ವಿರುದ್ಧ ಉತ್ತಮ ನಿರ್ವಹಣೆ ದಾಖಲಿಸಿದ್ದೇವೆ. ನಾವು ಈಗಷ್ಟೇ ವಿಂಡೀಸ್ ತಂಡವನ್ನು ಸೋಲಿಸಿದ್ದೇವೆ. ಅದೇ ಉತ್ಸಾಹದಲ್ಲಿ ಆಡಿದರೆ ಭಾರತವನ್ನು ಮತ್ತೆ ಸೋಲಿಸಲು ಸಾಧ್ಯ ಎಂದು ಡಿ’ಸಿಲ್ವ ತಿಳಿಸಿದರು.
ಪ್ರತಿಯೊಂದು ಪಂದ್ಯವನ್ನು ಗೆಲ್ಲಲು ನಾವು ಪ್ರಯತ್ನಿಸಿದ್ದೇವೆ. ಒಂದು ವೇಳೆ ಭಾರತ ತಂಡವನ್ನು ಸೋಲಿಸಿದರೆ ನಾವು 5ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಲಿದ್ದೇವೆ ಎಂದು ಡಿ’ಸಿಲ್ವ ವಿವರಿಸಿದರು.