ನಮ್ಮ ಬ್ಯಾಟಿಂಗ್ ಬಗ್ಗೆ ಜಾಗರೂಕತೆಯಿಂದಿರಬೇಕು: ಕೃನಾಲ್ ಪಾಂಡ್ಯ
Team Udayavani, Feb 26, 2019, 11:22 AM IST
ಬೆಂಗಳೂರು: ಪ್ರವಾಸಿ ಆಸೀಸ್ ವಿರುದ್ಧದ ಮೊದಲ ಟಿ-ಟ್ವೆಂಟಿ ಪಂದ್ಯ ಸೋತ ಬಳಿಕ ಭಾರತದ ಆಲ್ ರೌಂಡರ್ ಕೃನಾಲ್ ಪಾಂಡ್ಯ ಸೋಲಿನ ಬಗ್ಗೆ ಹೇಳಿಕೆ ನೀಡಿದ್ದು, ನಮ್ಮ ಬೌಲಿಂಗ್ ದಾಳಿ ಶ್ರೇಷ್ಠ ಮಟ್ಟದಲ್ಲಿತ್ತು. ಆದರೆ ಭಾರತ ತನ್ನ ಬ್ಯಾಟಿಂಗ್ ನಲ್ಲಿ ಜಾಗರೂಕತೆಯಿಂದ ಇರಬೇಕು ಎಂದಿದ್ದಾರೆ.
ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಟಿ-ಟ್ವೆಂಟಿ ಪಂದ್ಯಕ್ಕಾಗಮಿಸಿರುವ ಟೀಂ ಇಂಡಿಯಾ ಆಟಗಾಗರರು ಮಂಗಳವಾರ ಅಭ್ಯಾಸದಲ್ಲಿ ತೊಡಗಿದರು. ಈ ವೇಳೆ ಮಾತನಾಡಿದ ಸೀನಿಯರ್ ಪಾಂಡ್ಯ, ಬುಧವಾರದ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ನಾವು ಈಗಾಗಲೇ 0-1 ಅಂತರದಿಂದ ಹಿನ್ನಡೆಯಲ್ಲಿದ್ದೇವೆ. ನಾವು ಒಂದು ಪಂದ್ಯ ಸೋತಿರಬಹುದು ಆದರೆ ನಮ್ಮ ಆಟ ಹಳಿ ತಪ್ಪಿಲ್ಲ. ನಾವು ಮುಂದಿನ ಪಂದ್ಯವನ್ನು ಖಂಡಿತ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಕೃನಾಲ್ ಗೆ ತನ್ನ ಬ್ಯಾಟಿಂಗ್ ಭಡ್ತಿಯ ಬಗ್ಗೆ ಕೇಳಿದಾಗ, ನಾನು ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತೇನೆ ಎನ್ನುವುದು ಮುಖ್ಯವಲ್ಲ. ಪರಿಸ್ಥಿತಿಗೆ ತಕ್ಕಂತೆ ನಾನು ಬ್ಯಾಟಿಂಗ್ ಮಾಡುತ್ತೇನೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲೂ ನಾನು ತಂಡಕ್ಕೆ ಕೊಡುಗೆ ನೀಡ ಬಯಸುತ್ತೇನೆ ಎಂದರು.
ವಿಶಾಖಪಟ್ಟಣ ಪಂದ್ಯದಲ್ಲಿ ಬ್ಯಾಟಿಂಗ್ ವೇಳೆ ಕೃನಾಲ್ ವಿಫಲರಾಗಿದ್ದರು. ಒಂದು ರನ್ ಗಳಿಸಿದ್ದ ಕೃನಾಲ್ ಅನಗತ್ಯ ಹೊಡೆತಕ್ಕೆ ಕೈ ಹಾಕಿ ಮ್ಯಾಕ್ಸ್ ವೆಲ್ ಗೆ ಕ್ಯಾಚ್ ನೀಡಿ ಔಟಾಗಿದ್ದರು. ಆದರೆ ಬೌಲಿಂಗ್ ನಲ್ಲಿ ಉತ್ತಮ ಪ್ರದರ್ಶನ ತೋರಿದ ಎಡಗೈ ಸ್ಪಿನ್ನರ್ ತನ್ನ ನಾಲ್ಕು ಓವರ್ ಕೋಟಾದಲ್ಲಿ ಕೇವಲ 17 ರನ್ ನಿಡಿ ಒಂದು ಉಪಯುಕ್ತ ವಿಕೆಟ್ ಪಡೆದಿದ್ದರು.