ಎರಡು ಸ್ಥಾನಕ್ಕೆ ಮೂವರ ಸ್ಪರ್ಧೆ: ಟೆಸ್ಟ್ ತಂಡದಲ್ಲಿ ಪೂಜಾರ- ರಹಾನೆ ಸ್ಥಾನ ತುಂಬುವವರು ಯಾರು?
Team Udayavani, Mar 3, 2022, 10:12 AM IST
ಮೊಹಾಲಿ: ಪ್ರವಾಸಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯ ಮೊಹಾಲಿಯಲ್ಲಿ ನಡೆಯಲಿದೆ. ವಿರಾಟ್ ಕೊಹ್ಲಿಯ ನೂರನೇ ಪಂದ್ಯ, ನಾಯಕನಾಗಿ ರೋಹಿತ್ ಮೊದಲ ಟೆಸ್ಟ್, ಹೀಗೆ ಹಲವು ವಿಶೇಷತೆಗಳನ್ನು ಹೊಂದಿದೆ. ಇದರ ನಡುವೆ ಬಹುತೇಕ ತಂಡದಿಂದ ಹೊರಬಿದ್ದ ಟೆಸ್ಟ್ ಸ್ಪೆಷಲಿಸ್ಟ್ ಗಳಾದ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಸ್ಥಾನವನ್ನು ಯಾರು ತುಂಬಿಸುತ್ತಾರೆ ಎನ್ನುವುದು ಕೂಡಾ ಇದೇ ಸರಣಿಯಲ್ಲಿ ಬಹುತೇಕ ಖಚಿತವಾಗಲಿದೆ.
ಪೂಜಾರ ಮತ್ತು ರಹಾನೆ ಟೆಸ್ಟ್ ತಂಡಕ್ಕೆ ಮರಳಲು ಬಾಗಿಲು ತೆರೆದಿರುತ್ತದೆ ಎಂದು ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ ಒತ್ತಿಹೇಳಿದರೂ, ಟೆಸ್ಟ್ ತಂಡದಲ್ಲಿ ಯುವಕರಿಗೆ ಅವಕಾಶಗಳನ್ನು ನೀಡಲಾಗುತ್ತಿದೆ ಎನ್ನುವುದು ಅಷ್ಟೇ ಸತ್ಯ. ಬಲಿಷ್ಠವೇನೂ ಅಲ್ಲದ ಶ್ರೀಲಂಕಾ ವಿರುದ್ಧದ ತವರಿನ ಸರಣಿಯಲ್ಲಿ ಮಧ್ಯಮ ಕ್ರಮಾಂಕದಲ್ಲಿ ಹೊಸ ಮುಖಗಳನ್ನು ಪರೀಕ್ಷಿಸಲು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಮುಂದಾಗಿದ್ದಾರೆ.
ಪೂಜಾರ, ರಹಾನೆ, ವೃದ್ಧಿಮಾನ್ ಸಹಾ ಮತ್ತು ಇಶಾಂತ್ ಶರ್ಮಾ ಅವರನ್ನು ಕೈಬಿಟ್ಟ ನಂತರ ಭಾರತವು ತುಲನಾತ್ಮಕವಾಗಿ ಯುವ ತಂಡವನ್ನು ಆಯ್ಕೆ ಮಾಡಿದೆ. ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಪ್ರಿಯಾಂಕ್ ಪಾಂಚಾಲ್, ಕೆಎಸ್ ಭರತ್ ಅವರಂತಹವರು ಟೆಸ್ಟ್ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರಮುಖವಾಗಿ ಮೂರು ಮತ್ತು ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಮೂವರು ಕಾದು ಕುಳಿತಿದ್ದಾರೆ. ಶುಭ್ಮನ್ ಗಿಲ್, ಹನುಮ ವಿಹಾರಿ ಮತ್ತು ಶ್ರೇಯಸ್ ಅಯ್ಯರ್ ಈ ಎರಡು ಸ್ಥಾನಕ್ಕೆ ಪೈಪೋಟಿ ನಡೆಸುತ್ತಿದ್ದಾರೆ.
ಇದನ್ನೂ ಓದಿ:ವನಿತಾ ವಿಶ್ವಕಪ್; ಮತ್ತೊಂದು ಕ್ರಿಕೆಟ್ ರೋಮಾಂಚನ
ಹನುಮ ವಿಹಾರಿ ಅವರು ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೆಚ್ಚಿನ ಬ್ಯಾಟಿಂಗ್ನಲ್ಲಿ ಅನನುಭವದ ಹೊರತಾಗಿಯೂ ನಂ. 3 ಸ್ಥಾನಕ್ಕೆ ಉತ್ತಮ ಆಯ್ಕೆಯಾಗಿದ್ದಾರೆ. ವಿಹಾರಿ ದೇಶೀಯ ಕ್ರಿಕೆಟ್ನಲ್ಲಿ ಮೂರನೇ ಕ್ರಮಾಂಕದಲ್ಲೇ ತಮ್ಮ ಹೆಚ್ಚಿನ ರನ್ಗಳನ್ನು ಗಳಿಸಿದ್ದಾರೆ.
ಒಂದು ವೇಳೆ ಮೂರನೇ ಕ್ರಮಾಂಕದಲ್ಲಿ ವಿಹಾರಿ ಸ್ಥಾನ ಪಡೆಯದಿದ್ದರೆ, ಆ ಜಾಗದಲ್ಲಿ ಶುಭ್ಮನ್ ಗಿಲ್ ಬರುವ ಸಾಧ್ಯತೆಯಿದೆ. ಇದುವರೆಗೆ ಆರಂಭಿಕಾಗಿ ಕಾಣಿಸಿಕೊಂಡಿರುವ ಗಿಲ್ ಗೆ ಈಗ ಮಯಾಂಕ್ ಮತ್ತು ರೋಹಿತ್ ಕಾರಣದಿಂದ ಆ ಜಾಗವಿಲ್ಲ. ಹೀಗಾಗಿ ಅವರು ಮೂರನೇ ಕ್ರಮಾಂಕದಲ್ಲಿ ಆಡಬಹುದು.
ನ್ಯೂಜಿಲ್ಯಾಂಡ್ ವಿರುದ್ಧದ ತವರಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಶ್ರೇಯಸ್ ಅಯ್ಯರ್ ಕೂಡಾ ರೇಸ್ ನಲ್ಲಿದ್ದಾರೆ. ರಹಾನೆ ಬದಲಿಗೆ ಐದನೇ ಕ್ರಮಾಂಕದಲ್ಲಿ ಅಯ್ಯರ್ ಆಡಬಹುದು ಎನ್ನಲಾಗಿದೆ.
ಇದರೊಂದಿಗೆ ಗಾಯಗೊಂಡಿರುವ ಕೆ.ಎಲ್.ರಾಹುಲ್ ಮತ್ತೆ ತಂಡಕ್ಕೆ ಬಂದಾಗ ಯಾವ ಜಾಗದಲ್ಲಿ ಆಡುತ್ತಾರೆ ಎನ್ನುವುದೂ ನೋಡಬೇಕಿದೆ. ಒಟ್ಟಿನಲ್ಲಿ ಲಂಕಾ ಸರಣಿಯಲ್ಲಿ ಬಹುತೇಕ ಪ್ರಶ್ನೆಗಳಿಗೆ ಉತ್ತರ ಸಿಗಬಹುದು.