ಆರ್ಸಿಬಿ ವಿಫಲವಾಯಿತೇಕೆ?
Team Udayavani, Nov 11, 2020, 10:33 PM IST
ಬೆಂಗಳೂರು: ಪ್ರತೀ ಐಪಿಎಲ್ ಆರಂಭಕ್ಕೂ ಮೊದಲು ಆರ್ಸಿಬಿ ಅಭಿಮಾನಿಗಳು “ಕಪ್ ನಮ್ದೇ’ ಎಂದು ಹೇಳಿಕೊಂಡು ಕುಣಿಯುವುದು, ಟೂರ್ನಿ ಮುಗಿದ ಮೇಲೆ ಆರ್ಸಿಬಿ ವಿಫಲವಾಯಿತೇಕೆ ಎಂದು ಪ್ರಶ್ನಿಸಿಕೊಳ್ಳುವುದು ಮಾಮೂ ಲಾಗಿದೆ. 2020ರ ಕೂಟವೂ ಇದಕ್ಕೆ ಹೊರತಾಗಿಲ್ಲ. ಹಾಗೆಯೇ ತಂಡದ ಸಮಸ್ಯೆಗಳೂ ಬಗೆಹರಿದಿಲ್ಲ.
ಆರ್ಸಿಬಿ ಬೌಲಿಂಗ್ ಕೆಲವರ ಮೇಲಷ್ಟೇ ಅವಲಂಬಿತವಾಗಿದೆ. ಹಾಗೆಯೇ ಬ್ಯಾಟಿಂಗ್ ಕೂಡ! ಅದರಲ್ಲೂ ಬ್ಯಾಟಿಂಗ್ ವಿಭಾಗ ವಿರಾಟ್ ಕೊಹ್ಲಿ, ಎ ಬಿ ಡಿವಿಲಿಯರ್ ಅವರನ್ನು ಸಂಪೂರ್ಣವಾಗಿ ಅವಲಂಬಿಸಿದೆ. ಇವರಿಬ್ಬರು ಔಟಾದರೆ ಅಲ್ಲಿಗೆ ಮುಗಿಯಿತು. ಈ ಬಾರಿ ದೇವದತ್ತ ಪಡಿಕ್ಕಲ್ ಮಿಂಚಿ ಹೊಸ ಭರವಸೆಯಾಗಿ ಕಾಣಿಸಿಕೊಂಡರು. ಅವರು ಕೊಹ್ಲಿ, ಎಬಿಡಿ ಇಬ್ಬರನ್ನೂ ಮೀರಿಸಿದರು.
ಕೂಟದ ಆರಂಭದಲ್ಲೇ ವೇಗಿ ಕೇನ್ ರಿಚಡ್ಸನ್ ಆಡುವುದಿಲ್ಲ ಎಂದು ಘೋಷಿಸಿದರು. ಅದು ಆರ್ಸಿಬಿಗೆ ಎದುರಾದ ದೊಡ್ಡ ಹೊಡೆತ. ಕೆಲವು ಪಂದ್ಯಗಳ ಅನಂತರ ಆಲ್ರೌಂಡರ್ ಕ್ರಿಸ್ ಮಾರಿಸ್ ತಂಡ ಸೇರಿಕೊಂಡಿದ್ದರಿಂದ ಭಾರೀ ಅನುಕೂಲವಾಯಿತು. ಕಡೆಯಲ್ಲಿ ಅವರು ಗಾಯಾಳಾಗಿ ಹೊರಬಿದ್ದು ಹೊಡೆತ ನೀಡಿದರು.
ಡೇಲ್ ಸ್ಟೇನ್ ಬೌಲಿಂಗ್ ಯಾವುದೇ ಹಂತದಲ್ಲೂ ಪರಿಣಾಮ ಕಾರಿ ಆಗಿರಲಿಲ್ಲ. ಹಾಗಾಗಿ ನವದೀಪ್ ಸೈನಿ, ಮೊಹಮ್ಮದ್ ಸಿರಾಜ್ ಜತೆಗೆ ಇನ್ನೊಬ್ಬ ಪ್ರಮುಖ ವೇಗಿಯ ಕೊರತೆ ಎದುರಾಯಿತು. ಡ್ಯಾರಿಂಗ್ ಕ್ರಿಕೆಟರ್ ಪಾರ್ಥಿವ್ ಪಟೇಲ್ಗೆ ಒಂದೂ ಅವಕಾಶ ನೀಡಲಿಲ್ಲ. ಇಷ್ಟೆಲ್ಲದರ ಮಧ್ಯೆ ಆರ್ಸಿಬಿ ಪ್ಲೇ ಆಫ್ಗೆ ಏರಿದ್ದೇ ಹೆಚ್ಚು!