ವಿಲಿಯಮ್ಸನ್ ಸಮರ್ಥ ನಾಯಕ
Team Udayavani, May 9, 2018, 6:00 AM IST
ಹೈದರಾಬಾದ್: ಡೇವಿಡ್ ವಾರ್ನರ್ ಅವರ ಅನುಪಸ್ಥಿತಿಯಲ್ಲಿ ಸನ್ರೈಸರ್ ಹೈದರಾಬಾದ್ ತಂಡವನ್ನು ಮುನ್ನಡೆಸುತ್ತಿರುವ ಕೇನ್ ವಿಲಿಯಮ್ಸನ್ ಸಮರ್ಥ ನಾಯಕರಾಗಿ ಗಮನ ಸೆಳೆಯುತ್ತಿದ್ದಾರೆ. ಆಡಿದ 10 ಪಂದ್ಯಗಳಲ್ಲಿ ಎಂಟರಲ್ಲಿ ಗೆದ್ದಿರುವ ಹೈದರಾಬಾದ್ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಒಂದೆನಿಸಿದೆ.
ಹೈದರಾಬಾದ್ನ ಅಮೋಘ ನಿರ್ವಹಣೆಗೆ ವಿಲಿಯಮ್ಸನ್ ಅವರ ಅಮೋಘ ಆಟ ಪ್ರಮುಖ ಕಾರಣವಾಗಿದೆ. ಈ ಐಪಿಎಲ್ನಲ್ಲಿ ಐದು ಅರ್ಧಶತಕ ಸಿಡಿಸಿದ ಮೊದಲ ಆಟಗಾರ ಎಂದೆನಿಸಿಕೊಂಡಿರುವ ವಿಲಿಯಮ್ಸನ್ ಈ ಋತುವಿನಲ್ಲಿ 400ಕ್ಕಿಂತ ಹೆಚ್ಚು ರನ್ ಪೇರಿಸಿದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ವಾರ್ನರ್ ಅವರ ಅನುಪಸ್ಥಿತಿಯನ್ನು ಮರೆಯುವಂತೆ ಮಾಡಿದ್ದಾರಲ್ಲದೇ ಸಮರ್ಥ ಬದಲಿ ನಾಯಕರೆಂಬುದನ್ನು ನಿರೂಪಿಸಿದ್ದಾರೆ.
ಈ ಐಪಿಎಲ್ನಲ್ಲಿ ತಂಡವೊಂದನ್ನು ಮುನ್ನಡೆಸುತ್ತಿರುವ ಏಕೈಕ ವಿದೇಶಿ ಆಟಗಾರ ವಿಲಿಯಮ್ಸನ್ ಆಗಿದ್ದಾರೆ. ತಾಳ್ಮೆಯಿಂದ ಇರುವ ಅವರು ಆಟಗಾರರಲ್ಲಿ ಆತ್ಮವಿಶ್ವಾಸ ತುಂಬಲು ಪ್ರಯತ್ನಿಸುತ್ತಾರೆ. ತಂಡದ ಶ್ರೇಷ್ಠ ನಿರ್ವಹಣೆಗೆ ಅವರು ಸ್ಫೂರ್ತಿಯ ಚಿಲುಮೆಯಾಗಿದ್ದಾರೆ. ಇದರಿಂದಾಗಿ ತಂಡ ಯಾವುದೇ ಸ್ಥಿತಿಯಲ್ಲಿದ್ದರೂ ಗೆಲುವಿಗಾಗಿ ಶಕ್ತಿಮೀರಿ ಪ್ರಯತ್ನಿಸುತ್ತಿದೆ ಮತ್ತು ಯಶಸ್ಸು ಸಾಧಿಸುತ್ತಿದೆ. ಅಲ್ಪ ಮೊತ್ತವಾದರೂ ಉತ್ತಮ ಫೀಲ್ಡಿಂಗ್ ಮತ್ತು ಬೌಲಿಂಗ್ ಮೂಲಕ ಅದನ್ನು ಸಮರ್ಥಿಸಿ ಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಸೋಮವಾರ ಬೆಂಗಳೂರು ವಿರುದ್ಧದ ಪಂದ್ಯವೇ ಸಾಕ್ಷಿ. ಕೊನೆ ಹಂತದವರೆಗೂ ಬೆಂಗಳೂರಿಗೆ ಗೆಲುವಿನ ಅವಕಾಶವಿತ್ತು. ಆದರೆ ಭುವನೇಶ್ವರ್ ಅವರ ನಿಖರ ದಾಳಿಯಿಂದ ಹೈದರಾಬಾದ್ ಜಯಭೇರಿ ಬಾರಿಸು ವಂತಾಯಿತು.
ಗೆಲ್ಲಬೇಕಾಗಿತ್ತು: ಸಿರಾಜ್
ಹೈದರಾಬಾದ್: ತವರಿನಲ್ಲಿ ನಡೆದ ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ ಬೆಂಗಳೂರು ತಂಡ ಗೆಲ್ಲಲು ಹೈದರಾಬಾದ್ ಮೂಲದ ಮೊಹಮ್ಮದ್ ಸಿರಾಜ್ ಶಕ್ತಿಮೀರಿ ಪ್ರಯತ್ನಿಸಿದರು. ಆದರೆ ಕಳಪೆ ಬ್ಯಾಟಿಂಗ್ನಿಂದಾಗಿ ಬೆಂಗಳೂರು ಸೋತಿರುವುದು ಸಿರಾಜ್ಗೆ ಬೇಸರ ತಂದಿದೆ. ಇದೊಂದು ನಮ್ಮ ಪಾಲಿಗೆ ಅತ್ಯಂತ ನಿರ್ಣಾಯಕ ಪಂದ್ಯವಾಗಿತ್ತು ಮತ್ತು ನಾವು ಗೆಲ್ಲುವ ಅಗತ್ಯವಿತ್ತು. ಆದರೆ ನಾವು ಸೋತೆವು ಎಂದು ಪಂದ್ಯದ ಬಳಿಕ ಸಿರಾಜ್ ಪ್ರತಿಕ್ರಿಯೆ ನೀಡಿದರು.
ಸಾಧ್ಯವಾದಷ್ಟು ಕಡಿಮೆ ರನ್ ನೀಡುವುದು ನನ್ನ ಯೋಜನೆಯಾಗಿತ್ತು. ಇದುವೇ ನನ್ನ ಮನಸ್ಸಿನಲ್ಲಿ ಇತ್ತು. ಆದರೂ ನಾವು 20 ರನ್ ಹೆಚ್ಚು ಬಿಟ್ಟುಕೊಟ್ಟೆವು. ಹಾಗಾಗಿ ಪಂದ್ಯ ನಮ್ಮಿಂದ ಕೈಜಾರಿತು ಎಂದವರು ಹೇಳಿದರು.
ಕಳೆದ ಋತುವಿನಲ್ಲಿ ಸಿರಾಜ್ ಹೈದರಾಬಾದ್ ತಂಡದ ಪರ ಆಡಿದ್ದರು. ಆದರೆ ಈ ಬಾರಿ ಆರ್ಸಿಬಿ ಪರ ಆಡುತ್ತಿದ್ದಾರೆ. ಸೋಮವಾರದ ಪಂದ್ಯದಲ್ಲಿ ಅವರ ಶ್ರೇಷ್ಠ ನಿರ್ವಹಣೆಯಿಂದಾಗಿ ಹೈದರಾಬಾದ್ 146 ರನ್ನಿಗೆ ಆಲೌಟಾಗಿತ್ತು. ಸಿರಾಜ್ 25 ರನ್ನಿಗೆ 3 ವಿಕೆಟ್ ಪಡೆದಿದ್ದರು. ಆದರೆ ಬ್ಯಾಟಿಂಗ್ ಕುಸಿತಕ್ಕೆ ಒಳಗಾದ ಬೆಂಗಳೂರು 141 ರನ್ ಗಳಿಸಲಷ್ಟೇ ಶಕ್ತವಾಗಿ 5 ರನ್ನಿನಿಂದ ಸೋಲು ಕಂಡಿತು.
ಆರ್ಸಿಬಿಯ ಬೌಲಿಂಗ್ ಸ್ಥಿರವಾಗಿಲ್ಲ,. ಆದರೆ ಬ್ಯಾಟಿಂಗ್ ತಂಡದ ಶಕ್ತಿಯಾಗಿತ್ತು. ಆದರೆ ತಂಡ ಬ್ಯಾಟಿಂಗ್ನಲ್ಲಿಯೂ ವೈಫಲ್ಯ ಕಾಣುತ್ತಿದೆ. ಈ ಕಾರಣಕ್ಕಾಗಿಯೇ ತಂಡ ಸೋಲು ಕಾಣುತ್ತಿದೆ. ಇದು ಆಟದ ಅಂಗ ಏರಿಳಿತ ಆಗುವುದು ಸಹಜ ಪ್ರಕ್ರಿಯೆ. ಮುಂದಿನ ಪಂದ್ಯಗಳಲ್ಲಿ ಉತ್ತಮ ನಿರ್ವಹಣೆ ನೀಡುವ ವಿಶ್ವಾಸವಿದೆ ಎಂದು ಸಿರಾಜ್ ತಿಳಿಸಿದರು.
ನಾವು ಈಗಾಗಲೇ 10 ಪಂದ್ಯಗಳನ್ನಾಡಿದ್ದೇವೆ ಮತ್ತು ಕೇವಲ ಆರಂಕ ಹೊಂದಿದ್ದೇವೆ. ಬಹುತೇಕ ಹೊರಬಿದ್ದಂತೆ. ಇನ್ನುಳಿದ ನಾಲ್ಕು ಪಂದ್ಯ ಗೆಲ್ಲುವುದು ನಮ್ಮ ಮುಂದೆ ಇರುವ ಗುರಿಯಾಗಿದೆ. ಪ್ರತಿಯೊಂದು ಪಂದ್ಯವನ್ನು ಗಂಭೀರವಾಗಿ ತೆಗೆದುಕೊಂಡು ಆಡಬೇಕಾಗಿದೆ ಎಂದು ಸಿರಾಜ್ ವಿವರಿಸಿದರು.
ಎಕ್ಸ್ಟ್ರಾ ಇನ್ನಿಂಗ್ಸ್ : ಹೈದರಾಬಾದ್-ಬೆಂಗಳೂರು
ಐಪಿಎಲ್ ಪಂದ್ಯದಲ್ಲಿ ಎದುರಾಳಿಯನ್ನು ಆಲೌಟ್ ಮಾಡಿಸಿದ ಬಳಿಕ ಆರ್ಸಿಬಿ ಪಂದ್ಯದಲ್ಲಿ ಸೋತಿರುವುದು ಇದು ಎರಡನೇ ಸಲವಾಗಿದೆ. 2017ರಲ್ಲಿ ಆರ್ಸಿಬಿ ತಂಡವು ಕೆಕೆಆರ್ಗೆ ಶರಣಾಗಿತ್ತು. ಆಗ ಕೆಕೆಆರ್ 131 ರನ್ನಿಗೆ ಆಲೌಟಾಗಿತ್ತು. ಇದೇ ವೇಳೆ ಹೈದರಾಬಾದ್ ತಂಡ ಆಲೌಟ್ ಆದ ಪಂದ್ಯದಲ್ಲಿ ಗೆಲುವು ಸಾಧಿಸಿರುವುದು ಇದು ಎರಡನೇ ಸಲವಾಗಿದೆ. ಈ ಋತುವಿನಲ್ಲಿಯೇ ಮುಂಬೈ ಇಂಡಿಯನ್ಸ್ ವಿರುದ್ಧ 118 ರನ್ನಿಗೆ ಆಲೌಟಾಗಿದ್ದರೂ ಹೈದರಾಬಾದ್ ಗೆಲ್ಲಲು ಯಶಸ್ವಿಯಾಗಿತ್ತು.
ಹೈದರಾಬಾದ್ನಲ್ಲಿ ನಡೆದ 9 ಐಪಿಎಲ್ ಪಂದ್ಯಗಳಲ್ಲಿ ಆರ್ಸಿಬಿ ಕೇವಲ ಎರಡು ಬಾರಿ ಆತಿಥೇಯ ತಂಡವನ್ನು ಸೋಲಿಸಿದೆ. ಡೆಕ್ಕನ್ ಜಾರ್ಜರ್ ವಿರುದ್ಧ ಆಡಿದ ಮೂರು ಪಂದ್ಯಗಳಲ್ಲಿ ಆರ್ಸಿಬಿ ಎರಡರಲ್ಲಿ ಸೋತಿದೆ. ಈ ತಾಣದಲ್ಲಿ ಹೈದರಾಬಾದ್ ವಿರುದ್ಧ ಆರು ಪಂದ್ಯ ನಡೆದಿದ್ದರೂ ಆರ್ಸಿಬಿ ಕೇವಲ ಒಮ್ಮೆ ಮಾತ್ರ ಜಯ ಸಾಧಿಸಿತ್ತು.
ಐಪಿಎಲ್ನಲ್ಲಿ ಇದು ಹೈದರಾಬಾದ್ ತಂಡದ ಸತತ ಐದನೇ ಗೆಲುವು ಆಗಿದೆ. ಜಂಟಿ ದೀರ್ಘ ಗೆಲುವಿನ ದಾಖಲೆಯಾಗಿದೆ. 2016 ಮತ್ತು 2017ರ ಐಪಿಎಲ್ನಲ್ಲೂ ಹೈದರಾಬಾದ್ ಸತತ 5 ಪಂದ್ಯಗಳಲ್ಲಿ ಜಯ ಸಾಧಿಸಿತ್ತು.
ಟ್ವೆಂಟಿ20ಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೇಳೆ ಕೇನ್ ವಿಲಿಯಮ್ಸನ್ 12ನೇ ಸಲ ಅರ್ಧಶತಕ ಹೊಡೆದರು. ಅರ್ಧಶತಕ ಹೊಡೆದ ವೇಳೆ ತಂಡವು ಗೆಲುವು ದಾಖಲಿಸಿತ್ತು.
ರನ್ ಚೇಸ್ ಮಾಡಿದ ವೇಳೆ ತಂಡ ಸೋತ ಸಂದರ್ಭದಲ್ಲಿ ವಿರಾಟ್ ಕೊಹ್ಲಿ 1031 ರನ್ ಹೊಡೆದಿದ್ದಾರೆ. ಕೊಹ್ಲಿ ಗುರಿ ತಲುಪಲಾಗದೇ ಇದ್ದ ವೇಳೆ ಒಂದು ಸಾವಿರ ರನ್ ಪೇರಿಸಿದ ಎರಡನೇ ಆಟಗಾರ ಆಗಿದ್ದಾರೆ. ರಾಬಿನ್ ಉತ್ತಪ್ಪ (1066) ಮೊದಲ ಆಟಗಾರ ಆಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ