ಜೂಲನ್,ಶಿಖಾ ಶಿಕಾರಿ; ವನಿತೆಯರ ಸರಣಿ ಜಯಭೇರಿ
Team Udayavani, Feb 26, 2019, 12:30 AM IST
ಮುಂಬಯಿ: ಏಕದಿನ ವಿಶ್ವ ಚಾಂಪಿಯನ್ ಖ್ಯಾತಿಯ ಇಂಗ್ಲೆಂಡ್ ತಂಡದ ಮೇಲೆ ಸವಾರಿ ಮಾಡಿದ ಭಾರತ ಸರಣಿ ವಶಪಡಿಸಿಕೊಂಡು ಸಂಭ್ರಮಿಸಿದೆ.
ಸೋಮವಾರ “ವಾಂಖೇಡೆ ಸ್ಟೇಡಿಯಂ’ನಲ್ಲಿ ನಡೆದ 2ನೇ ಪಂದ್ಯದಲ್ಲಿ ಮಿಥಾಲಿ ಪಡೆ 7 ವಿಕೆಟ್ಗಳ ಭರ್ಜರಿ ಜಯದೊಂದಿಗೆ ಈ ಸಾಧನೆಗೈದಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ 43.3 ಓವರ್ಗಳಲ್ಲಿ ಕೇವಲ 161 ರನ್ನುಗಳಿಗೆ ಆಲೌಟಾದರೆ, ಭಾರತ 41.1 ಓವರ್ಗಳಲ್ಲಿ ಮೂರೇ ವಿಕೆಟಿಗೆ 162 ರನ್ ಬಾರಿಸಿ ಜಯಭೇರಿ ಮೊಳಗಿಸಿತು. ಇಲ್ಲೇ ನಡೆದಿದ್ದ ಮೊದಲ ಪಂದ್ಯವನ್ನು ಭಾರತ 66 ರನ್ನುಗಳಿಂದ ಜಯಿಸಿತ್ತು. ಸರಣಿಯ 3ನೇ ಮುಖಾಮುಖೀ ಗುರುವಾರ ನಡೆಯಲಿದೆ.
ಇಂಗ್ಲೆಂಡ್ ತೀವ್ರ ಕುಸಿತ
ಇಂಗ್ಲೆಂಡಿನ ಕುಸಿತಕ್ಕೆ ಕಾರಣರಾದವರು ಮಧ್ಯಮ ವೇಗಿಗಳಾದ ಜೂಲನ್ ಗೋಸ್ವಾಮಿ ಮತ್ತು ಶಿಖಾ ಪಾಂಡೆ. ಇಬ್ಬರೂ ತಲಾ 4 ವಿಕೆಟ್ ಬೇಟೆಯಾಡಿದರು. 2 ವಿಕೆಟ್ ಪೂನಂ ಯಾದವ್ ಪಾಲಾಯಿತು.
4ಕ್ಕೆ 44 ರನ್ ಗಳಿಸಿ ಕುಂಟುತ್ತಿದ್ದ ಇಂಗ್ಲೆಂಡಿಗೆ ಮಧ್ಯಮ ಕ್ರಮಾಂಕದ ಆಟಗಾರ್ತಿ ನಥಾಲಿ ಸಿವರ್ ಆಧಾರವಾದರು. ಕೊನೆಯ ವಿಕೆಟ್ ರೂಪದಲ್ಲಿ ಪೆವಿಲಿಯನ್ ಸೇರಿಕೊಂಡ ಸಿವರ್ ಗಳಿಕೆ ಉಪಯುಕ್ತ 85 ರನ್ (109 ಎಸೆತ, 12 ಬೌಂಡರಿ, 1 ಸಿಕ್ಸರ್).
119 ರನ್ನಿಗೆ 9 ವಿಕೆಟ್ ಬಿದ್ದಾಗ ಅಂತಿಮ ವಿಕೆಟಿಗೆ 42 ರನ್ ಪೇರಿಸುವ ಮೂಲಕ ಸಿವರ್ ತಂಡದ ಮೊತ್ತವನ್ನು 160ರ ಗಡಿ ದಾಟಿಸಿದರು. ಈ ಸಂದರ್ಭಲ್ಲಿ ಸಿವರ್ಗೆ ಉತ್ತಮ ಬೆಂಬಲ ನೀಡಿದ ಆಲೆಕ್ಸ್ ಹಾಟಿÉì 17 ಎಸೆತ ಎದುರಿಸಿ ಖಾತೆ ತೆರೆಯದೆ ಉಳಿದರು.
ಸಿವರ್ ಹೊರತುಪಡಿಸಿದರೆ 28 ರನ್ ಹೊಡೆದ ಲಾರೆನ್ ವಿನ್ಫೀಲ್ಡ್ ಅವರದೇ ಹೆಚ್ಚಿನ ಗಳಿಕೆ. ಇವರಿಬ್ಬರ 5ನೇ ವಿಕೆಟ್ ಜತೆಯಾಟದಲ್ಲಿ 49 ರನ್ ಒಟ್ಟುಗೂಡಿತು. ಬಳಿಕ ಇನ್ನೊಂದು ಹಂತದ ಕುಸಿತ ಅನುಭವಿಸಿದ ಇಂಗ್ಲೆಂಡ್ 26 ರನ್ ಅಂತರದಲ್ಲಿ 5 ವಿಕೆಟ್ ಉದುರಿಸಿಕೊಂಡಿತು.
ಮಂಧನಾ-ಮಿಥಾಲಿ ಓಟ
ರನ್ ಚೇಸಿಂಗ್ ವೇಳೆ ಜೆಮಿಮಾ ರೋಡ್ರಿಗಸ್ ಅವರನ್ನು ಸೊನ್ನೆಗೆ ಕಳೆದುಕೊಂಡ ಭಾರತ ಆರಂಭಿಕ ಆಘಾತಕ್ಕೆ ಸಿಲುಕಿತು. ಆದರೆ ಸ್ಮತಿ ಮಂಧನಾ, ಪೂನಂ ರಾವತ್ ಮತ್ತು ದೀಪ್ತಿ ಶರ್ಮ ದಿಟ್ಟ ಬ್ಯಾಟಿಂಗ್ ಮೂಲಕ ತಂಡಕ್ಕೆ ಯಾವುದೇ ಆಘಾತವಾಗದಂತೆ ನೋಡಿಕೊಂಡರು.
ಪ್ರಚಂಡ ಫಾರ್ಮ್ ಮುಂದುವರಿಸಿದ ಮಂಧನಾ 74 ಎಸೆತಗಳಿಂದ 63 ರನ್ ಬಾರಿಸಿದರು (7 ಬೌಂಡರಿ, 1 ಸಿಕ್ಸರ್). ಇದು 49 ಪಂದ್ಯಗಳಲ್ಲಿ ಮಂಧನಾ ದಾಖಲಿಸಿದ 4ನೇ ಅರ್ಧ ಶತಕ. ಪೂನಂ ರಾವತ್ ಗಳಿಕೆ 32 ರನ್ (65 ಎಸೆತ, 4 ಬೌಂಡರಿ). ಇವರಿಬ್ಬರ 2ನೇ ವಿಕೆಟ್ ಜತೆಯಾಟದಲ್ಲಿ 73 ರನ್ ಒಟ್ಟುಗೂಡಿತು.
ಮಂಧನಾ-ಮಿಥಾಲಿ ಜತೆಯಾಟದಲ್ಲಿ 66 ರನ್ ಹರಿದು ಬಂತು. ಮಿಥಾಲಿ ಔಟಾಗದೆ 47 ರನ್ ಹೊಡೆದರು (69 ಎಸೆತ, 8 ಬೌಂಡರಿ).
ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್-43.3 ಓವರ್ಗಳಲ್ಲಿ 161 (ಸಿವರ್ 85, ವಿನ್ಫೀಲ್ಡ್ 28, ಬೇಮಂಟ್ 20, ಶಿಖಾ ಪಾಂಡೆ 18ಕ್ಕೆ 4, ಜೂಲನ್ ಗೋಸ್ವಾಮಿ 30ಕ್ಕೆ 4). ಭಾರತ-41.1 ಓವರ್ಗಳಲ್ಲಿ 3 ವಿಕೆಟಿಗೆ 162 (ಮಂಧನಾ 63, ಮಿಥಾಲಿ ಔಟಾಗದೆ 47, ಪೂನಂ ರಾವತ್ 32, ಶ್ರಬೊÕàಲ್ 23ಕ್ಕೆ 2).
ಪಂದ್ಯಶ್ರೇಷ್ಠ: ಜೂಲನ್ ಗೋಸ್ವಾಮಿ.