ಕುಸ್ತಿ: ಜಿತೇಂದರ್ ಬೆಳ್ಳಿಗೆ ತೃಪ್ತಿ
Team Udayavani, Feb 24, 2020, 6:15 AM IST
ಹೊಸದಿಲ್ಲಿ: ಏಶ್ಯನ್ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿಯ ಪದಕಕ್ಕೆ ತೃಪ್ತಿಪಟ್ಟ ಜಿತೇಂದರ್ ಕುಮಾರ್ ಅವರು ಒಲಿಂಪಿಕ್ ಅರ್ಹತಾ ಕೂಟದಲ್ಲಿ ಭಾಗವಹಿಸುವ ಭಾರತೀಯ ತಂಡದಲ್ಲಿ ಸ್ಥಾನ ಪಡೆಯುವುದನ್ನು ಖಚಿತಪಡಿಸಿದ್ದಾರೆ.
ಈ ಫಲಿತಾಂಶದಿಂದಾಗಿ ಸುಶೀಲ್ ಕುಮಾರ್ ಅವರಿಗೆ ಟೋಕಿಯೊ ಗೇಮ್ಸ್ ನಲ್ಲಿ ಪಾಲ್ಗೊಳ್ಳುವ ಬಾಗಿಲು ಬಹುತೇಕ ಮುಚ್ಚಿದೆ. ಇದೇ ವೇಳೆ ಗಾಯದ ಸಮಸ್ಯೆಯಿಂದಾಗಿ ಅರ್ಹತಾ ಕೂಟದಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ ಸುಶೀಲ್ ಹೇಳಿದ್ದಾರೆ.
ಪುರುಷರ ಫ್ರೀಸ್ಟೈಲ್ ಸ್ಪರ್ಧೆಯ ಎರಡನೇ ದಿನ ಭಾರತ ಚಿನ್ನ ಗೆಲ್ಲಲು ವಿಫಲವಾಯಿತು. ದೀಪಕ್ ಪೂನಿಯ (88 ಕೆ.ಜಿ.) ಮತ್ತು ರಾಹುಲ್ ಅವಾರೆ (61 ಕೆ.ಜಿ.) ತಮ್ಮ ಸ್ಪರ್ಧೆಯಲ್ಲಿ ಸೋತು ಅಂತಿಮವಾಗಿ ಕಂಚಿಗೆ ತೃಪ್ತಿಪಟ್ಟರು.
ಜಿತೇಂದರ್ಗೆ ಬೆಳ್ಳಿ
ಕಜಾಕ್ಸ್ಥಾನದ ದನಿಯರ್ ಕೈಸನೋವ್ ವಿರುದ್ಧ ನಡೆದ ಫೈನಲ್ನಲ್ಲಿ ರಕ್ಷಣಾತ್ಮಕವಾಗಿ ಆಡಿದ ಜಿತೇಂದರ್ ಆಕ್ರಮಣದಲ್ಲಿ ವೈಫಲ್ಯ ಅನುಭವಿಸಿದರು. ಹೀಗಾಗಿ ಹಾಲಿ ಚಾಂಪಿಯನ್ ಎದುರು 1-3 ಅಂತರದಿಂದ ಸೋತು ಬೆಳ್ಳಿ ಪಡೆದರು. ಆದರೆ ಜಿತೇಂದರ್ ಅವರ ಈ ನಿರ್ವಹಣೆ ರಾಷ್ಟ್ರೀಯ ಫೆಡರೇಶನ್ ಅಧಕಾರಿಗಳಿಗೆ ತೃಪ್ತಿಯಾಗಿದ್ದು ಒಲಿಂಪಿಕ್ ಅರ್ಹತಾ ಕೂಟಕ್ಕೆ ಕಳುಹಿಸಲು ನಿರ್ಧರಿಸಿದ್ದಾರೆ. ಇಲ್ಲಿ ಜಿತೇಂದರ್ ಫೈನಲಿಗೇರಿದರೆ ಟೋಕಿಯೊ ಗೇಮ್ಸ್ಗೆ ನೇರವಾಗಿ ಅರ್ಹತೆ ಗಳಿಸಲಿದ್ದಾರೆ.