ಐಪಿಎಲ್ 2020: ಪಡಿಕ್ಕಲ್, ಇಶಾನ್, ನಟರಾಜನ್.. ಪ್ರತಿಭೆಗಳ ಮಹಾ ಸಂಗಮ
Team Udayavani, Nov 12, 2020, 1:17 PM IST
ಐಪಿಎಲ್ ಅಂದರೆ ಅದು ಯುವ ಹಾಗೂ ಪ್ರತಿಭಾನ್ವಿತ ಆಟಗಾರರ ಸಾಮರ್ಥ್ಯ ಪ್ರದರ್ಶನಕ್ಕೊಂದು ವೇದಿಕೆ. ಅನಾಮಧೇಯ ಕ್ರಿಕೆಟಿಗರೆಲ್ಲ ನಿರೀಕ್ಷೆಗೂ ಮಿಗಿಲಾದ ಪ್ರದರ್ಶನ ನೀಡುವುದು, ರಾಷ್ಟ್ರೀಯ ತಂಡವನ್ನು ಪ್ರವೇಶಿಸುವುದು, ಇಲ್ಲವೇ ದೇಶಿ ಕ್ರಿಕೆಟ್ನಲ್ಲಿ ಸಾಮರ್ಥ್ಯ ಸಾಬೀತುಪಡಿಸುವುದೆಲ್ಲ ಐಪಿಎಲ್ ಆರಂಭದಿಂದಲೂ ಕಂಡುಬಂದಿದೆ.
ಅರಬ್ ನಾಡಿನಲ್ಲಿ ನಡೆದ 2020ರ ಐಪಿಎಲ್ ಪಂದ್ಯಾವಳಿ ಕೂಡ ಇದಕ್ಕೆ ಹೊರತಾಗಿಲ್ಲ. ಹಾಗೆ ನೋಡಹೋದರೆ ಇಲ್ಲಿ ಎಂದಿಗಿಂತ ಹೆಚ್ಚಿನ ಸಂಖ್ಯೆಯ ಯುವ ಪ್ರತಿಭೆಗಳು ಹೊರಹೊಮ್ಮಿದವೆಂದೇ ಹೇಳಬೇಕು. ಇವರಲ್ಲಿ ಐವರು ಇಲ್ಲಿದ್ದಾರೆ.
ಬ್ಯಾಟಿಂಗ್ ಪರಾಕ್ರಮಿ ಪಡಿಕ್ಕಲ್
ನೀಳಕಾಯದ ಎಡಗೈ ಆರಂಭಕಾರ ದೇವದತ್ತ ಪಡಿಕ್ಕಲ್ ಈ ಬಾರಿ ಎಲ್ಲರನ್ನೂ ಮೋಡಿಗೈದ ಕ್ರಿಕೆಟಿಗ. ಕೇವಲ ಕೊಹ್ಲಿ, ಎಬಿಡಿ ಅವರನ್ನೇ ನಂಬಿ ಕುಳಿತ್ತಿದ್ದ ಆರ್ಸಿಬಿ ಬ್ಯಾಟಿಂಗ್ ಸರದಿಗೆ ಹೊಸ ಶಕ್ತಿ ತುಂಬಿದ ಆಟಗಾರ. ಸಾಧನೆಯಲ್ಲಿ ಇವರಿಬ್ಬರನ್ನೂ ಮೀರಿಸಿದ ಪಡಿಕ್ಕಲ್ 5 ಅರ್ಧ ಶತಕ, 473 ರನ್ ಬಾರಿಸಿ ಟೀಮ್ ಇಂಡಿಯಾದ ಭವಿಷ್ಯದ ಆರಂಭಕಾರನಾಗುವ ಎಲ್ಲ ಸಾಧ್ಯತೆಗಳನ್ನು ತೆರೆದಿಟ್ಟಿದ್ದಾರೆ.
ಇದನ್ನೂ ಓದಿ:ಪಂತ್ ವಿರುದ್ಧ ಮಾಡಲಾದ ಅಣಕಗಳು ಈಗ ಡಿಲೀಟ್!
ಕಿಶನ್; ಕೀಪರ್ ಕಂ ಸ್ಟ್ರೋಕ್ ಮೇಕರ್
ಮುಂಬೈಯ ಕೀಪರ್ ಹಾಗೂ ಎಡಗೈ ಆಟಗಾರನಾಗಿರುವ ಇಶಾನ್ ಕಿಶನ್ ಹಿಂದಿನ ಋತುಗಳಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಆದರೆ ಈ ಬಾರಿ 483 ರನ್ ಪೇರಿಸಿ ಪ್ರಚಂಡ ಪ್ರದರ್ಶನ ನೀಡಿದ್ದಾರೆ. ಜತೆಗೆ “ಸಿಕ್ಸರ್ ಕಿಂಗ್’ ಕೂಡ ಎನಿಸಿದ್ದಾರೆ. ಧೋನಿ ನಿವೃತ್ತಿ, ಪಂತ್ ವೈಫಲ್ಯವನ್ನೆಲ್ಲ ಪರಿಗಣಿಸುವಾಗ ಇಶಾನ್ ಕಿಶನ್ ಭಾರತ ತಂಡವನ್ನು ಪ್ರವೇಶಿಸುವ ದಿನ ದೂರ ಇಲ್ಲ ಎಂದೇ ಹೇಳಬೇಕು
ಯಾರ್ಕರ್ ಮೆಶಿನ್ ನಟರಾಜನ್
ತಮಿಳುನಾಡಿನ ಟಿ. ನಟರಾಜನ್ ಈ ಐಪಿಎಲ್ ಕಂಡ ಅತ್ಯಂತ ಅಪಾಯಕಾರಿ ಬೌಲರ್. ಸೀಸನ್ನಲ್ಲಿ ಅತ್ಯಧಿಕ ಯಾರ್ಕರ್ ಎಸೆದ ದಾಖಲೆ ಇವರದು. ಎಡಗೈ ಬೌಲರ್ ಆದ ಕಾರಣ ಸ್ಕೋಪ್ ಜಾಸ್ತಿ. ಸನ್ರೈಸರ್ ತಂಡದ ಪ್ಲೇ ಆಫ್ ಪ್ರವೇಶದಲ್ಲಿ ನಟರಾಜನ್ ಪಾತ್ರ ಮಹತ್ವದ್ದು. ಈಗಾಗಲೇ ಆಸ್ಟ್ರೇಲಿಯ ಪ್ರವಾಸಕ್ಕಾಗಿ ಆರಿಸಲಾದ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಮ್ಯಾಚ್ ವಿನ್ನರ್ ಋತುರಾಜ್
ಋತುರಾಜ್ ಗಾಯಕ್ವಾಡ್ ಸರಣಿ ಯನ್ನು ಸಕಾರಾತ್ಮಕವಾಗಿ ಆರಂಭಿಸದೇ ಇರ ಬಹುದು, ಆದರೆ ಕೋವಿಡ್ ಗೆದ್ದ ಈ ಬ್ಯಾಟ್ಸ್ಮನ್ ಬಳಿಕ ಪಂದ್ಯವನ್ನೂ ಗೆಲ್ಲಿಸಬಲ್ಲೆ ಎಂಬುದನ್ನು ನಿರೂಪಿಸಿದ್ದು ಮಾತ್ರ ಸುಳ್ಳಲ್ಲ. ಚೆನ್ನೈಬೇಗನೇ ರಿಟರ್ನ್ ಟಿಕೆಟ್ ಪಡೆದರೂ ಗಾಯಕ್ವಾಡ್ ಕೊನೆಯ 3 ಪಂದ್ಯಗಳನ್ನು ಗೆಲ್ಲಿಸಿ, ತಂಡದ ಕೊನೆಯ ಸ್ಥಾನದ ಅವಮಾನವನ್ನು ತಪ್ಪಿಸಿದ್ದನ್ನು ಮರೆಯುವಂತಿಲ್ಲ.
ಮೋಡಿಗೈದ ತೆವಾಟಿಯಾ
ಈ ಬಾರಿ ಎಲ್ಲ ಕ್ರಿಕೆಟ್ ಅಭಿಮಾನಿಗಳನ್ನೂ ಮೋಡಿಗೈದ ಒಂದು ಹೆಸರೆಂದರೆ ರಾಹುಲ್ ತೆವಾಟಿಯಾ. ರಾಜಸ್ಥಾನ್ನ ಈ ಲೆಗ್ಸ್ಪಿನ್ ಬೌಲಿಂಗ್ ಆಲ್ರೌಂಡರ್ ಕೆಳ ಕ್ರಮಾಂಕದಲ್ಲಿ ಬಂದು ಹೊಡಿಬಡಿ ಆಟದ ಮೂಲಕ ಎದುರಾಳಿಗಳನ್ನು ಬೆಚ್ಚಿಬೀಳಿಸಿದರು. ಪಂಜಾಬ್ ವಿರುದ್ಧ ಸಿಡಿದು ನಿಂತು ಏಕಾಂಗಿಯಾಗಿ ಪಂದ್ಯವನ್ನು ಗೆಲ್ಲಿಸಿಕೊಟ್ಟ ಬಳಿಕ ತೆವಾಟಿಯಾ ಹೆಸರು ಮನೆಮಾತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ
Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ
Gobi Manchurian ಬ್ಯಾನ್ ಎಫೆಕ್ಟ್: ಚಾಟ್ಸ್ ಮಾರಾಟ ಕುಸಿತ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು
Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ