ಯುವಿ… ಕೋಟ್ಯಂತರ ಭಾರತೀಯರ ಸ್ಫೂರ್ತಿ
Team Udayavani, Jun 11, 2019, 5:46 AM IST
ಭಾರತೀಯ ಕ್ರಿಕೆಟಿನ ಅಸಾಮಾನ್ಯ ಪ್ರತಿಭೆಯೊಂದು ತೆರೆಮರೆಗೆ ಸರಿದಿದೆ. ವಿಶ್ವ ಕ್ರಿಕೆಟಿನಲ್ಲಿ ಸಿಕ್ಸರ್ ಕಿಂಗ್ ಆಗಿ ಮೆರೆದಾಡಿದ, ಮಾರಕ ಕ್ಯಾನ್ಸರ್ ಅನ್ನೇ ಗೆದ್ದು ಬಂದ, ಭಾರತದ 2 ವಿಶ್ವಕಪ್ ಗೆಲುವುಗಳ ರೂವಾರಿಯೆನಿಸಿಕೊಂಡ ಅದ್ವಿತೀಯ ಹೋರಾಟಗಾರ ಯುವರಾಜ್ ಸಿಂಗ್ ಆಟ ಇನ್ನು ನೋಡಲು ಸಿಗುವುದಿಲ್ಲ.
ಶ್ರೇಷ್ಠ ಆಲ್ರೌಂಡರ್ಗಳಲ್ಲಿ ಒಬ್ಬ ರಾಗಿ, ಅತ್ಯುತ್ತಮ ಎಡಗೈ ಬ್ಯಾಟ್ಸ್ಮನ್, ಆರಂಭದ ದಿನಗಳಲ್ಲಿ ಅಷ್ಟೇ ಉತ್ತಮ ಕ್ಷೇತ್ರರಕ್ಷಕನಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಯುವಿ, ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಗೆದ್ದು ಬಂದು, ಮತ್ತೆ ತಂಡಕ್ಕೆ ಕಮ್ ಬ್ಯಾಕ್ ಮಾಡಿರುವುದು ಅವರಲ್ಲಿನ ಶ್ರೇಷ್ಠ ಹೋರಾಟಗಾರ ಇದ್ದ ಎನ್ನುವುದಕ್ಕೆ ನಿದರ್ಶನ.
ಯುವರಾಜ್ ಸಿಂಗ್ ಬದುಕು ಕೇವಲ ಕ್ರಿಕೆಟಿಗೆ ಮಾತ್ರ ಸಂಬಂಧಿಸಿದ್ದಲ್ಲ. ಇವರು ಕೋಟ್ಯಂತರ ಭಾರತೀಯರಿಗೆ ಸ್ಫೂರ್ತಿ. ಬದುಕಿನಲ್ಲೂ, ಕ್ರಿಕೆಟ್ ಅಂಗಳದಲ್ಲೂ ಸಾಕಷ್ಟು ಏರಿಳಿತ ಕಂಡರೂ, ಯಾವುದಕ್ಕೂ ಅಂಜದೇ, ದಿಟ್ಟತನ ತೋರಿ ಸೈ ಎನಿಸಿಕೊಂಡಿರುವುದು ಸಾಮಾನ್ಯ ಸಾಧನೆಯೇನಲ್ಲ.
ಮಹೋನ್ನತ ಗೆಲುವಿನ ರೂವಾರಿ
ಯುವರಾಜ್ ಭಾರತೀಯ ಕ್ರಿಕೆಟ್ ತಂಡದ ಹಲವು ಮಹೋನ್ನತ ಗೆಲುವುಗಳಲ್ಲಿ ಪ್ರಮುಖ ರೂವಾರಿಯಾಗಿ ಗುರುತಿಸಿಕೊಂಡವರು. ಅದರಲ್ಲೂ 2011ರ ವಿಶ್ವಕಪ್ ಸಾಹಸವಂತೂ ಅಮೋಘ.
ಮಾರಕ ಕ್ಯಾನ್ಸರ್ ದಾಳಿ ನಡೆಸಿದರೂ ಹೊರ ಜಗತ್ತಿಗೆ ತಿಳಿಯದಂತೆ ಗೌಪ್ಯ ವಾಗಿಟ್ಟುಕೊಂಡು, ವೀರೋಚಿತ ಆಲ್ರೌಂಡರ್ ಆಟದ ಮೂಲಕ ಸರಣಿಶ್ರೇಷ್ಠ ಪ್ರಶಸ್ತಿಯೊಂದಿಗೆ ಭಾರತಕ್ಕೆ ದ್ವಿತೀಯ ವಿಶ್ವಕಪ್ ತಂದುಕೊಡುವಲ್ಲಿ ಯುವಿ ಪಾತ್ರ ಮುಖ್ಯವಾಗಿತ್ತು.
ಕೆಣಕಿದ್ದಕ್ಕೆ ಸಿಕ್ಸರ್ ಉತ್ತರ!
ಕ್ರಿಕೆಟ್ ಅಂಗಳದಲ್ಲಿ ದಾಖಲಾದ ಸಾಧನೆಗಳು ಸಾವಿರ ಕಾಲಕ್ಕೂ ಮಾಸುವುದಿಲ್ಲ. ಅದರಲ್ಲೂ 2007ರ ಟಿ-20 ವಿಶ್ವಕಪ್ ಪಂದ್ಯಾವಳಿಯಲ್ಲಿ ಯುವಿ ಇಂಗ್ಲೆಂಡಿನ ಸ್ಟುವರ್ಟ್ ಬ್ರಾಡ್ ಬೌಲಿಂಗ್ನಲ್ಲಿ ಒಂದೇ ಓವರ್ನಲ್ಲಿ ಆರು ಸಿಕ್ಸರ್ ಸಿಡಿಸುವುದರೊಂದಿಗೆ, ತನ್ನನ್ನು ಕೆಣಕಿದ ಆ್ಯಂಡ್ರೂé ಫ್ಲಿಂಟಾಫ್ಗೆ ತಿರುಗೇಟು ನೀಡಿರುವುದು ಇನ್ನೂ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದಿದೆ.
-ಪ್ರಶಾಂತ್ ಪಾದೆ