ದೀಪಕ್ ಹತ್ಯೆಯಲ್ಲಿ ಬಿಜೆಪಿ ಪಾತ್ರ: HDK ವಿರುದ್ಧ ಮಾನನಷ್ಟ ಮೊಕದ್ದಮೆ
Team Udayavani, Jan 9, 2018, 7:11 PM IST
ಮಂಗಳೂರು: ದೀಪಕ್ ಹತ್ಯೆ ಪ್ರಕರಣದಲ್ಲಿ ಬಿಜೆಪಿ ನಾಯಕರ ಪಾತ್ರ ಇದೆ ಎಂದು ಬೇಜಾವಾಬ್ದಾರಿ ಹೇಳಿಕೆ ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಮಂಗಳೂರಿನ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಮಂಗಳವಾರ 1 ಕೋ.ರೂ.ಗಳ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಬಿಜೆಪಿ ಅಧ್ಯಕ್ಷ ಡಾ| ಭರತ್ ಶೆಟ್ಟಿ ತಿಳಿಸಿದ್ದಾರೆ.
ದೀಪಕ್ ಹತ್ಯೆಯ ತನಿಖೆಯನ್ನು ದಾರಿ ತಪ್ಪಿಸುವ ಹಾಗೂ ರಾಜ್ಯದ ಜನರಿಗೆ ಸುಳ್ಳು ಮಾಹಿತಿ ನೀಡಿ ಜನರನ್ನು ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ ಕುಮಾರಸ್ವಾಮಿ ಅವರ ಹೇಳಿಕೆ ಪರಿಣಾಮ ಬೀರುತ್ತದೆ. ಪೊಲೀಸರಿಗೆ ಗೊತ್ತಿಲ್ಲದ ಹಾಗೂ ಘಟನೆಯ ಬಗ್ಗೆ ಒಂದಿನಿತೂ ಅರಿಯದೆ ಮೈಸೂರಿನಲ್ಲಿ ಕುಳಿತು ಹೇಳಿಕೆ ನೀಡಿರುವ ಕುಮಾರಸ್ವಾಮಿ ಅವರ ವಿರುದ್ದ ಮಂಗಳೂರು ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲು ಮಾಡಲಾಗಿದೆ. ಬಿಜೆಪಿ ನಾಯಕರ ಕೈವಾಡ ಎಂಬಂತೆ ಕುಮಾರಸ್ವಾಮಿ ಅವರ ಹಿಟ್ ಆ್ಯಂಡ್ ರನ್ ಮತ್ತು ಬೇಜವಾಬ್ದಾರಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಬಿಜೆಪಿ ವತಿಯಿಂದ ಮೊಕದ್ದಮೆ ಹೂಡಲಾಗಿದೆ ಎಂದವರು ಹೇಳಿದರು.