ಸೋಂಕು ಸಂಕಷ್ಟದ ನಡುವೆಯೂ ಸಮಾಧಾನದ ಸುದ್ದಿ: ರಾಜ್ಯದಲ್ಲಿ 106 ಜನರು ಗುಣಮುಖ
Team Udayavani, Apr 19, 2020, 1:14 PM IST
ಬೆಂಗಳೂರು: ರಾಜ್ಯದಲ್ಲಿ ಅಪಾಯಕಾರಿ ಕೋವಿಡ್-19 ಸೋಂಕಿತರ ಸಂಖ್ಯೆ ದಿನಕಳೆದಂತೆ ಏರುತ್ತಿದೆ. ಕಳೆದ ಕೆಲವು ದಿನಗಳಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡ ಸೋಂಕಿತರ ಸಂಖ್ಯೆಯಲ್ಲಿ ಇಂದು ಸ್ವಲ್ಪ ಇಳಿಮುಖವಾಗಿದೆ.
ಇದರೊಂದಿಗೆ ರಾಜ್ಯದ ಜನರಿಗೆ ಸಮಾಧಾನ ತರುವ ಸುದ್ದಿಯೊಂದಿದೆ. ರಾಜ್ಯದಲ್ಲಿ ಒಟ್ಟು 388 ಸೋಂಕಿತರ ಪೈಕಿ 106 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ರಾಜ್ಯದಲ್ಲಿ ಬಿಡುಗಡೆಯಾದವರ ಸರಾಸರಿ 27.3ರಷ್ಟಿದೆ. ಈ ಸರಾಸರಿ ಮತ್ತಷ್ಟು ಹೆಚ್ಚುವ ವಿಶ್ವಾಸದಲ್ಲಿದೆ ರಾಜ್ಯ ಸರಕಾರ.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಈ ಗುಣಮುಖರಾದವರ ಸಂಖ್ಯೆ ಉತ್ತಮವಾಗಿದೆ.
ಉಡುಪಿಯಲ್ಲಿ ನಾಲ್ಕು ಪ್ರಕರಣಗಳ ಪೈಕಿ ಮೂವರು ಡಿಸ್ಚಾರ್ಜ್ ಆಗಿದ್ದರೆ, ಓರ್ವ ಐಸೊಲೇಶನ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 11 ಪ್ರಕರಣಗಳ ಪೈಕಿ 10 ಜನರು ಡಿಸ್ಚಾರ್ಜ್ ಆಗಿದ್ದು, ಓರ್ವ ಐಸೊಲೇಟೆಟ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಹನ್ನೊಂದು ಸೋಂಕಿತರಿದ್ದು ಇಬ್ಬರು ಐಸೊಲೇಶನ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು ಒಂಬತ್ತು ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.