ಕೋವಿಡ್ ಕಳವಳ: ರಾಜ್ಯದಲ್ಲಿ ಮತ್ತೆ 213 ಜನರಿಗೆ ಸೋಂಕು ದೃಢ
Team Udayavani, Jun 15, 2020, 6:36 PM IST
ಬೆಂಗಳೂರು: ರಾಜ್ಯದ ಕೋವಿಡ್-19 ಸೋಂಕಿತರ ಸಂಖ್ಯೆ ನಿನ್ನೆಯಷ್ಟೇ ಏಳು ಸಾವಿರ ತಲುಪಿದ್ದು, ಇಂದು ಮತ್ತಷ್ಟು ಹೆಚ್ಚಳವಾಗಿದೆ. ಇಂದು ರಾಜ್ಯದಲ್ಲಿ ಮತ್ತೆ 213 ಜನರಿಗೆ ಕೋವಿಡ್-19 ಸೋಂಕು ತಾಗಿರುವುದು ದೃಢವಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 7213ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಇಂದು 180 ಮಂದಿ ಸೋಂಕಿತರು ಗುಣಮುಖರಾಗಿ ಮನೆಗೆ ತೆರಳಿದ್ದು, ರಾಜ್ಯದಲ್ಲಿ 4135 ಒಟ್ಟು ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ ರಾಜ್ಯದಲ್ಲಿ 2987 ಸಕ್ರಿಯ ಪ್ರಕರಣಗಳಿವೆ.
ಇಂದು ಕಲಬುರಗಿಯಲ್ಲಿ ಅತೀ ಹೆಚ್ಚು ಎಂದರೆ 48 ಮಂದಿಗೆ ಸೋಂಕು ದೃಢವಾಗಿದೆ. ಉಳಿದಂತೆ ಬೆಂಗಳೂರು ನಗರದಲ್ಲಿ 35 ಮಂದಿಗೆ ಧಾರವಾಡದಲ್ಲಿ 34 ಮಂದಿಗೆ ಕೋವಿಡ್ -19 ಸೋಂಕು ತಾಗಿರುವುದು ದೃಢವಾಗಿದೆ.
ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ 23 ಜನರಿಗೆ ಸೋಂಕು ತಾಗಿದ್ದರೆ, ರಾಯಚೂರಿನಲ್ಲಿ 18, ಯಾದಗಿರಿಯಲ್ಲಿ 13, ಬೀದರ್ ಜಿಲ್ಲೆಯಲ್ಲಿ 11 ಮತ್ತು ಬಳ್ಳಾರಿಯಲ್ಲಿ 10 ಮಂದಿಗೆ ಕೋವಿಡ್ ಸೋಂಕು ತಾಗಿರುವುದು ಪರೀಕ್ಷೆಯಲ್ಲಿ ದೃಢವಾಗಿದೆ.
ಕೊಪ್ಪಳದಲ್ಲಿ ನಾಲ್ಕು ಮಂದಿಗೆ, ವಿಜಯಪುರ, ಬಾಗಲಕೋಟೆ, ಶಿವಮೊಗ್ಗದಲ್ಲಿ ತಲಾ ಮೂವರಿಗೆ, ಉಡುಪಿ ಮತ್ತು ಹಾವೇರಿ ಮತ್ತು ರಾಮನಗರದಲ್ಲಿ ತಲಾ ಇಬ್ಬರಿಗೆ, ಹಾಸನ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ತಲಾ ಒಬ್ಬರಿಗೆ ಕೋವಿಡ್-19 ಸೋಂಕು ತಾಗಿದೆ.
ರಾಜ್ಯದಲ್ಲಿ ಒಟ್ಟು ಕೋವಿಡ್-19 ಸೋಂಕಿತರ ಸಂಖ್ಯೆ 7213ಕ್ಕೆ ಏರಿಕೆಯಾಗಿದೆ. ಇದುವರೆಗೆ ಒಟ್ಟು 2987 ಮಂದಿ ಚಿಕಿತ್ಸೆ ಮುಗಿಸಿ ಬಿಡುಗಡೆಯಾಗಿದ್ದಾರೆ. ಇಂದು ರಾಜ್ಯದಲ್ಲಿ2 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಇದುವರೆಗೆ ಕೋವಿಡ್ 19 ಸೋಂಕಿನ ಕಾರಣದಿಂದ ರಾಜ್ಯದಲ್ಲಿ 88 ಮಂದಿ ಮೃತರಾಗಿದ್ದಾರೆ. ಮೂವರು ಸೋಂಕಿತರು ಕೋವಿಡ್ ಅಲ್ಲದ ಕಾರಣದಿಂದ ಸಾವನ್ನಪ್ಪಿದ್ದಾರೆ.