ಬಿಎಸ್ವೈ ಮೂಲೆಗುಂಪಾಗಿಸಲು 3 ಡಿಸಿಎಂ ಹುದ್ದೆ
Team Udayavani, Aug 28, 2019, 3:07 AM IST
ಬಾಗಲಕೋಟೆ: ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಸ್ವತಃ ಬಿಜೆಪಿ ಹೈಕಮಾಂಡ್ಗೆ ಇಷ್ಟವಿರಲಿಲ್ಲ. ಗೋಗರೆದು ಸಿಎಂ ಆಗಿದ್ದಾರೆ. ಅವರನ್ನು ಮೂಲೆಗುಂಪು ಮಾಡಲು ಮೂರು ಡಿಸಿಎಂ ಹುದ್ದೆ ಸೃಷ್ಟಿ ಮಾಡಿದ್ದಾರೆ. ಹೀಗಾಗಿ, ಈ ಸರ್ಕಾರ ಎಷ್ಟು ದಿನ ಇರುತ್ತದೆಯೋ ಹೇಳಕ್ಕಾಗಲ್ಲ. ಅವರ ಸ್ವಯಂಕೃತ ಅಪ ರಾಧದಿಂದಲೇ ಸರ್ಕಾರ ಬೀಳುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಭವಿಷ್ಯ ನುಡಿದ್ದಾರೆ.
ಜಮಖಂಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಬಿಜೆಪಿ ಸರ್ಕಾರ ಬೀಳಿಸಲು ನಾವೇನು ಕೈ ಹಾಕಲ್ಲ. ಹಸ್ತಕ್ಷೇಪ ಮಾಡಲು ನನಗೆ ಇಷ್ಟವೂ ಇಲ್ಲ. ಖಾತೆ ಹಂಚಿಕೆ ವೇಳೆ ಬಿಜೆಪಿಯಲ್ಲಿ ಹಿರಿತನಕ್ಕೆ ಬೆಲೆ ಕೊಟ್ಟಿಲ್ಲ ಎಂಬುದು ಸ್ಪಷ್ಟ. ಕೆ.ಎಸ್.ಈಶ್ವರಪ್ಪ, ಆರ್. ಅಶೋಕ ಹಿಂದೆಯೇ ಉಪ ಮುಖ್ಯಮಂತ್ರಿಯಾಗಿದ್ದವರು. ಜಗದೀಶ ಶೆಟ್ಟರ ಸಿಎಂ ಆಗಿದ್ದರು. ಅವರನ್ನು ಡಿಸಿಎಂ ಮಾಡಿಲ್ಲ. ಲಕ್ಷ್ಮಣ ಸವದಿ ಈ ಹಿಂದೆ ಶಾಸಕರಾದವರು. ಅವರನ್ನು ಡಿಸಿಎಂ ಮಾಡಿದ್ದಾರೆ’ ಎಂದರು.
ಗೋವಿಂದ ಕಾರಜೋಳ ಆರ್ಎಸ್ಎಸ್ನಿಂದ ಬಂದವರಲ್ಲ. ಹಿಂದೆ ನಮ್ಮಲ್ಲಿ ಇದ್ದರು. ಈಗ ಅವರನ್ನು ಡಿಸಿಎಂ ಮಾಡಲಾಗಿದೆ. ಹೀಗಾಗಿ, ಅಸಮಾಧಾನ ಸ್ಫೋಟ ಆಗೇ ಆಗುತ್ತದೆ. ಡಿಸಿಎಂ ಹುದ್ದೆ ಸಾಂವಿಧಾನಿಕವಲ್ಲ. ಎಲ್ಲರನ್ನೂ ಸಮಾಧಾನ ಮಾಡಲು 3 ಡಿಸಿಎಂ ಹುದ್ದೆ ಸೃಷ್ಟಿ ಮಾಡಿದ್ದಾರೆ. ಹಿಂದೆ, ಎರಡು ಡಿಸಿಎಂ ಸೃಷ್ಟಿಸಿದವರೂ ಇವರೇ. ಈಗ ಮೂರು ಡಿಸಿಎಂ ಮಾಡಿದ್ದಾರೆ. ಯಡಿಯೂರಪ್ಪ ಅವರನ್ನು ಕಟ್ಟಿ ಹಾಕಲು ಈ ರೀತಿ ಮೂರು ಡಿಸಿಎಂ ಹುದ್ದೆ ಮಾಡಿದ್ದಾರೆ. ಬಿಜೆಪಿ ಹೈಕಮಾಂಡ್ ಮಾಡಿರೋದು ಬಿಎಸ್ವೈಗೆ ಇಷ್ಟವಿಲ್ಲ. ಬಿಎಸ್ವೈ ಮೇಲೆ ಒತ್ತಡ ಹಾಕಿ ಹೈಕಮಾಂಡ್ ಡಿಸಿಎಂ ಮಾಡಿದ್ದಾರೆ. ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಲು ಈ ರೀತಿ ಮಾಡಿದ್ದಾರೆ ಎಂದರು.
ತಿಂಗಳಾದರೂ ಕಚ್ಚಾಟ ನಿಂತಿಲ್ಲ
ಬೆಂಗಳೂರು: “ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ತಿಂಗಳಾಗಿದೆ. ಇನ್ನೂ ಖಾತೆ ಹಂಚಿಕೆಯ ಕಚ್ಚಾಟದಲ್ಲಿಯೇ ಕಾಲ ಕಳೆಯುತ್ತಿದ್ದಾರೆ’ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, “ಬಿಜೆಪಿಯವರು ಕಾಂಗ್ರೆಸ್ ಹೈಕಮಾಂಡ್ ಸಂಸ್ಕೃತಿ ಬಗ್ಗೆ ಲೇವಡಿ ಮಾಡುತ್ತಿದ್ದರು. ಈಗ ಅವರೇನು ಮಾಡುತ್ತಿದ್ದಾರೆ? ಅಧಿಕಾರ ಹಿಡಿದುಕೊಂಡು ದೆಹಲಿ, ಬೆಂಗಳೂರು ತಿರುಗಾಡುತ್ತಿದ್ದಾರೆ.
ಬಿಜೆಪಿ ಹೈ ಕಮಾಂಡ್ ಯಡಿಯೂರಪ್ಪಗೆ ಸ್ವತಂತ್ರವಾಗಿ ಕೆಲಸ ಮಾಡಲು ಬಿಡುತ್ತಿಲ್ಲ’ ಎಂದು ಹೇಳಿದರು. ಇದೇ ವೇಳೆ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಆರೋಪ ಪ್ರತ್ಯಾರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಇಬ್ಬರೂ ಒಬ್ಬರ ಮೇಲೊಬ್ಬರು ಆರೋಪ ಮಾಡಿದ್ದಾರೆ. ಇದರಲ್ಲಿ ಮೂರನೆಯವರು ಮಾತನಾಡುವುದು ಸರಿಯಲ್ಲ ಎಂದರು.
ಸರ್ಕಾರ ಟೇಕ್ ಆಫ್ ಆಗುವುದು ಯಾವಾಗ?
ಬೆಂಗಳೂರು: “ಯಡಿಯೂರಪ್ಪ ಮುಖ್ಯಮಂತ್ರಿ ಯಾಗಿ ಪ್ರಮಾಣ ವಚನ ಸ್ವೀಕರಿಸಲು 3 ದಿನ, ಸಂಪುಟ ರಚನೆಗೆ 26 ದಿನ ಮತ್ತು ಖಾತೆ ಹಂಚಿಕೆಗೆ 6 ದಿನ ತೆಗೆದುಕೊಂಡಿದ್ದಾರೆ. ಭಿನ್ನಮತ ಶಮನಕ್ಕೆ ಎಷ್ಟು ದಿನ ಬೇಕು? ಈ ಎಲ್ಲದರ ನಡುವೆ ನಿಮ್ಮ ಸರ್ಕಾರ ಟೇಕ್ ಆಫ್ ಆಗುವುದು ಯಾವಾಗ?’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ರಾಜ್ಯದ ಸದ್ಯದ ಬಿಜೆಪಿಯ ಪರಿಸ್ಥಿತಿಯ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಮುಖ್ಯಮಂತ್ರಿ,
ಉಪ ಮುಖ್ಯಮಂತ್ರಿ, ಸಂಪುಟ ರಚನೆ, ಖಾತೆ ಹಂಚಿಕೆಯ ಕಸರತ್ತು ಗಮನಿಸಿದರೆ, ಜನ ಪ್ರತಿನಿಧಿಗಳ ಧ್ವನಿ ಉಡುಗಿಹೋಗಿ ಸಂವಿಧಾನ ಬಾಹಿರ ಶಕ್ತಿಗಳೇ ವಿಜೃಂಭಿಸುತ್ತಿರುವ ಹಾಗೆ ಕಾಣಿಸುತ್ತಿದೆ ಎಂದು ಆರೋಪಿಸಿದ್ದಾರೆ. ಯಡಿಯೂರಪ್ಪ ಅನುಭವಿ ಸುತ್ತಿರುವ ನೋವು, ಅವಮಾನ, ಅನ್ಯಾಯ, ಅಸಂ ತೋಷವನ್ನು ನೋಡಿದರೆ, ಅವರ ರಾಜಕೀಯ ಎದು ರಾಳಿಯಾದ ನನ್ನಂಥವನಿಗೂ ಅವರ ಬಗ್ಗೆ ಅನುಕಂಪ ಮೂಡುವಂತಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.