370 ರದ್ದು: ಜೈ ಮೋದಿ ಎಂದ ಪ್ರೊ.ಭಗವಾನ್
Team Udayavani, Aug 7, 2019, 3:03 AM IST
ಮೈಸೂರು: ಸಂವಿಧಾನದ 370ನೇ ವಿಧಿ ಮತ್ತು 35ಎ ಪರಿಚ್ಛೇದದಲ್ಲಿ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಸ್ವಾಗತಿಸಿದ್ದಾರೆ. ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, “ಸುಮಾರು 72 ವರ್ಷಗಳಿಂದ ಸಂಕಟದಲ್ಲಿ ನರಳುತ್ತಿದ್ದ ಕಾಶ್ಮೀರದ ಜನತೆಯನ್ನು ನಮ್ಮ ನೆಚ್ಚಿನ ಪ್ರಧಾನಮಂತ್ರಿಯವರು ಆರ್ಟಿಕಲ್ 370 ಅನ್ನು ರದ್ದು ಮಾಡುವ ಮೂಲಕ ರಾಷ್ಟ್ರವನ್ನು ಸಂತಸಪಡಿಸಿದ್ದಾರೆ. ಪ್ರತಿ ದಿನ ಏನಿಲ್ಲ ಅಂದರೂ 7-8 ಕೋಟಿ ರೂಪಾಯಿಗಳು ವ್ಯರ್ಥವಾಗಿ ಖರ್ಚಾಗುತ್ತಿದ್ದವು.
ಅದನ್ನು ಜನತೆಯ ಕಲ್ಯಾಣಕ್ಕಾಗಿ, ಅಭಿವೃದ್ಧಿಗಾಗಿ ಇನ್ನು ಮುಂದೆ ಬಳಸಲು ಅನುಕೂಲವಾಗುತ್ತದೆ. ಆರ್ಟಿಕಲ್ 370 ಅನ್ನು ರದ್ದು ಮಾಡುವ ಮೂಲಕ ಪ್ರಧಾನಿ ಮೋದಿ ಮತ್ತು ಅವರ ಕೇಂದ್ರ ಸರ್ಕಾರ, ಇಡೀ ದೇಶವನ್ನು ಒಂದೇ ಸಂವಿಧಾನದಡಿ ತಂದಿರುವುದು ಶ್ಲಾಘನೀಯ ಕಾರ್ಯ. ಸನ್ಮಾನ್ಯ ಮೋದಿ ಅವರು ಇತಿಹಾಸದಲ್ಲಿ ಅಜರಾಮರರಾಗಿ ಉಳಿಯುತ್ತಾರೆ ಎನ್ನಲು ಸಂತೋಷ ಮತ್ತು ಹೆಮ್ಮೆ ಆಗುತ್ತದೆ. ಜೈ ನರೇಂದ್ರಮೋದಿ!’ ಎಂದು ಹೇಳಿದ್ದಾರೆ.