ರಾಜ್ಯಾದ್ಯಂತ “ಮತ್ತೆ ಕಲ್ಯಾಣ’ ಕಾರ್ಯಕ್ರಮ
Team Udayavani, Jun 26, 2019, 3:00 AM IST
ಹೊಳಲ್ಕೆರೆ: 12ನೇ ಶತಮಾನದಲ್ಲಿ ಬಸವಣ್ಣನವರು ಜಾತ್ಯತೀತ ಚಿಂತನೆಯನ್ನು ಬಿತ್ತುವ ಮೂಲಕ ಸಾಮಾಜಿಕ ಕ್ರಾಂತಿ ಮಾಡಿದ್ದರು. ಹಾಗಾಗಿ, ಶರಣರ ವಿಚಾರಗಳನ್ನು ಇಂದಿನ ಯುವಕರಲ್ಲಿ ಬಿತ್ತುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ “ಮತ್ತೆ ಕಲ್ಯಾಣ’ ಎನ್ನುವ ಅಭಿಯಾನ ನಡೆಸಲಾಗುವುದು ಎಂದು ಸಾಣೇಹಳ್ಳಿಯ ಡಾ| ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಆರ್.ನುಲೇನೂರಿನಲ್ಲಿ ನಡೆದ ವಚನಕಾರ ನುಲಿಯ ಚಂದ್ರಯ್ಯನವರ ಸ್ಮರಣೋತ್ಸವ ಹಾಗೂ ಕೆರೆ ಅಭಿವೃದ್ಧಿಗೆ ಚಾಲನೆ ನೀಡಿ ಶ್ರೀಗಳು ಆಶೀರ್ವಚನ ನೀಡಿದರು. “ಮತ್ತೆ ಕಲ್ಯಾಣ’ ಕಾರ್ಯಕ್ರಮವನ್ನು ಆ. 1ರಿಂದ 30ರವರೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಡೆಸಲಾಗುವುದು.
ಬೆಳಗ್ಗೆ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ, ಸಂಜೆ ಚಿಂತಕರು, ಸಾಹಿತಿಗಳು ಮತ್ತು ವಿಚಾರವಾದಿಗಳ ಜತೆ ಪಾದಯಾತ್ರೆ ಮಾಡಲಾಗುವುದು ಎಂದರು. ಈ ಕಾರ್ಯಕ್ರಮವನ್ನು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಎಣ್ಣೆಬೈಲ್ ಗ್ರಾಮದಿಂದ ಆರಂಭಿಸಿ ಬಸವ ಕಲ್ಯಾಣದಲ್ಲಿ ಮುಕ್ತಾ¤ಯಗೊಳಿಸಲಾಗುವುದು ಎಂದರು.