ಅನರ್ಹರ ಕೈಬಿಡಲು ಜಿಲ್ಲಾವಾರು ಮರು ಸಮೀಕ್ಷೆ?
Team Udayavani, Feb 13, 2019, 12:30 AM IST
ಬೆಂಗಳೂರು: ರಾಜ್ಯ ಸರಕಾರದ ಆರ್ಥಿಕ ಪರಿಸ್ಥಿತಿ ಸದ್ಯಕ್ಕೆ ಉತ್ತಮ ಎಂದು ಕಂಡು ಬಂದರೂ ದೀರ್ಘಕಾಲಿಕವಾಗಿ ಆರ್ಥಿಕ ಶಿಸ್ತು ಕಾಪಾಡಿಕೊಳ್ಳಲು “ಬಿಗಿ ಹಿಡಿತ’ ಅಗತ್ಯ ಎಂದು ವಿತ್ತೀಯ ನಿರ್ವಹಣೆ ಪರಿಶೀಲನ ಸಮಿತಿ ಸಲಹೆ ರೂಪದ ಎಚ್ಚರಿಕೆ ನೀಡಿದೆ.
ಅತೀ ಮುಖ್ಯವಾಗಿ ಅನ್ನಭಾಗ್ಯ, ನೀರಾವರಿ ಪಂಪ್ಸೆಟ್, ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ, ಸಾಮಾಜಿಕ ಭದ್ರತಾ ಪಿಂಚಣಿ, ಸಹಾಯ ಧನ ಬೆಂಬಲ ಮೊದಲಾದವುಗಳನ್ನು ಮತ್ತೂಮ್ಮೆ ಪರಿಶೀಲಿಸಿ ನೇರ ಸಹಾಯಧನ ವರ್ಗಾ ವಣೆ ಯನ್ನು “ಆಧಾರ್’ನೊಂದಿಗೆ ಜೋಡಿಸಿ ಅನರ್ಹ ಫಲಾನುಭವಿಗಳನ್ನು ಕೈ ಬಿಡಲು ಜಿಲ್ಲಾವಾರು ಸಮೀಕ್ಷೆ ಕೈಗೊಳ್ಳುವಂತೆ ಸಮಿತಿ ಸಲಹೆ ನೀಡಿದೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಪ್ರಮುಖವಾಗಿ 48,601 ಕೋಟಿ ರೂ. ಸಾಲ ಮತ್ತು ಅಬಕಾರಿ ಬಾಬಿ¤ನಿಂದ 20,950 ಕೋಟಿ ರೂ. ಆದಾಯ ನಿರೀಕ್ಷೆಯಲ್ಲಿ ಜನಪ್ರಿಯ ಯೋಜನೆಗಳನ್ನು ಬಜೆಟ್ನಲ್ಲಿ ಘೋಷಿಸಲಾಗಿದೆಯಾದರೂ ಅವೆಲ್ಲ ದರ ಅನುಷ್ಠಾನಕ್ಕಾಗಿ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವಂತೆಯೂ ಸೂಚಿಸಿದೆ.
ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮ ದಡಿ ಮುಖ್ಯ ಕಾರ್ಯದರ್ಶಿ ನೇತೃತ್ವ ದಲ್ಲಿ ರಚಿಸಲಾಗಿರುವ ವಿತ್ತೀಯ ನಿರ್ವಹಣೆ ಮತ್ತು ಪರಿಶೀಲನ ಸಮಿತಿಯು ಸರಕಾರಕ್ಕೆ ಕೆಲ ವೊಂದು ಸಲಹೆಗಳನ್ನು ನೀಡಿದೆ. ರಾಜ್ಯದ ಸಾಲದ ಪ್ರಮಾಣ ಈಗಾಗಲೇ 3,27,209 ಕೋಟಿ ರೂ. ಗಳಿಗೆ ತಲುಪಿರುವ ಬಗ್ಗೆಯೂ ಸಮಿತಿ ಆತಂಕ ವ್ಯಕ್ತಪಡಿಸಿದೆ ಎಂದು ಆರ್ಥಿಕ ಇಲಾಖೆ ಮೂಲಗಳು ತಿಳಿಸಿವೆ.
ಏನೇನು ಸಲಹೆ?
ಬ್ಯಾಂಕುಗಳಲ್ಲಿರುವ ಸರಕಾರದ ಠೇವಣಿಗಳ ದುರುಪಯೋಗ ತಡೆಗಾಗಿ ಹಣಕಾಸು ಇಲಾಖೆಯು ನೀಡಿದ ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಇದಕ್ಕಾಗಿ ಎಲ್ಲ ಇಲಾಖೆ ಗಳ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಲು ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಹೊಣೆಗಾರಿಕೆ ನೀಡಬೇಕು.
ರೈತರ ಸಾಲ ಮನ್ನಾ ಯೋಜನೆಯಿಂದ ವೆಚ್ಚಗಳು ಹೆಚ್ಚಾಗಿವೆ. ಹೀಗಾಗಿ, ಆಯ-ವ್ಯಯದ ಅನಂತರ ಪೂರಕ ಅನುದಾನದ ಅಗತ್ಯತೆ ಕಡಿಮೆ ಗೊಳಿಸಬೇಕು.
ಎಸ್ಸಿಎಸ್ಪಿ/ಟಿಎಸ್ಪಿ ಕಾಯ್ದೆಯ 2013-14ನೇ ವರ್ಷದಲ್ಲಿ ಜಾರಿಗೆ ಬಂದಿದ್ದು, ಕಳೆದ ಐದು ವರ್ಷಗಳ ಅನುಭವದ ಆಧಾರದ ಮೇಲೆ ಆರ್ಥಿಕ ಇಲಾಖೆಯು ಸಮಾಜ ಕಲ್ಯಾಣ ಇಲಾಖೆಯೊಂದಿಗೆ ಸಮಾಲೋಚಿಸಿ ಹಂಚಿಕೆಗಳ ಲೆಕ್ಕಾಚಾರ ಸರಿಯಾಗಿ ಮಾಡುವ ಮಾರ್ಗಗಳನ್ನು ಪರಿಶೀಲಿಸಬಹುದು.
6ನೇ ವೇತನ ಆಯೋಗದ ಶಿಫಾರಸು ಪ್ರಕಾರ, ವಿವಿಧ ವೃಂದಗಳು ಮತ್ತು ಇಲಾಖೆಗಳ ವಿಲೀನ, ಖಾಲಿ ಹುದ್ದೆಗಳ ಮರು ನಿಯೋಜನೆ.
ಮಾರ್ಗೋಪಾಯ ಕಂಡುಕೊಳ್ಳಿ
ಜಿಎಸ್ಟಿ ನಷ್ಟ ಪರಿಹಾರವು 2022-23ರಿಂದ ಸ್ಥಗಿತಗೊಳ್ಳುವ ಕಾರಣ, ರಾಜಸ್ವ ಸಂಗ್ರಹಣೆಯಲ್ಲಿ ಇಳಿಕೆ ಯಾಗುವುದರಿಂದ ರಾಜ್ಯದ ಅಭಿ ವೃದ್ಧಿ ಕಾರ್ಯ ಗಳಿಗೆ ಪೆಟ್ಟು ಬೀಳುವ ಸಾಧ್ಯತೆ ಯಿದೆ. ರಾಜ್ಯದ ಹಿತಾಸಕ್ತಿ ಕಾಪಾಡಲು ಈ ವಿಷಯವನ್ನು ಆರ್ಥಿಕ ಇಲಾಖೆಯು ಜಿಎಸ್ಟಿ ಸಮಿತಿ ಮತ್ತು ಕೇಂದ್ರ ಸರಕಾರದ ಗಮನಕ್ಕೆ ತಂದು ಸೂಕ್ತ ಮಾರ್ಗೋಪಾಯ ಕಂಡುಕೊಳ್ಳಬೇಕು ಎಂದು ವಿತ್ತೀಯ ನಿರ್ವಹಣ ಪರಿಶೀಲನ ಸಮಿತಿಯು ರಾಜ್ಯ ಸರಕಾರಕ್ಕೆ ಸಲಹೆ ನೀಡಿದೆ.
ಎಸ್. ಲಕ್ಷ್ಮೀನಾರಾಯಣ