ಬೆಂಗಳೂರಲ್ಲೂ ಕಲಿತಿದ್ದ ಅಭಿನಂದನ್ ವರ್ಧಮಾನ್
Team Udayavani, Mar 3, 2019, 12:30 AM IST
ಬೆಂಗಳೂರು: ಶತ್ರು ಪಡೆಯ ವಿಮಾನವನ್ನು ಹೊಡೆದುರುಳಿಸಿ,ನಂತರ ಆ ದೇಶದಿಂದ ತಾಯ್ನಾಡಿಗೆ ಹಿಂತಿರುಗಿದ ಭಾರತದ “ರಿಯಲ್ ಹೀರೋ’ ಅಭಿನಂದನ್ ವರ್ಧಮಾನ್ಗೂ ಬೆಂಗಳೂರಿಗೂ ಅವಿನಾಭಾವ ನಂಟಿದೆ.
ಅಭಿನಂದನ್ ಹಾಗೂ ಅವರ ಪತ್ನಿ ನಿವೃತ್ತ ಸ್ಕ್ವಾಡ್ರನ್ ಲೀಡರ್ ತಾನ್ವಿ ತಮ್ಮ ಶಿಕ್ಷಣದ ಪ್ರಮುಖ ಘಟ್ಟ 11 ಮತ್ತು 12ನೇ ತರಗತಿ ಪೂರೈಸಿದ್ದು ಎನ್ಎಎಲ್ (ನ್ಯಾಷನಲ್ ಏರೋ ಸ್ಪೇಸ್ ಲ್ಯಾಬೋರೇಟರೀಸ್) ಕೇಂದ್ರೀಯ ವಿದ್ಯಾಲಯದಲ್ಲಿ. ವಿದ್ಯಾರ್ಥಿಯಾಗಿದ್ದಾಗ ಅಭಿನಂದನ್ ಮಾಡಿದ ಭಾಷಣಗಳು, ಕ್ರೀಡೆಯಲ್ಲಿ ತಂದುಕೊಟ್ಟ ಕೀರ್ತಿ, ಫೇರ್ವೆಲ್ ಪಾರ್ಟಿಯಲ್ಲಿ ಸಂಭ್ರಮಿಸಿದ್ದು ಸೇರಿದಂತೆ ಅವರ ಶಾಲಾ ದಿನಗಳು ಈಗಲೂ ಆವರಣದಲ್ಲಿ ಹಚ್ಚಹಸಿರಾಗಿವೆ. ಹಾಗಾಗಿ, ಅತ್ತ ಪಾಕಿಸ್ತಾನದಲ್ಲಿ ಅಭಿನಂದನ್ ಸಿಕ್ಕಿಹಾಕಿ ಕೊಂಡಿ ದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಇಲ್ಲಿನ ಶಿಕ್ಷಕರ ಕಣ್ಣಲ್ಲಿ ನೀರು ಜಿನುಗಿತು. ದೇವರ ಪ್ರಾರ್ಥನೆಗೆ ಮೊರೆ ಹೋದರು. ತಾಯ್ನಾಡಿಗೆ ವಾಪಸ್ಸಾದಾಗ ಅದೇ ಶಿಕ್ಷಕರ ಕಣ್ಣುಗಳಲ್ಲಿ ಆನಂದಭಾಷ್ಪ ಮೂಡಿತು.
ನರ್ಮದಾ ಹೌಸ್ ಕ್ಯಾಪ್ಟನ್ ಆಗಿದ್ದ: 1998-99 ಮತ್ತು 1999-2000ರಲ್ಲಿ ಅಭಿನಂದನ್ ಇಲ್ಲಿನ ವಿದ್ಯಾರ್ಥಿಯಾಗಿದ್ದರು. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಮುಂಚೂಣಿಯಲ್ಲಿದ್ದರು. ಸಾಮಾನ್ಯವಾಗಿ ಕೇಂದ್ರೀಯ ವಿದ್ಯಾಲಯದಲ್ಲಿ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ ಆಧರಿಸಿ ಹೌಸ್ಗಳನ್ನು ಮಾಡಲಾಗುತ್ತದೆ. ಪ್ರತಿಯೊಂದಕ್ಕೂ ಒಂದೊಂದು ಹೆಸರಿಡಲಾಗುತ್ತದೆ. ಅಭಿನಂದನ್ “ನರ್ಮದಾ ಹೌಸ್’ನ ಕ್ಯಾಪ್ಟನ್ ಆಗಿದ್ದರು. ಶೇ. 75ಕ್ಕಿಂತ ಹೆಚ್ಚು ಅಂಕ ಗಳಿಸಿದ್ದರು ಎಂದು ಶಾಲಾ ಪ್ರಾಂಶುಪಾಲ ಎಂ.ಮನೋಹರನ್ ಪಿಳ್ಳೆ„ ಮೆಲುಕು ಹಾಕಿದರು.
● ವಿಜಯಕುಮಾರ್ ಚಂದರಗಿ