ಶೇ.50ರಷ್ಟು ಗ್ರಾಪಂಗಳು ಬಯಲು ಬಹಿರ್ದೆಸೆ ಮುಕ್ತ
Team Udayavani, Sep 28, 2017, 10:59 AM IST
ಬೆಂಗಳೂರು: ಅಕ್ಟೋಬರ್ 2 ರ ಗಾಂಧಿ ಜಯಂತಿ ಯಂದು ರಾಜ್ಯದ 1863 ಗ್ರಾಮ ಪಂಚಾಯಿತಿ ವ್ಯಾಪ್ತಿಯ 10464 ಗ್ರಾಮಗಳನ್ನು ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಮೂಲಕ ರಾಜ್ಯದ ಒಟ್ಟು ಗ್ರಾಮ ಪಂಚಾಯಿತಿಗಳ ಶೇ.50 ರಷ್ಟು ಗ್ರಾಮ ಪಂಚಾಯಿತಿಗಳು ಬಯಲು ಬಹಿರ್ದೆಸೆ ಮುಕ್ತವಾಗಲಿವೆ. ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಎಚ್.ಕೆ.ಪಾಟೀಲ್, ನವೆಂಬರ್ ವೇಳೆಗೆ ರಾಜ್ಯದ 100 ತಾಲೂಕುಗಳು ಬಯಲು ಬಹಿರ್ದೆಸೆ ಮುಕ್ತವಾಗಲಿವೆ. 2018ರ ಅಕ್ಟೋಬರ್ 2 ರೊಳಗೆ ಇಡೀ ರಾಜ್ಯ ಬಯಲು ಬಹಿರ್ದೆಸೆ ಮುಕ್ತವಾಗಲಿದೆ ಎಂದು ಹೇಳಿದರು.
ಗಾಂಧಿ ಪುರಸ್ಕಾರ: ಸ್ವತ್ಛತೆ ಮತ್ತು ಶೌಚಾಲಯ ನಿರ್ಮಾಣದಲ್ಲಿ ಉತ್ತಮ ಕಾರ್ಯ ನಿರ್ವಹಿಸಿರುವ ರಾಜ್ಯದ 176 ಗ್ರಾ.ಪಂಗಳಿಗೆ ಗಾಂಧಿ ಜಯಂತಿಯಂದು ಗಾಂಧಿ ಪುರಸ್ಕಾರ ನೀಡಲಾಗುವುದು ಎಂದರು.