ಯುವತಿ ಮೇಲೆ ಆ್ಯಸಿಡ್ ದಾಳಿ: ಆರೋಪಿ ಸೆರೆ
Team Udayavani, Jan 30, 2020, 3:03 AM IST
ಹಾವೇರಿ: ಯುವತಿ ಮೇಲೆ ಆ್ಯಸಿಡ್ ಎರಚಿದ ಆರೋಪಿಯನ್ನು ಬಂಧಿ ಸುವಲ್ಲಿ ಸ್ಥಳೀಯ ಪೊಲೀಸರು ಯಶಸ್ವಿಯಾಗಿದ್ದಾರೆ. ಬ್ಯಾಡಗಿ ತಾಲೂಕು ಚಿಕ್ಕಬಾಸೂರು ಗ್ರಾಮದ ಪ್ರಸಾದ್ ಚಿಕ್ಕಳ್ಳಿ (26) ಬಂಧಿ ತ ಯುವಕ. ಘಟನೆ ಬಳಿಕ ಈತ ಶಿಕಾರಿಪುರ ತಾಲೂಕು ಕೋಡ ಗ್ರಾಮದ ಸಂಬಂಧಿಕರ ಮನೆಯಲ್ಲಿದ್ದ. ಖಚಿತ ಮಾಹಿತಿ ಮೇರೆಗೆ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮದುವೆಯಾಗಲು ನಿರಾಕರಿಸಿದ್ದೇ ಯುವತಿ ಮೇಲೆ ಆ್ಯಸಿಡ್ ಎರಚಲು ಕಾರಣ ಎನ್ನಲಾಗಿದೆ. ಪ್ರಸಾದ ಚಿಕ್ಕಳ್ಳಿ ಕೆರಿಮತ್ತಿಹಳ್ಳಿಯಲ್ಲಿರುವ ಕವಿವಿ ಸ್ನಾತಕೋತ್ತರ ಕೇಂದ್ರದಲ್ಲಿ ಕೆಲ ವರ್ಷಗಳ ಹಿಂದೆ ಎಂಎ ಪತ್ರಿಕೋದ್ಯಮ ಓದುತ್ತಿದ್ದ. ಅದೇ ಕೇಂದ್ರದಲ್ಲಿ ಯುವತಿ ಎಂಎಸ್ಡಬ್ಲೂ ಓದುತ್ತಿದ್ದಳು. ಈ ವೇಳೆ ಇಬ್ಬರಲ್ಲಿ ಸ್ನೇಹ ಬೆಳೆದಿತ್ತು. ಇತ್ತೀಚೆಗೆ ಪ್ರಸಾದ್ ತಾನು ಕೆಪಿಎಸ್ಸಿ ಪರೀಕ್ಷೆಯಲ್ಲಿ ಪಾಸಾಗಿದ್ದು, ಸರ್ಕಾರಿ ಹುದ್ದೆ ಪಡೆಯುತ್ತೇನೆ.
ನನ್ನನ್ನು ಮದುವೆಯಾಗು ಎಂದು ಪೀಡಿಸುತ್ತಿದ್ದ. ಯುವತಿ ವಿಚಾರಿಸಿದಾಗ ಆತ ಕೆಪಿಎಸ್ಸಿ ಪರೀಕ್ಷೆ ಪಾಸಾಗಿದ್ದು ಸುಳ್ಳು ಎಂಬುದು ಗೊತ್ತಾಗಿ ಮದುವೆಗೆ ನಿರಾಕರಿಸಿದ್ದಳು. ಇದರಿಂದ ಕ್ರೋದಗೊಂಡ ಪ್ರಸಾದ್ ಈ ಕುಕೃತ್ಯ ಮಾಡಿದ್ದಾನೆ ಎನ್ನಲಾಗಿದೆ. ಪೊಲೀಸರು ಆತನನ್ನು ಬಂಧಿಸಿದ್ದು, ಪ್ರಕರಣ ದಾಖಲಾಗಿದೆ.