ಅಪೂರ್ಣ ಪ್ರಸ್ತಾವನೆ ಸಲ್ಲಿಸಿದರೆ ಕ್ರಮ
Team Udayavani, Sep 23, 2019, 3:00 AM IST
ಬೆಂಗಳೂರು: ಶಾಲೆಗಳ ಸ್ಥಳಾಂತರಕ್ಕೆ ಜಿಲ್ಲಾ ಉಪನಿರ್ದೇಶಕ ಕಚೇರಿಯಿಂದ ಅಪೂರ್ಣ ಮಾಹಿತಿ ಪ್ರಸ್ತಾವನೆ ಸಲ್ಲಿಸಿದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ. ಇಲಾಖೆಯಿಂದ ಮಾನ್ಯತೆ ಪಡೆದ ಸ್ಥಳದಿಂದ ಶಾಲೆಯನ್ನು ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಲು ಮಾತ್ರ ನಿಯಮ ಹಾಗೂ ಕಾಯ್ದೆಯಲ್ಲಿ ಅವಕಾಶ ನೀಡಲಾಗಿದೆ.
ಒಂದು ಗ್ರಾಪಂ ಪ್ರದೇಶದ ವ್ಯಾಪ್ತಿಯೊಳಗಿನ ಪ್ರದೇಶಕ್ಕೆ ಅಥವಾ ನಗರ ಪ್ರದೇಶದ ವ್ಯಾಪ್ತಿಯೊಳಗಿನ ಗ್ರಾಮಾಂತರ ಪ್ರದೇಶಕ್ಕೆ ನಿಯಮಾನುಸಾರವಾಗಿ ಸ್ಥಳಾಂತರಿಸಲು ಅವಕಾಶವಿದೆ. ಹೀಗೆ ಸ್ಥಳಾಂತರಗೊಂಡ ಶಾಲೆಗಳನ್ನು ಹೊಸ ಶಾಲೆ ಎಂದು ಪರಿಗಣಿಸಲಾಗುತ್ತದೆ.
ಹೀಗಾಗಿ ಸ್ಥಳಾಂತರದ ಸಂದರ್ಭದಲ್ಲಿ ಹೊಸ ಶಾಲೆಗೆ ಯಾವ ಮಾನದಂಡ ಅನುಸರಿಸಲಾಗುತ್ತಿದೆಯೋ, ಅದೆಲ್ಲ ಮಾನದಂಡವನ್ನು ಸ್ಥಳಾಂತರಿಸುವ ಶಾಲೆಗಳಿಗೆ ಕಡ್ಡಾಯವಾಗಿ ಅನುಷ್ಠಾನ ಮಾಡಬೇಕು. ಹೀಗಾಗಿ ಶಾಲೆಯ ಸ್ಥಳಾಂತರದ ಸಂದರ್ಭದಲ್ಲಿ ಸಮರ್ಪಕ ಮಾಹಿತಿ ನೀಡದೆ ಇದ್ದರೆ, ಸಂಬಂಧಪಟ್ಟ ಬಿಇಒ ಹಾಗೂ ಉಪನಿರ್ದೇಶಕರು ಕರ್ತವ್ಯ ಲೋಪದ ಆರೋಪ ಎದುರಿಸಬೇಕಾಗುತ್ತದೆ ಮತ್ತು ಇಲಾಖೆ ನೀಡುವ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.