ಸಾರಿಗೆ ಇಲಾಖೆಯ ನಷ್ಟ ಸರಿಪಡಿಸಲು ಆ್ಯಕ್ಷನ್ ಪ್ಲಾನ್
Team Udayavani, Aug 31, 2019, 3:00 AM IST
ಹುಬ್ಬಳ್ಳಿ: ಸಾರಿಗೆ ಇಲಾಖೆ ಭಾರಿ ನಷ್ಟ ಅನುಭವಿಸುತ್ತಿದೆ. ಈ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ನಷ್ಟ ಸರಿಪಡಿಸಲು ಸೂಕ್ತವಾದ ಆ್ಯಕ್ಷನ್ ಪ್ಲಾನ್ ಸಿದ್ಧಪಡಿಸಲಾಗಿದೆ ಎಂದು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿ, ಸಾರಿಗೆ ಸಂಸ್ಥೆಗಳಲ್ಲಿ ಸೋರಿಕೆಗೆ ಕಡಿವಾಣ ಹಾಕಿ ನಷ್ಟ ತಡೆಗಟ್ಟಲಾಗುವುದು. ಇಲಾಖೆಯನ್ನು ಸದೃಢಗೊಳಿಸಲು ಕಾರ್ಯ ಚಟುವಟಿಕೆ ಆರಂಭಿಸಲಾಗಿದೆ.
ಸಿಬ್ಬಂದಿಗೆ ಕಟ್ಟುನಿಟ್ಟಾಗಿ ಜ್ಯೇಷ್ಠತೆ ಆಧಾರದ ಮೇಲೆಯೇ ಬಡ್ತಿ ನೀಡಲಾಗುವುದು ಎಂದರು. ಸೋತ ಸವದಿಗೆ ಡಿಸಿಎಂ ಸ್ಥಾನ ನೀಡಿದ ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ ಎನ್ನುವ ಸಿದ್ದರಾಮಯ್ಯ ಅವರಿಂದ ಬೇರೇನೂ ನಿರೀಕ್ಷಿಸಲು ಸಾಧ್ಯವಿಲ್ಲ. ಅವರೆಂದೂ ಬಿಜೆಪಿ ಉತ್ತಮ ಆಡಳಿತ ನಡೆಸುತ್ತಿದೆ ಎಂದು ಹೇಳಲ್ಲ. ನನಗೆ ಪಕ್ಷದ ವರಿಷ್ಠರು ಜವಾಬ್ದಾರಿ ನೀಡಿದ್ದಾರೆ. ಅದನ್ನು ಅತ್ಯಂತ ಸೂಕ್ತವಾಗಿ ನಿಭಾಯಿಸುತ್ತೇನೆ. ಡಿಸಿಎಂ ಸ್ಥಾನ ಕೊಟ್ಟಿದ್ದಕ್ಕೆ ಪಕ್ಷದಲ್ಲಿ ಯಾವುದೇ ಅಸಮಾಧಾನವಿಲ್ಲ ಎಂದರು.