ನಿರುದ್ಯೋಗಿ ಪತಿ ಮೇಲಿನ ಸಿಟ್ಟಿಗೆ ಮಗು ಕೊಂದ ತಾಯಿ
Team Udayavani, Sep 11, 2019, 3:02 AM IST
ಕಾರಟಗಿ: ಗಂಡನ ಮೇಲಿನ ಸಿಟ್ಟಿಗೆ ಹೆತ್ತ ಮಗುವನ್ನೇ ತಾಯಿ ಉಸಿರುಗಟ್ಟಿಸಿ ಸಾಯಿಸಿರುವ ಹೃದಯವಿದ್ರಾವಕ ಘಟನೆ ತಾಲೂಕಿನ ಸೋಮನಾಳ ಗ್ರಾಮದಲ್ಲಿ ನಡೆದಿದೆ. ಸೋಮ ನಾಳ ಗ್ರಾಮದ ಶಶಿಧರ ಮುದಗಲ್ ಹಾಗೂ ಪ್ರತಿಮಾ ದಂಪತಿಯ 16 ತಿಂಗಳ ಹಸುಗೂಸು ಅಭಿನವ ಮೃತ ಮಗು. ಪತಿ ಶಶಿಧರ ಕೆಲಸಕ್ಕೆ ಹೋಗದಿದ್ದಕ್ಕೆ ಬೇಸರ ಗೊಂಡಿದ್ದ ಪ್ರತಿಮಾ ಬೆಳಗ್ಗೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮಗುವಿನ ಬಾಯಿ ಮುಚ್ಚಿ ಹತ್ಯೆ ಮಾಡಿರುವುದಾಗಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾಳೆ. ಶಶಿಧರ ಕಳೆದ ಆರು ತಿಂಗಳಿಂದ ಕೆಲಸವಿಲ್ಲದೇ ಮನೆಯಲ್ಲಿದ್ದ.
ಇದನ್ನು ಸಹಿಸದ ಪತ್ನಿ ಪ್ರತಿಮಾ, “ನೀನು ದುಡಿಯುತ್ತಿಲ್ಲ. ಹೀಗೆ ಮಾಡಿದರೆ ಮಗುವನ್ನು ಕೊಂದು ನಾನೂ ಸಾಯುತ್ತೇನೆ’ ಎಂದು ಹೇಳುತ್ತಿದ್ದಳು. ಪತಿ ಶಶಿಧರ ಕಾರಟಗಿಯ ಪೆಟ್ರೋಲ್ ಬಂಕ್ ಒಂದರಲ್ಲಿ ಕೆಲಸ ಕೇಳಿಕೊಂಡು ಸೆ.9ರಂದು ಬೆಳಗಿನ ಜಾವ ತೆರಳಿದ್ದ. ಆದರೆ ಕೆಲಸಕ್ಕೆ ತೆರಳುವ ವಿಷಯ ಪತ್ನಿಗೆ ತಿಳಿಸಿರಲಿಲ್ಲ. ಈ ನಡುವೆ ಪ್ರತಿಮಾ ಈ ಕೃತ್ಯ ಎಸಗಿದ್ದಾಳೆ. ಮಗು ಮೃತಪಟ್ಟಿದ್ದರೂ ಸಂಜೆಯವರೆಗೂ ಮನೆಯಲ್ಲೇ ಕುಳಿತಿದ್ದಾಳೆ. ಮನೆ ಬಾಗಿಲು ತೆರೆಯದಿದ್ದನ್ನು ಗಮನಿಸಿದ ಶಶಿಧರನ ತಾಯಿ ಮಗನಿಗೆ ಫೋನ್ ಮಾಡಿದ್ದಾರೆ. ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.