ಸದನದಲ್ಲಿ ಕ್ರಿಯಾಲೋಪ ಗದ್ದಲ-ಕೋಲಾಹಲ
ಪರ-ವಿರೋಧ ಚರ್ಚೆ, ಧರಣಿ, ಪ್ರತಿಭಟನೆಯಲ್ಲೇ ಕಲಾಪ ಅಂತ್ಯ
Team Udayavani, Jul 19, 2019, 5:32 AM IST
ವಿಧಾನಸಭೆ: ಕ್ರಿಯಾಲೋಪದ ಪರ-ವಿರೋಧ ಚರ್ಚೆಯಿಂದ ಗದ್ದಲ-ಕೋಲಾಹಲ ಉಂಟಾಗಿ ಗುರುವಾರ ಇಡೀ ದಿನದ ಕಲಾಪ ಅಂತ್ಯಗೊಂಡು ಶುಕ್ರವಾರಕ್ಕೆ ಮುಂದೂಡಲ್ಪಟ್ಟಿತು. ಅಹೋರಾತ್ರಿ ಹೋರಾಟ ಪ್ರಕಟಿಸಿದ ಬಿಜೆಪಿ ಸದಸ್ಯರು ಸದನದಲ್ಲೇ ರಾತ್ರಿಯೆಲ್ಲಾ ಮಲಗಿದ್ದರು.
ಸ್ಪೀಕರ್ ಅವರು ಅನಗತ್ಯ ಚರ್ಚೆಗೆ ಅವಕಾಶ ಮಾಡಿಕೊಡುತ್ತಿದ್ದಾರೆ. ಆಡಳಿತಾರೂಢ ಕಾಂಗ್ರೆಸ್ ಮತ್ತು ಜೆಡಿಎಸ್ ಬೇಕಂತಲೇ ಸಮಯ ನುಂಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಪ್ರತಿಪಕ್ಷ ಬಿಜೆಪಿ ರಾಜ್ಯಪಾಲರನ್ನೂ ಭೇಟಿ ಮಾಡಿ ಮನವಿ ಮಾಡಿತು. ಇದರ ಬೆನ್ನಲ್ಲೇ ರಾಜ್ಯಪಾಲರು ಸ್ಪೀಕರ್ಗೆ ಸಂದೇಶ ಕಳುಹಿಸಿ, ಇದೇ ದಿನದ ಅಂತ್ಯಕ್ಕೆ ವಿಶ್ವಾಸಮತ ಪ್ರಕ್ರಿಯೆ ಪೂರ್ಣಗೊಳಿಸುವಂತೆ ತಿಳಿಸಿದರು.
ಸ್ಪೀಕರ್ ರಮೇಶ್ಕುಮಾರ್ ಅವರು ಸದನದಲ್ಲಿ ರಾಜ್ಯಪಾಲರ ಸಂದೇಶ ಪ್ರಕಟಿಸಿದಾಗ ಎಚ್.ಕೆ.ಪಾಟೀಲ್, ಕೃಷ್ಣ ಬೈರೇಗೌಡರು, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ರಾಜ್ಯಪಾಲರಿಗೆ ಸ್ಪೀಕರ್ಗೆ ನಿರ್ದೇಶನ ನೀಡುವ ಅಧಿಕಾರ ಇಲ್ಲ. ಯಾವುದಾದರೂ ವಿಧೇಯಕಕ್ಕೆ ಸಂಬಂಧಿಸಿದ ವಿಚಾರದಲ್ಲಿ ಮಾತ್ರ ನಿರ್ದೇಶನ ನೀಡಬಹುದು ಎಂದು ಹೇಳಿದರು.
ಈ ಬಗ್ಗೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಸ್ಪೀಕರ್ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು. ಇದನ್ನು ಖಂಡಿಸಿ ಕಾಂಗ್ರೆಸ್-ಜೆಡಿಎಸ್ ಶಾಸಕರು ಸದನದ ಬಾವಿಗಿಳಿದು ಧರಣಿ ನಡೆಸಿ, ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರಲಾಗಿದೆ. ಕ್ಷಮೆಯಾಚನೆ ಮಾಡಬೇಕು ಎಂದು ಆಗ್ರಹಿಸಿದರು.
ಸ್ಪೀಕರ್ ಅವರು ಅಡ್ವೋಕೇಟ್ ಜನರಲ್ ಅವರ ಜತೆ ಚರ್ಚೆ ನಡೆಸಲು ಹೋಗಿ ಸಭಾಧ್ಯಕ್ಷ ಪೀಠದಲ್ಲಿ ಉಪ ಸಭಾಧ್ಯಕ್ಷ ಕೃಷ್ಣಾರೆಡ್ಡಿ ಕುಳಿತಿದ್ದರು. ಆಡಳಿತ ಹಾಗೂ ಪ್ರತಿಪಕ್ಷ ನಾಯಕರ ನಡುವೆ ಮಾತಿನ ಚಕಮಕಿ, ಧರಣಿ ಮುಂದುವರಿದಾಗ ಸದನವನ್ನು ಶುಕ್ರವಾರ ಬೆಳಗ್ಗೆ 11 ಗಂಟೆಗೆ ಮುಂದೂಡಲಾಯಿತು.
ಯಾರ್ಯಾರು ಏನೆಂದರು?
ಮಾತು ಹಿಂಪಡೆದ ಬಿಎಸ್ವೈ: ಚರ್ಚೆ ಸಂದರ್ಭದಲ್ಲಿ ಹದಿನೈದು ಶಾಸಕರ ರಾಜೀನಾಮೆ, ವಿಪ್ ಕುರಿತು ನಾವೇನೂ ಮಾತನಾಡುವುದಿಲ್ಲ. ಅವರನ್ನು ಸದನಕ್ಕೆ ಬರುವಂತೆ ಒತ್ತಡ ಹೇರುವಂತಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ಹೇಳಿದೆ. ಅವರಿಗೆ ವಿಪ್ ಆನ್ವಯ ಆಗುವುದಿಲ್ಲ ಎಂದು ಹೇಳಲಾಗಿದೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು. ಆಗ, ಸ್ಪೀಕರ್, ವಿಪ್ ಅನ್ವಯ ಆಗಲ್ಲ ಎಂದು ಹೇಳಿಲ್ಲ ಎಂದರು. ಸಚಿವ ಡಿ.ಕೆ.ಶಿವಕುಮಾರ್ ಅವರು, ಮಾಜಿ ಮುಖ್ಯಮಂತ್ರಿಯಾಗಿದ್ದವರು, ಪ್ರತಿಪಕ್ಷ ನಾಯಕರು ಸದನದ ದಿಕ್ಕು ತಪ್ಪಿಸುತ್ತಿದ್ದಾರೆ. ಸುಪ್ರೀಂಕೋರ್ಟ್ ತೀರ್ಪಿನಲ್ಲಿ ತಿಳಿಸದಿರುವುದನ್ನು ಇವರು ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ, ಇದರ ಬಗ್ಗೆ ಮೊದಲು ಇತ್ಯರ್ಥ ಆಗಬೇಕು ಎಂದು ಪಟ್ಟು ಹಿಡಿದರು. ಆಗ ಯಡಿಯೂರಪ್ಪ ಅವರು, ಆಯ್ತು ಬಿಡಪ್ಪ, ನಾನು ವಿಪ್ ಅನ್ವಯ ಆಗಲ್ಲ ಎಂಬ ಮಾತು ವಾಪಸ್ ಪಡೆಯುತ್ತೇನೆ ಎಂದು ವಿಷಯಕ್ಕೆ ತೆರೆ ಎಳೆದರು.
ಛೀಮಾರಿ ಹಾಕಿಲ್ವಾ?: ವಿಶ್ವಾಸಮತ ನಿರ್ಣಯದ ಚರ್ಚೆ ಸಂದರ್ಭದಲ್ಲಿ ಬಿಜೆಪಿಯ ಕೆ.ಜಿ.ಬೋಪಯ್ಯ ಅವರು ಎದ್ದು ನಿಂತಾಗ ಅವರ ಮಾತಿಗೆ ಅಡ್ಡಿಪಡಿಸಿದ ಸಚಿವ ಡಿ.ಕೆ.ಶಿವಕುಮಾರ್, ನೀವು ಸ್ಪೀಕರ್ ಆಗಿದ್ದಾಗ ಪಕ್ಷೇತರ ಶಾಸಕರನ್ನು ಅನರ್ಹಗೊಳಿಸಿ ಅವರ ಜೀವನ ಹಾಳು ಮಾಡಿದಿರಿ. ನೀವು ಮಾತನಾಡಬೇಡಿ ಕುಳಿತುಕೊಳ್ಳಿ ಎಂದು ಏರಿದ ಧ್ವನಿಯಲ್ಲಿ ಹೇಳಿದರು. ಈ ಸಂದರ್ಭದಲ್ಲಿ ಎದ್ದು ನಿಂತ ಸಚಿವ ವೆಂಕಟರಮಣಪ್ಪ, ಆಗ ನಾನು ಪಕ್ಷೇತರ ಶಾಸಕನಾಗಿದ್ದೆ. ನನ್ನನ್ನು ಅನರ್ಹ ಮಾಡಿ ನಂತರ ಸುಪ್ರೀಂಕೋರ್ಟ್ನಲ್ಲಿ ನಿಮಗೆ ಛೀಮಾರಿ ಹಾಕಿತು , ಇದನ್ನು ನೆನಪಿಟ್ಟುಕೊಳ್ಳಿ ಎಂದು ಸುಮ್ಮನಾಗಿಸಿದರು. ಈ ವೇಳೆ, ಬೋಪಯ್ಯ ಅವರು ವಿಷಯ ಹೆಚ್ಚು ಬೆಳೆಸದೆ ಕುಳಿತರು.
ಬಂದ್ಬಿಡಿ ಎಂದು ಶ್ರೀರಾಮುಲುಗೆ ಆಹ್ವಾನ: ವಿಧಾನಸಭೆ ಕಲಾಪದ ಭೋಜನಾ ವಿರಾಮದ ವೇಳೆ ಪ್ರತಿಪಕ್ಷ ಸದಸ್ಯರೆಲ್ಲರೂ ಹೋದರೂ ಬಿಜೆಪಿಯ ಶ್ರೀರಾಮುಲು ಆಲ್ಲೇ ಕುಳಿತಿದ್ದರು. ಇದನ್ನು ಗಮನಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಅಲ್ಯಾಕೆ ಸುಮ್ಮನೆ ಕುಳಿತಿದ್ದೀರಿ, ಈ ಕಡೆ ಬಂದ್ಬಿಡಿ ಎಂದು ಚಟಾಕಿ ಹಾರಿಸಿದರು. ಸಚಿವ ಡಿ.ಕೆ.ಶಿವಕುಮಾರ್, ನೀವು ಅಲ್ಲಿದ್ದರೂ ಉಪಮುಖ್ಯಮಂತ್ರಿ ಮಾಡಲ್ಲ, ರಮೇಶ್ ಜಾರಕಿಹೊಳಿ ಉಪ ಮುಖ್ಯಮಂತ್ರಿಯಾಗ್ತಾರೆ, ಬಂದ್ಬಿಡಿ ಎಂದರು. ಇದಕ್ಕೆ ಶ್ರೀರಾಮುಲು ನಗುತ್ತಲೇ ಕೈ ಅಲ್ಲಾಡಿಸಿದರು. ನಂತರ ಮಾತನಾಡಿ, ಅವರ ಸೀಟೇ ಆಲ್ಲಾಡುತ್ತಿದೆ. ಮೊದಲು ಅವರ ಕುರ್ಚಿ ಉಳಿಸಿಕೊಳ್ಳಲಿ, ಅವರೇ ಬೇಕಾದರೆ ಬಿಜೆಪಿಗೆ ಬರಲಿ ಎಂದು ಛೇಡಿಸಿದರು. ಆದರೆ, ಸದನ ಮುಗಿದ ನಂತರ ಮತ್ತೆ ಡಿ.ಕೆ.ಶಿವಕುಮಾರ್ ಹಾಗೂ ಶ್ರೀರಾಮುಲು ಕೆಲ ಹೊತ್ತು ಗಹನ ಚರ್ಚೆಯಲ್ಲಿ ಮುಳುಗಿದ್ದು, ಕುತೂಹಲ ಮೂಡಿಸಿತು.
ನನ್ನ ಕಷ್ಟ ಅರ್ಥ ಮಾಡಿಕೊಳ್ಳಿ: ಸದನದಲ್ಲಿ ಗುರುವಾರ ಕ್ರಿಯಾಲೋಪದ ಬಗ್ಗೆ ಕಾಂಗ್ರೆಸ್ನವರು ಪಟ್ಟು ಹಿಡಿದರೆ, ಬಿಜೆಪಿಯವರು ಅದಕ್ಕೆ ಅವಕಾಶ ಬೇಡ ಎಂದು ಆಕ್ಷೇಪ ವ್ಯಕ್ತಪಡಿಸಿದಾಗ ಸ್ಪೀಕರ್ ರಮೇಶ್ಕುಮಾರ್, ನಿಮ್ಮ ತಾಕತ್ತು ಪ್ರದರ್ಶನ ಮಾಡಿಕೊಳ್ಳಿ, ಆದರೆ ನನ್ನ ಕಷ್ಟ ಅರ್ಥ ಮಾಡಿಕೊಳ್ಳಿ. ನಾನು ಇಲ್ಲಿ ಕುಳಿತು ಯಾರದೋ ಒತ್ತಡಕ್ಕೆ ಅಥವಾ ಯಾರಿಗೋ ಆನುಕೂಲ ಮಾಡಿಕೊಡುವಂತೆ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂಬ ಕಳಂಕ ಹೊರಲು ತಯಾರಿಲ್ಲ. ನಿಯಮಾವಳಿ ಪ್ರಕಾರ ನಾನು ಸದನ ನಡೆಸಬೇಕು, ಸಂವಿಧಾನದ ಆಶಯ ಎತ್ತಿ ಹಿಡಿಯಬೇಕು. ಇದಕ್ಕೆ ಎಲ್ಲ ಸದಸ್ಯರೂ ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.
ನಾನು ಪ್ರತಿಪಕ್ಷ ನಾಯಕ ಎಂದ ಸಿದ್ದರಾಮಯ್ಯ
ಸಿದ್ದರಾಮಯ್ಯ ಅವರು ಕ್ರಿಯಾಲೋಪ ಕುರಿತು ಪ್ರಸ್ತಾಪ ಮಾಡುವ ಸಂದರ್ಭದಲ್ಲಿ ನಾನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಎನ್ನುವ ಬದಲಿಗೆ ಪ್ರತಿಪಕ್ಷ ನಾಯಕ ಎಂದು ಬಾಯ್ತಪ್ಪಿ ಹೇಳಿದರು. ಇದಕ್ಕೆ ಬಿಜೆಪಿ ಸದಸ್ಯರು ಜೋರಾಗಿ ನಕ್ಕಿದಾಗ, ಹಿಂದೆ ನಾನು ಪ್ರತಿಪಕ್ಷ ನಾಯಕನಾಗಿದ್ದೆ. ಅದಕ್ಕೆ ಮಾತನಾಡುವಾಗ ಹಾಗೆ ಹೇಳಿದ್ದೇನೆ. ಅದಕ್ಕೆ ಯಾಕೆ ನೀವು ಖುಷಿ ಪಡ್ತೀರಿ, ಏನ್ ಆನಂದದಲ್ಲಿ ತೇಲಾಡುತ್ತಿದ್ದೀರಿ. ಬಹಳ ಆತುರದಲ್ಲಿದ್ದೀರಿ ಎಂದು ಬಿಜೆಪಿ ಸದಸ್ಯರ ಕಾಳೆಲೆದರು. ಹರಿಯಾಣದಲ್ಲಿ ಗಯಾಲಾಲ್ ಎಂಬ ಶಾಸಕ ಒಂದೇ ದಿನ 3 ಬಾರಿ ಪಕ್ಷಾಂತರ ಮಾಡಿ ದ್ದರು. ಆ ಪ್ರಕರಣದ ನಂತರ ಪಕ್ಷಾಂತರ ಕಾಯ್ದೆ ಬಗ್ಗೆ ಹೆಚ್ಚು ಚರ್ಚೆಯಾಗಿ ಜಾರಿಗೊಳಿಸಲಾಯಿತು ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು
ಸಂಸದ ಡಿ.ಕೆ.ಸುರೇಶ್ ಆಸ್ತಿ ಮೌಲ್ಯ 593 ಕೋಟಿ ರೂ.!
IPL; ಇಂದು ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?
Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್
Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ