ಅಂಜನಾದ್ರಿ ಬೆಟ್ಟ, ಡೀಸಿ ವಿರುದ್ಧ ಅವಹೇಳನ: ಪ್ರಕರಣ
Team Udayavani, Jan 21, 2020, 3:04 AM IST
ಗಂಗಾವತಿ: ಸಾಮಾಜಿಕ ಜಾಲತಾಣದಲ್ಲಿ ಇತಿಹಾಸ ಪ್ರಸಿದ್ಧ ಕಿಷ್ಕಿಂದಾ ಅಂಜನಾದ್ರಿ ಬೆಟ್ಟ ಹಾಗೂ ಜಿಲ್ಲಾಧಿಕಾರಿಗಳ ವಿರುದ್ಧ ಆಕ್ಷೇಪಾರ್ಹ ಶಬ್ದಗಳ ಬಳಕೆ ಮಾಡಿ ಪ್ರಚೋದನಾತ್ಮಕ ಹೇಳಿಕೆ ನೀಡಿರುವ ಅಂಜನಾದ್ರಿ ಬೆಟ್ಟದ ಅರ್ಚಕ ಮಹಾಂತ ವಿದ್ಯಾದಾಸ ಬಾಬಾ ವಿರುದ್ಧ ಗ್ರಾಮೀಣ ಠಾಣೆ ಯಲ್ಲಿ ತಹಸೀಲ್ದಾರ್ ಎಲ್.ಡಿ. ಚಂದ್ರಕಾಂತ ಪ್ರಕರಣ ದಾಖಲಿಸಿದ್ದಾರೆ.
ಜ.17ರಂದು ವಿಮಲ್ ಕ್ರಿಷನ್ ಎಂಬುವರ ಫೇಸ್ಬುಕ್ ಹಾಗೂ ವಾಟ್ಸ್ ಆ್ಯಪ್ನಲ್ಲಿ ಅರ್ಚಕ ಮಹಾಂತ ವಿದ್ಯಾದಾಸ ಮಾತನಾಡಿರುವ ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ಅಂಜನಾದ್ರಿ ಬೆಟ್ಟ ಹಾಗೂ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ವಿರುದ್ಧ ಇಲ್ಲಸಲ್ಲದ ಹೇಳಿಕೆ ನೀಡಲಾಗಿದೆ. ವಿರೂಪಾಪೂರಗಡ್ಡಿಯಲ್ಲಿ ರೆಸಾರ್ಟ್ ನಡೆಸಲು ಜಿಲ್ಲಾಧಿಕಾರಿಗಳು ಪರವಾನಗಿ ನೀಡಿರುವ ಆರೋಪ ಮಾಡಲಾಗಿದೆ. ಸಾಮರಸ್ಯ ಹದಗೆಡುವಂತಹ ಹೇಳಿಕೆ ನೀಡಿರುವುದರಿಂದ ಮಹಾಂತ ವಿದ್ಯಾದಾಸ ಬಾಬಾ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ.