ಎಸ್.ರಘು ಪರ ಅಣ್ಣಾಮಲೈ ಭರ್ಜರಿ ರೋಡ್ ಶೋ
ಸಿ.ವಿ.ರಾಮನ್ನಗರ ಅಭಿವೃದ್ಧಿಗೆ ಶ್ರಮಿಸಿರುವೆ: ಬಿಜೆಪಿ ಅಭ್ಯರ್ಥಿ
Team Udayavani, May 6, 2023, 12:18 PM IST
ಬೆಂಗಳೂರು: ಸರ್ ಸಿ.ವಿ. ರಾಮನ್ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ರಘು ಪರ ಮಾಜಿ ಐಪಿಎಸ್ ಅಧಿಕಾರಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ರೋಡ್ ಶೋ ಮೂಲಕ ಮತಯಾಚನೆ ಮಾಡಿದರು.
ಆನಂದಪುರ, ಜೀವನ್ಬಿಮಾನಗರ, ಲಕ್ಷ್ಮಿಪುರ ಭಾಗದಲ್ಲಿ ರೋಡ್ ಶೋ ನಡೆಸಿದ ಅಣ್ಣಾಮಲೈ, ಕ್ಷೇತ್ರದ ಮನೆ ಮಗನಂತಿರುವ ಎಸ್.ರಘು ಅವರಿಗೆ ಮತ್ತೊಮ್ಮೆ ಅವಕಾಶ ನೀಡಿ ಎಂದು ಕೋರಿದರು.
ಇಡೀ ಕ್ಷೇತ್ರದಲ್ಲಿ ಅಭಿವೃದ್ಧಿ ಕಣ್ಣಿಗೆ ಕಾಣಿಸುತ್ತದೆ. ಮೂರು ಬಾರಿ ಇದೇ ಕ್ಷೇತ್ರದಲ್ಲಿ ಗೆಲುವು ಸಾಧಿಸಿ ಹಿರಿಯ ಶಾಸಕರಾಗಿರುವ ಎಸ್.ರಘು ಸರಳ, ಸಜ್ಜನ ವ್ಯಕ್ತಿಯಾಗಿದ್ದಾರೆ ಎಂದು ಶ್ಲಾಘಿಸಿದರು.
ಕ್ಷೇತ್ರದಲ್ಲಿ ರಘು ಅವರು 140 ಹಾಸಿಗೆಯ ಐಸೋಲೇಷನ್ ಆಸ್ಪತ್ರೆ, 350 ಹಾಸಿಗೆಯ ಸಿ.ವಿ.ರಾಮನ್ನಗರ ಆಸ್ಪತ್ರೆ , ಡಯಾಬಿಟಿಸ್ ಆಸ್ಪತ್ರೆ, ವಿಶ್ವದರ್ಜೆಯ ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣ ವಿಶ್ವದರ್ಜೆಯಲ್ಲಿ ಅಭಿವೃದ್ಧಿಪಡಿಸಿದ್ದಾರೆ. ಒಂಬತ್ತು ನಮ್ಮ ಕ್ಲಿನಿಕ್ಗಳು ಕ್ಷೇತ್ರದ ಜನತೆಯ ಸೇವೆ ಸಮರ್ಪಿಸಿದ್ದಾರೆ. ಸರ್ಕಾರಿ ಶಾಲೆಗಳ ಉನ್ನತೀಕರಣ, ಉದ್ಯಾನ, ಮೂಲಸೌಕರ್ಯ ಸೇರಿದಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಇಂತಹ ಶಾಸಕರು ನಿಮಗೆ ಸಿಕ್ಕಿರುವುದು ಪುಣ್ಯ ಎಂದು ಹೇಳಿದರು.
ಎಸ್.ರಘು ಅವರು ಮಾತನಾಡಿ, ಕ್ಷೇತ್ರದ ಜನತೆಯ ಆಶೀರ್ವಾದಿಂದ ಮೂರು ಬಾರಿ ಆಯ್ಕೆಯಾಗಿ ನಿಮ್ಮ ಮನೆ ಮಗನಾಗಿ ಕೆಲಸ ಮಾಡಿದ್ದೇನೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಮತ್ತೂಮ್ಮೆ ಅವಕಾಶ ಕೊಟ್ಟರೆ
ನಿಮ್ಮ ಸೇವೆ ಮಾಡುತ್ತೇನೆ ಎಂದು ಮನವಿ ಮಾಡಿದರು.
ರೋಡ್ ಶೋಗೆ ಬಂದ ಅಣ್ಣಾಮಲೈ ಅವರಿಗೆ ಉತ್ತಮ ಸ್ಪಂದನೆ ದೊರೆಯಿತು. ಸಾವಿರಾರು ಜನ ರಸ್ತೆಯ ಎರಡೂ ಬದಿ ನಿಂತು ಅಣ್ಣಾಮಲೈ ಹಾಗೂ ಎಸ್.ರಘು ಅವರಿಗೆ ಆರತಿ ಬೆಳಗಿ ಸ್ವಾಗತ ಕೋರಿದರು. ಕೆಲವೆಡೆ ಹೂ ಮಳೆ ಸುರಿಸಿ ಅಭಿಮಾನ ಮರೆದರು.
ನಾಳೆ ಪ್ರಧಾನಿ ಮೋದಿ ಹವಾ
ಸಿ.ವಿ.ರಾಮನ್ನಗರದಲ್ಲಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ “ಹವಾ’ ಇರಲಿದೆ. ಎಸ್.ರಘು ಅವರ ಪರ ಪ್ರಧಾನಿಯವರು ರೋಡ್ ಶೋ ಮೂಲಕ ಪ್ರಚಾರ ನಡೆಸಲಿದ್ದಾರೆ. ಬೆಳಗ್ಗೆ 8 ಗಂಟೆಗೆ ಬಿಇಎಂಎಲ್ ವೃತ್ತದ ಕೆಂಪೇಗೌಡ ಪ್ರತಿಮೆ ಬಳಿಯಿಂದ ಆರಂಭವಾಗಲಿರುವ ರೋಡ್ ಶೋ ನ್ಯೂ ತಿಪ್ಪಸಂದ್ರ ಮುಖ್ಯ ರಸ್ತೆ, 80 ಅಡಿ ರಸ್ತೆ, ಇಂದಿರಾನಗರ 12 ನೇ ಮುಖ್ಯ ರಸ್ತೆ, ಸಿಎಂಎಚ್ ರಸ್ತೆ, ಅಲಸೂರು ಮೂಲಕ ಸಾಗಿ ಮಹಾತ್ಮಗಾಂಧಿ ರಸ್ತೆ ವರೆಗೂ ರೋಡ್ ಶೋ ನಡೆಸಲಿದ್ದಾರೆ. ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಕ್ಷೇತ್ರದ ಕಾರ್ಯಕರ್ತರಲ್ಲಿ ಉತ್ಸಾಹ ಇಮ್ಮುಡಿಯಾಗಿದೆ.