ಅನುರಾಗ್ ತಿವಾರಿ ಸಹಜ ಸಾವು: ಸಿಬಿಐ
Team Udayavani, Feb 21, 2019, 1:43 AM IST
ಬೆಂಗಳೂರು: ಕರ್ನಾಟಕದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಯುಕ್ತರಾಗಿದ್ದ ಅನುರಾಗ್ ತಿವಾರಿ ಶಂಕಾಸ್ಪದ ಸಾವಿನ ತನಿಖೆ ನಡೆಸುತ್ತಿದ್ದ ಸಿಬಿಐ, ಬುಧವಾರ ಸಮಾಪ್ತಿ ವರದಿ ಸಲ್ಲಿಸಿದ್ದು, ಅದರಲ್ಲಿ ತಿವಾರಿಯವರ ಸಾವು ರಸ್ತೆಯ ಮೇಲೆ ಆಕಸ್ಮಿಕವಾಗಿ ಜಾರಿ ಬಿದ್ದಿದ್ದರಿಂದ ಉಂಟಾಗಿದ್ದು, ಇದರಲ್ಲಿ ಯಾರದ್ದೇ ಕೈವಾಡವಿಲ್ಲ ಹಾಗೂ ಅವರದ್ದು ಆತ್ಮಹತ್ಯೆಯೂ ಅಲ್ಲ ಎಂದು ಹೇಳಿದೆ.
ಆಕಸ್ಮಿಕವಾಗಿ ಜಾರಿ ಬಿದ್ದಿದ್ದರಿಂದ ಅನುರಾಗ್ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ದೇಹದಲ್ಲಿ ಆಮ್ಲಜನಕದ ಅತೀವ ಕೊರತೆ ಉಂಟಾಗಿ (ಆ್ಯಸ್ಪಿಕ್ಸಿಯಾ)ಅವರ ಸಾವು ಸಂಭವಿಸಿದೆ ಎಂದು ವರದಿ ತಿಳಿಸಿದೆ. ಏಮ್ಸ್ ವೈದ್ಯಾಧಿಕಾರಿಗಳು ಸಲ್ಲಿಸಿದ ದಾಖಲೆಗಳ ಆಧಾರದಲ್ಲಿ ಈ ವರದಿ ತಯಾರಿಸಲಾಗಿದೆ.
ಕುಟುಂಬದ ನಿರಾಕರಣೆ: ಸಿಬಿಐ ಸಮಾಪ್ತಿ ವರದಿಯನ್ನು ತಿವಾರಿ ಸಹೋದರ ಮಯಾಂಕ್ ತಿವಾರಿ ತಿರಸ್ಕರಿಸಿದ್ದಾರೆ. ತಮ್ಮ ಕುಟುಂಬಕ್ಕೆ ಯಾವುದೇ ಮಾಹಿತಿ ನೀಡದೆ ಸಿಬಿಐ, ಅಂತಿಮ ವರದಿ ಸಲ್ಲಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜತೆಗೆ, ವರದಿಯ ವಿರುದ್ಧ ಪ್ರತಿಭಟನೆ ನಡೆಸುವುದಾಗಿಯೂ ತಿಳಿಸಿದ್ದಾರೆ.