“ವಿದ್ಯಾರ್ಥಿಗಳ ಮೇಲಿನ ಹಲ್ಲೆ ಪೂರ್ವಯೋಜಿತ ದಾಳಿ’
Team Udayavani, Jan 9, 2020, 3:05 AM IST
ಬೆಂಗಳೂರು: ಜೆಎನ್ಯು ವಿದ್ಯಾರ್ಥಿಗಳ ಮೇಲಿನ ಹಲ್ಲೆ ಕೇಂದ್ರ ಸರ್ಕಾರದ ಪೂರ್ವಯೋಜಿತ ದಾಳಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. ದಲಿತ ಸಂಘರ್ಷ ಸಮಿತಿ ಬುಧವಾರ ನಗರದ ಗಾಂಧಿಭವನದಲ್ಲಿ ಏರ್ಪಡಿಸಿದ್ದ “ಪೌರತ್ವ ಕಾಯ್ದೆ’ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೋ ದುಷ್ಕರ್ಮಿಗಳು ಜೆಎನ್ಯು ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿಲ್ಲ.
ನೇರವಾಗಿ ಕೇಂದ್ರ ಸರ್ಕಾರ ಇದರಲ್ಲಿ ಶಾಮೀಲಾಗಿದೆ. ಜನರಲ್ಲಿ ಭಯದ ವಾತಾವರಣ ನಿರ್ಮಿಸಲು ದಾಳಿ ನಡೆಸಲಾಗಿದೆ. ಈಗವರೆಗೂ ಕೇಂದ್ರ ಸರ್ಕಾರ ಯಾವೊಬ್ಬ ಆರೋಪಿಗಳನ್ನೂ ಬಂಧಿಸಿಲ್ಲ. ಬದಲಾಗಿ ಹಲ್ಲೆಗೊಳಗಾದವರ ಮೇಲೆಯೇ ಎಫ್ಐಆರ್ ದಾಖಲಿಸಿದ್ದಾರೆ ಎಂದು ಕಿಡಿಕಾರಿದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಹಿಟ್ಲರ್ನಂತೆ ವರ್ತಿಸುತ್ತಿದ್ದಾರೆ.
ದೇಶದ ಆರ್ಥಿಕತೆ ಮತ್ತು ನಿರುದ್ಯೋಗದ ಬಗ್ಗೆ ಚಿಂತಿಸದೆ ಪೌರತ್ವ ಕಾಯ್ದೆಯೇ ಮುಖ್ಯವಾಗಿದೆ. ಇವರು ಕ್ರೂರಿಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. ನಾನು ಹುಟ್ಟಿದ ದಿನಾಂಕವೇ ಗೊತ್ತಿಲ್ಲ. ಹೀಗಿರುವಾಗ ನಮ್ಮ ತಂದೆ ಹುಟ್ಟಿದ ದಿನಾಂಕ ಹೇಗೆ ಗೊತ್ತಾಗುತ್ತದೆ? ಬೆಟ್ಟಗಳಲ್ಲಿ ವಾಸ ಮಾಡುತ್ತಿರುವ ಬುಡಕಟ್ಟು, ಅಲೆಮಾರಿಗಳು ಎಲ್ಲಿಂದ ಹುಟ್ಟಿದ ಪ್ರಮಾಣಪತ್ರ ತರುತ್ತಾರೆ ಎಂದು ಪ್ರಶ್ನಿಸಿದರು.