ಸುಧಾಕರ್ ಮೇಲೆ ಹಲ್ಲೆ: ಅರ್ಜಿ ವಿಭಾಗೀಯ ಪೀಠಕ್ಕೆ
Team Udayavani, Aug 15, 2019, 3:00 AM IST
ಬೆಂಗಳೂರು: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದು, ಸದ್ಯ ಅನರ್ಹಗೊಂಡಿರುವ ಡಾ.ಕೆ.ಸುಧಾಕರ್ ಮೇಲೆ ವಿಧಾನಸೌಧದಲ್ಲಿ ಕಳೆದ ಜು.10ರಂದು ನಡೆದ ಹಲ್ಲೆ ಪ್ರಕರಣದ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ನ ವಿಭಾಗೀಯ ನ್ಯಾಯಪೀಠಕ್ಕೆ ವರ್ಗಾಯಿಸಲಾಗಿದೆ. ಈ ಕುರಿತು ವಕೀಲ ಎನ್.ಪಿ. ಅಮೃತೇಶ್ ಸಲ್ಲಿಸಿದ್ದ ಅರ್ಜಿಯು ನ್ಯಾ. ಆಲೋಕ್ ಆರಾಧೆ ವಿಚಾರಣೆ ನಡೆಸಿದರು.
“ಇದು ಗಂಭೀರ ವಿಚಾರ, ಜನರನ್ನು ರಕ್ಷಿಸಬೇಕಾದ ಶಾಸಕರ ಮೇಲೆ ಹಲ್ಲೆ ನಡೆದಿದೆ ಎಂದರೆ ಏನರ್ಥ? ಜನರನ್ನು ರಕ್ಷಿಸುವವರು ಯಾರು? ಎಂದು ಮೌಖೀಕವಾಗಿ ಅಭಿಪ್ರಾಯಪಟ್ಟು , ಪ್ರಕರಣವನ್ನು ವಿಭಾಗೀಯ ಪೀಠ ವಿಚಾರಣೆ ನಡೆಸುವುದೇ ಸೂಕ್ತ’ ಎಂದು ಕಡತವನ್ನು ಮುಂದಿನ ಆದೇಶಕ್ಕಾಗಿ ಮುಖ್ಯ ನ್ಯಾಯಮೂರ್ತಿಗಳ ಮುಂದೆ ಮಂಡಿಸುವಂತೆ ರಿಜಿಸ್ಟ್ರಾರ್ ಜನರಲ್ಗೆ ಸೂಚನೆ ನೀಡಿದರು.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಅರುಣ್ ಶ್ಯಾಮ್, ಈ ಪ್ರಕರಣದ ಬಗ್ಗೆ ಅರ್ಜಿದಾರರು ವಿಧಾನಸೌಧ ಠಾಣೆಯಲ್ಲಿ ದೂರು ನೀಡಿದ್ದಾರೆ. ಆದರೆ ಆ ಬಗ್ಗೆ ಎಫ್ಐಆರ್ ದಾಖಲಿಸಿಕೊಂಡು ಸಮಗ್ರ ತನಿಖೆ ನಡೆಸುತ್ತಿಲ್ಲ.ಆ ಬಗ್ಗೆ ಸೂಕ್ತ ಆದೇಶ ನೀಡಬೇಕೆಂದು ಕೋರಿದರು.