ನಿಂತಿದ್ದ ಲಾರಿಗೆ ಆಟೋ ಡಿಕ್ಕಿ: ಮೂವರ ಸಾವು
Team Udayavani, Jan 11, 2020, 3:00 AM IST
ಯಾದಗಿರಿ: ರಸ್ತೆಯಲ್ಲಿ ನಿಲ್ಲಿಸಿದ್ದ ಕಬ್ಬಿನ ಲಾರಿಗೆ ಟಂಟಂ ಆಟೋ ಡಿಕ್ಕಿ ಹೊಡೆದ ಪರಿಣಾಮ ತಾಯಿ, ಮಗ ಸೇರಿ ಮೂವರು ಮೃತಪಟ್ಟಿದ್ದು, ಐವರು ಗಾಯಗೊಂಡ ಘಟನೆ ಶುಕ್ರವಾರ ಬೆಳಗ್ಗೆ ವಡಗೇರಾ ಬಳಿ ನಡೆದಿದೆ.
ಹುಣ್ಣಿಮೆ ಹಿನ್ನೆಲೆಯಲ್ಲಿ ಜಿಲ್ಲೆಯ ವಡಗೇರಾ ವ್ಯಾಪ್ತಿಯ ಯಲ್ಲಮ್ಮ ದೇವಿ ದರ್ಶನಕ್ಕೆ ಯಾದಗಿರಿಯಿಂದ ಉಳ್ಳೆಸೂಗುರು ಮತ್ತು ಹಾಲಗೇರಾ ಗ್ರಾಮಗಳ ಕಡೆ ಪ್ರಯಾಣಿಕರನ್ನು ತುಂಬಿಕೊಂಡು ತೆರಳುತ್ತಿದ್ದ ಆಟೋ ರಸ್ತೆ ಬದಿ ನಿಲ್ಲಿಸಿದ್ದ ಕಬ್ಬಿನ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದರಿಂದ ಟಂಟಂ ಆಟೋದಲ್ಲಿದ್ದ ಚಿತ್ತಾಪುರ ತಾಲೂಕಿನ ವಾಡಿಯ ಸಿದ್ಧಮ್ಮ (55), ರಮೇಶ (30), ಹಾಲಗೇರಾ ಗ್ರಾಮದ ಬಾಷಪ್ಪ ಮೃತಪಟ್ಟಿದ್ದಾರೆ.
ಸುರಪುರ ತಾಲೂಕಿನ ಲಕ್ಷ್ಮೀಪುರದ ರಫೀಕ್, ಹಾಲಗೇರಾದ ಲಿಂಗರಾಜ್, ತಾಯಮ್ಮ, ರೇಣುಕಾ, ಉಳ್ಳೇಸೂಗೂರಿನ ಅಜ್ಮಿರ್ ಗಾಯಗೊಂಡಿದ್ದು, ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ವಡಗೇರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.