ಸಿಎಂ ಗೃಹ ಕಚೇರಿ ಕೃಷ್ಣಾದ ಮಹಿಳಾ ಪೇದೆಗೆ ಸೋಂಕು ಶಂಕೆ: ಭೀತಿಯಲ್ಲಿ ಸಚಿವರು
Team Udayavani, Jun 19, 2020, 2:21 PM IST
ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಗೃಹ ಕಚೇರಿ ಕೃಷ್ಣದಲ್ಲಿ ಕೆಲಸ ಮಾಡಿದ್ದ ಮಹಿಳಾ ಕಾನ್ಸ್ ಟೇಬಲ್ ಅವರ ಪತಿಗೆ ಕೋವಿಡ್-19 ಸೋಂಕು ದೃಢವಾಗಿದೆ. ಇದರಿಂದ ಸಿಎಂ ಗೃಹ ಕಚೇರಿಗೆ ಭೇಟಿ ಕೊಟ್ಟಿದ್ದ ಸಚಿವರು, ಅಧಿಕಾರಿಗಳಿಗೆ ಸೋಂಕು ಭೀತಿ ಎದುರಾಗಿದೆ.
ಕೆಲ ದಿನಗಳ ಹಿಂದೆ ಈಕೆ ಕೃಷ್ಣದಲ್ಲಿ ಕೆಲಸ ನಿರ್ವಹಿಸಿದ್ದರು. ಸದ್ಯ ಆಕೆಯ ಪತಿಗೆ ಕೋವಿಡ್-19 ಸೋಂಕು ದೃಢವಾಗಿದೆ. ಇದರಿಂದ ಸದ್ಯ ಆಕೆಗೂ ಕೋವಿಡ್ ಟೆಸ್ಟ್ ನಡೆಸಲಾಗಿದ್ದು, ವರದಿ ಬರಬೇಕಿದೆ.
ಇತ್ತೀಚೆಗಷ್ಟೇ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಸ್ಮಾರ್ಟ್ ಆ್ಯಪ್ ಯೋಜನೆಯಡಿ ಕಾರವಾನ್ ಪ್ರವಾಸೋದ್ಯಮದ ಉತ್ತೇಜನಕ್ಕಾಗಿ ಅಭಿವೃದ್ಧಿಪಡಿಸಿದ ಹೊಸ ಕಾರವಾನ್ಗಳಿಗೆ ಗ್ರೀನ್ ಸಿಗ್ನಲ್ ತೋರುವ ಮೂಲಕ ಚಾಲನೆ ನೀಡಿದ್ದರು. ಈ ಕಾರ್ಯಕ್ರಮದಲ್ಲಿ ಈ ಮಹಿಳಾ ಕಾನ್ಸ್ಟೇಬಲ್ ಕಾರ್ಯ ನಿರ್ವಹಿಸಿದ್ದರು.
ಸದ್ಯ ಕೃಷ್ಣಾಗೆ ಭೇಟಿ ನೀಡಿದ್ದ ಸಚಿವರು, ಅಧಿಕಾರಿಗಳು, ಸಿಬ್ಬಂದಿ ವರ್ಗದವರಿಗೆ ಸೋಂಕು ಭೀತಿ ಎದುರಾಗಿದೆ. ಹೀಗಾಗಿ ಕೃಷ್ಣಾ ಕಚೇರಿಯ ಕಾರ್ಯಕ್ರಮಗಳನ್ನು ವಿಧಾನಸೌಧಕ್ಕೆ ಸ್ಥಳಾಂತರ ಮಾಡಲಾಗಿದ್ದು, ಕೃಷ್ಣ ಕಚೇರಿಗೆ ಸ್ಯಾನಿಟೈಶನ್ ಮಾಡಲಾಗಿದೆ..