ಕೋವಿಡ್ ವಿಷಯದಲ್ಲಿ ಕಾಂಗ್ರೆಸ್ ನಾಯಕರು ರಾಜಕೀಯ ಮಾಡುತ್ತಿರುವುದು ನಾಚಿಗೇಡು : ಶ್ರೀರಾಮುಲು
Team Udayavani, May 19, 2021, 6:06 PM IST
ಚಿತ್ರದುರ್ಗ: ಕೋವಿಡ್ ನಿಂದ ಜೀವ ಮತ್ತು ಜೀವನ ಎರಡೂ ಹೋಗುತ್ತಿದೆ. ಆದರೆ, ಕಾಂಗ್ರೆಸ್ ನಾಯಕರು ಪರಿಸ್ಥಿತಿ ದುರುಪಯೋಗ ಮಾಡಿಕೊಂಡು ರಾಜಕೀಯ ಮಾಡುತ್ತಿರುವುದು ನಾಚಿಗೇಡು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಹೇಳಿದರು.
ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನ ಸಂಕಷ್ಟದಲ್ಲಿದ್ದಾರೆ. ಇಂತಹ ಸಮಯದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಂಡು, ಜನರಲ್ಲಿ ಗೊಂದಲ ಮೂಡಿಸುವುದು ಸರಿಯಲ್ಲ ಎಂದರು.
ವಿಪಕ್ಷವಾಗಿರುವ ಕಾಂಗ್ರೆಸ್ ಜವಾಬ್ದಾರಿ ಮರೆತು ರಾಜಕಾರಣ ಮಾಡುತ್ತಿದೆ. ಡಿ.ಕೆ. ಶಿವಕುಮಾರ್ ಅವರ ಪಕ್ಷವನ್ನು ಅಧಿಕಾರಕ್ಕೆ ತಂದು ಮುಖ್ಯಮಂತ್ರಿಯಾಗಲು ಕನಸು ಕಾಣುತ್ತಿದ್ದಾರೆ ಎಂದು ದೂರಿದರು.
ಇದನ್ನೂ ಓದಿ : ಒಂದು ಕೋಟಿ ಕೊಲ್ಚಿಸಿನ್ ಟ್ಯಾಬ್ಲೆಟ್ ಪೂರೈಕೆಗೆ ಕೇಂದ್ರದ ಒಪ್ಪಿಗೆ
ಲಸಿಕೆಗೆ ನಿಮ್ಮ ಮನೆಯಿಂದ ಹಣ ಕೊಡ್ತಿರಾ..?
ಲಸಿಕೆ ಖರೀಧಿಸಲು ಶಾಸಕರ ನಿಧಿಯಿಂದ 100 ಕೋಟಿ ರೂ. ನೀಡುವುದಾಗಿ ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಆದರೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಈಗಾಗಲೇ ಎಲ್ಲಾ ಶಾಸಕರ ವೇತನ ಹಾಗೂ ಶಾಸಕರ ನಿಧಿಯನ್ನು ಮುಂದಿನ 6 ತಿಂಗಳ ಕಾಲ ತಡೆ ಹಿಡಿದು ಕೊರೊನಾ ನಿರ್ವಹಣೆಗೆ ಬಳಕೆ ಮಾಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಇದರಲ್ಲಿ ಕಾಂಗ್ರೆಸ್ ನಾಯಕರು ಕೊಡುವುದು ಏನಿದೆ, ಸ್ವಂತ ಹಣವನ್ನು ಅಥವಾ ಮನೆಯಿಂದ ಕೊಡ್ತಿರಾ ಎಂದು ಶ್ರೀರಾಮುಲು ಪ್ರಶ್ನಿಸಿದರು.
ಜನರ ದಾರಿ ತಪ್ಪಿಸಿ, ಗೊತ್ತಾಗದಂತೆ ಲಸಿಕೆ ಹಾಕಿಸಿಕೊಂಡಿದ್ದಾರೆ:
ಕೋವಿಡ್ಗೆ ನೀಡುತ್ತಿರುವ ಲಸಿಕೆಯಲ್ಲಿ ಏನೂ ಇಲ್ಲ, ಅದು ಡಿಸ್ಟಿಲ್ ವಾಟರ್, ಅದನ್ನು ತೆಗೆದುಕೊಂಡರೆ ಮಕ್ಕಳಾಗುವುದಿಲ್ಲ ಎಂಬಿತ್ಯಾದಿ ಅಪಪ್ರಚಾರ ಮಾಡಿ, ಜನರಲ್ಲಿ ಗೊಂದಲ ಮೂಡಿಸಿ ಕಾಂಗ್ರೆಸ್ ನಾಯಕರು ಗೊತ್ತಾಗದಂತೆ ಲಸಿಕೆ ಹಾಕಿಸಿಕೊಂಡಿದ್ದಾರೆ. ಇಂದು ದೇಶದಲ್ಲಿ ಇಷ್ಟೊಂದು ಜನ ಸಾವು-ನೋವು ಅನುಭವಿಸಲು ಕಾಂಗ್ರೆಸ್ಸೇ ಕಾರಣ. ನಮ್ಮ ಸರ್ಕಾರ ಕಳೆದ ಕೋವಿಡ್ ಸಂದರ್ಭದಲ್ಲಿ ೨೫೦೦ ಕೋಟಿ ರೂ. ಹಾಗೂ ಈಗ 1250 ಕೋಟಿ ರೂ. ಆರ್ಥಿಕ ನೆರವು ನೀಡಿದೆ. ಆದರೆ, ಕಾಂಗ್ರೆಸ್ ಏನು ಕೊಟ್ಟಿದೆ ಎಂದು ಶ್ರೀರಾಮುಲು ಪ್ರಶ್ನಿಸಿದರು.
ಎಚ್ಡಿಕೆ, ದೇವೇಗೌಡರಿಗೆ ಅಭಿನಂದನೆ:
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೋವಿಡ್ ಸಂದರ್ಭದಲ್ಲಿ ಸರ್ಕಾರಕ್ಕೆ ರಚನಾತ್ಮಕ ಸಲಹೆ ನೀಡುತ್ತಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ. ಆದರೆ, ಕಾಂಗ್ರೆಸ್ ಕೇವಲ ರಾಜಕಾರಣ ಮಾಡುತ್ತಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಸದ ಎ. ನಾರಾಯಣಸ್ವಾಮಿ, ಶಾಸಕರಾದ ಜಿ.ಎಚ್. ತಿಪ್ಪಾರೆಡ್ಡಿ, ವೈ.ಎ. ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಎ. ಮುರುಳಿ ಇದ್ದರು.