ಇಸ್ಲಾಂನಲ್ಲಿ ಮಸೀದಿ ಸ್ಥಳಾಂತಕ್ಕೆ ಅವಕಾಶವಿದೆ: ಮೌಲಾನಾ ನದ್ವಿ
Team Udayavani, Feb 9, 2018, 3:36 PM IST
ಬೆಂಗಳೂರು : ಮಸೀದಿಯನ್ನು ಬೇರೆಡೆಗೆ ಸ್ಥಳಾಂತರಿಸುವುದಕ್ಕೆ ಇಸ್ಲಾಮ್ ನಲ್ಲಿ ಅವಕಾಶ ಇದೆ ಎಂದು ಅಖೀಲ ಭಾರತದ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯರಾಗಿರುವ ಮೌಲಾನಾ ಸಯ್ಯದ್ ಸಲ್ಮಾನ್ ಹುಸೇನಿ ನದ್ವಿ ಹೇಳಿದ್ದಾರೆ.
ಆರ್ಟ್ ಆಫ್ ಲಿವಿಂಗ್ ಸ್ಥಾಪಕ ಶ್ರೀ ಶ್ರೀ ರವಿಶಂಕರ್ ಅವರೊಂದಿಗಿನ ಭೇಟಿಯಲ್ಲಿ ಮೌಲಾನಾ ನದ್ವಿ ಅವರು ಈ ಹೇಳಿಕೆ ನೀಡಿದರು. ಬಾಬರಿ ಮಸೀದಿ – ರಾಮ ಜನ್ಮಭೂಮಿ ವಿವಾದಕ್ಕೆ ಸೌಹಾರ್ದಯುತ ಪರಿಹಾರ ಕಲ್ಪಿಸುವ ದಿಶೆಯಲ್ಲಿ ಅವರು ಈ ಮಾತನ್ನು ಹೇಳಿದರು.
ಬಾಬರಿ ಮಸೀದಿ – ರಾಮ ಜನ್ಮಭೂಮಿ ವಿವಾದಕ್ಕೆ ಸೌಹಾರ್ದಯುತ ಪರಿಹಾರ ಕಲ್ಪಿಸುವ ದಿಶೆಯಲ್ಲಿ ಶ್ರೀ ಶ್ರೀ ರವಿಶಂಕರ್ ಅವರು ನಿನ್ನೆ ಗುರುವಾರ ಇಲ್ಲಿ ಆರು ಸದಸ್ಯರ ಮುಸ್ಲಿಂ ನಿಯೋಗವನ್ನು ಭೇಟಿಯಾದರು. ಸುಮಾರು ಮೂರು ತಾಸುಗಳ ಕಾಲ ಚರ್ಚೆ ನಡೆಯಿತು ಎಂದು ವರದಿಗಳು ತಿಳಿಸಿವೆ.
ಸಭೆಯಲ್ಲಿ ಪಾಲ್ಗೊಂಡ ಆರು ಮಂದಿ ಪ್ರತಿನಿಧಿಗಳೆಂದರೆ : ಅಖೀಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಲಿಯ ಕಾರ್ಯಕಾರಿಣಿ ಸದಸ್ಯ ಮೌಲಾನಾ ಸಯ್ಯದ್ ಸಲ್ಮಾನ್ ಹುಸೇನಿ ನದ್ವಿ, ಯುಪಿ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಅಧ್ಯಕ್ಷೆ ಝುಫರ್ ಫರೂಕೀ, ಮಾಜಿ ಐಎಎಸ್ ಅಧಿಕಾರಿ ಅನೀಸ್ ಅನ್ಸಾರಿ, ವಕೀಲ ಇಮ್ರಾನ್ ಅಹ್ಮದ್, ತೀಲಿ ವಲೀ ಮಸೀದಿಯ ಮೌಲಾನಾ ವಸೀಫ ಹನ್ ವೈಝೀ, ಮತ್ತು ಆಬ್ಜೆಕ್ಟೀವ್ ರಿಸರ್ಚ್ ಆ್ಯಂಡ್ ಡೆವಲೆಪ್ಮೆಂಟ್ ಇದರ ನಿರ್ದೇಶಕ ಅತಾರ್ ಹುಸೇನ್.