ಮತ್ತೆ ಚುರುಕಾದ ಸಂಪುಟ ಪುನಾರಚನೆ ಚರ್ಚೆ
ಸಂಕ್ರಾಂತಿಗೆ ಸಿಹಿ ನಿರೀಕ್ಷೆಯಲ್ಲಿ ಸಚಿವಾಕಾಂಕ್ಷಿಗಳು ; ಕ್ಷೀಣವಾದ ನಾಯಕತ್ವ ಬದಲಾವಣೆ ದನಿ
Team Udayavani, Jan 2, 2022, 6:20 AM IST
ಬೆಂಗಳೂರು: ಹೊಸ ವರ್ಷಾಚರಣೆ ಸಂದರ್ಭದಲ್ಲಿ ರಾಜ್ಯ ಬಿಜೆಪಿಯಲ್ಲಿ ಬದಲಾವಣೆಯ ಗಾಳಿ ಜೋರಾಗಿ ಬೀಸುತ್ತಿದ್ದು, ಸಚಿವಾಕಾಂಕ್ಷಿಗಳು ಸಂಕ್ರಾಂತಿ ಹೊತ್ತಿಗೆ ಎಳ್ಳು ಬೆಲ್ಲದ ನಿರೀಕ್ಷೆಯಲ್ಲಿದ್ದಾರೆ.
ನಾಯಕತ್ವ ಬದಲಾವಣೆ ಗಾಳಿ ತುಸು ತಣ್ಣಗಾಗಿದ್ದು, ಸಚಿವ ಸಂಪುಟ ಪುನಾರಚನೆಯಾಗುವುದು ನಿಶ್ಚಿತ ಎನ್ನಲಾಗುತ್ತಿದೆ. ಪುನಾರಚನೆಗೆ ಯಾವ ಮಾನದಂಡ ಹಾಗೂ ಯಾವ ಮಾದರಿ ಅನುಸರಿಸಲಾಗುತ್ತದೆ ಎನ್ನುವುದು ನಿಗೂಢವಾಗಿದೆ.
ಗುಜರಾತ್ ಮಾದರಿ?
ಬಹುತೇಕ ಶಾಸಕರು ಈಗಾಗಲೇ ಅಧಿಕಾರ ಅನುಭವಿಸಿರುವ ಎಲ್ಲ ಸಚಿವರನ್ನು ಕೈ ಬಿಟ್ಟು ಗುಜರಾತ್ ಮಾದರಿಯಲ್ಲಿ ಹೊಸ ಸಂಪುಟ ರಚನೆ ಮಾಡಬೇಕೆಂದು ಆಗ್ರಹಿಸುತ್ತಿ ದ್ದಾರೆ ಎನ್ನಲಾಗುತ್ತಿದೆ. ಪಕ್ಷದ ರಾಜ್ಯ ನಾಯಕರೂ ಹಾಗೂ ವರಿಷ್ಠರ ಮಟ್ಟದಲ್ಲೂ ಈ ಬಗ್ಗೆ ಚರ್ಚೆ ನಡೆಸ ಲಾಗುತ್ತಿದೆ ಎಂದು ತಿಳಿದು ಬಂದಿದೆ.
ಅರ್ಧ ಸಂಪುಟ ಬದಲಾವಣೆ
ಇನ್ನೊಂದು ಮೂಲಗಳ ಪ್ರಕಾರ ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದು, ಈಗಲೂ ಅಧಿಕಾರ
ದಲ್ಲಿರುವ ಕನಿಷ್ಠ 14ರಿಂದ 15 ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ಕಲ್ಪಿಸಬೇಕೆಂಬ ಬೇಡಿ
ಕೆಯೂ ಇದೆ ಎನ್ನಲಾಗುತ್ತಿದೆ.
ಚುನಾವಣೆಯ ವರ್ಷವಾಗಿರುವುದರಿಂದ ಸರಕಾರದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಸಕ್ರಿಯರಾಗಿ ಕಾರ್ಯ ನಿರ್ವಹಿಸುವ ಶಾಸಕರಿಗೆ ಅವಕಾಶ ಕಲ್ಪಿಸಿ, ಸರಕಾರದ ಪ್ರತಿಷ್ಠೆ ಹೆಚ್ಚಿಸಿಕೊಳ್ಳಬೇಕು ಎಂಬ ಮಾತು ಪಕ್ಷದ ವಲಯದಲ್ಲಿದೆ.ಇನ್ನೊಂದು ಮೂಲಗಳ ಪ್ರಕಾರ, ನಾಯಕತ್ವ ಬದಲಾವಣೆ ಬಗ್ಗೆ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿರುವ ಸಚಿವರನ್ನು ಮಾತ್ರ ಬದಲಾಯಿಸಲು ಮುಖ್ಯಮಂತ್ರಿಗಳು ಚಿಂತಿಸುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಅಮೆರಿಕದಲ್ಲಿ ಮೀನಿನ ಮಳೆ! ಜಗತ್ತಿನಲ್ಲೇ ಅತ್ಯಂತ ವಿರಳ ಘಟನೆ
ಅಮಿತ್ ಶಾ ಸಭೆ?
ರಾಜ್ಯ ಸಚಿವ ಸಂಪುಟ ಪುನಾರಚನೆ ಪಕ್ಷದ ಬೆಳವಣಿಗೆಗಳ ಕುರಿತಂತೆ ದಿಲ್ಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಶೀಘ್ರವೇ ಅನೌಪಚಾರಿಕ ಸಭೆ ನಡೆಸಿ, ಪಕ್ಷದ ಸಂಘಟನೆ ಹಾಗೂ ಸರಕಾರದ ನಡೆಯ ಕುರಿತು ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಆದರೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ರಾಜ್ಯ ಭೇಟಿ ಹಾಗೂ ಅಮಿತ್ ಶಾ ಅವರ ಸಭೆ ಬಗ್ಗೆ ಯಾವುದೇ ಅಧಿಕೃತ ಸಮಯ ನಿಗದಿಯಾಗಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸಚಿವರಿಗೆ ಪ್ರಶಿಕ್ಷಣ ವರ್ಗ ?
ಜನವರಿ ಎರಡನೇ ವಾರದಲ್ಲಿ ಸಚಿವರಿಗಾಗಿ ಒಂದು ದಿನದ ಪ್ರಶಿಕ್ಷಣ ವರ್ಗ ಹಮ್ಮಿಕೊಳ್ಳುವ ಬಗ್ಗೆ ಪಕ್ಷದಲ್ಲಿ ಚಿಂತನೆ ನಡೆಸಲಾಗಿದ್ದು, ರಾಷ್ಟ್ರೀಯ ಅಧ್ಯಕ್ಷರ ಸಮಯ ನೋಡಿಕೊಂಡು ಸಮಯ ನಿಗದಿಯಾಗ ಲಿದೆ ಎಂದು ಬಿಜೆಪಿ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಸಚಿವರ ಮೌಲ್ಯಮಾಪನ?
ಹಾಲಿ ಸಚಿವರ ಕಾರ್ಯ ವೈಖರಿ ಬಗ್ಗೆ ವರಿಷ್ಠರು ಮೌಲ್ಯಮಾಪನ ನಡೆಸಿ, ಅವರು ನಿರ್ವಹಿಸುವ ಇಲಾಖೆ ಹಾಗೂ ಪಕ್ಷದ ಸಂಘಟನೆಯಲ್ಲಿ ಯಾವ ರೀತಿ ಸಕ್ರಿಯರಾಗಿದ್ದಾರೆ, ಕಾರ್ಯ ಕರ್ತರು ಹಾಗೂ ಪಕ್ಷದೊಂದಿಗೆ ಎಂಥ ಒಡನಾಟ ಇಟ್ಟುಕೊಂಡಿದ್ದಾರೆ ಎನ್ನುವುದನ್ನು ಸ್ವತಃ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೇ ಮೌಲ್ಯಮಾಪನ ನಡೆಸುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ.