ವಿಜಯೇಂದ್ರನಿಗಾಗಿ ಸಿ.ಎಂ. ಕೈಯಲ್ಲಿ ಪ್ರಮುಖ ಖಾತೆ- ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ
Team Udayavani, Mar 21, 2021, 6:22 PM IST
ವಿಜಯಪುರ : ರಾಜ್ಯದಲ್ಲಿ ಪ್ರಮುಖ ಖಾತೆಗಳನ್ನು ಮುಖ್ಯಮಂತ್ರಿ ತಮ್ಮ ಬಳಿಯೇ ಇರಿಸಿಕೊಂಡಿದ್ದು, ಪುತ್ರ ವಿಜಯೇಂದ್ರ ಅವರಿಗಾಗಿ ಹೀಗೆ ಮಾಡುತ್ತಿದ್ದಾರೆ. ಸಮರ್ಥರಿದ್ದರೂ ಬಹುತೇಕ ಮಂತ್ರಿಗಳಿಗೆ ಮುಕ್ತ ಅಧಿಕಾರ ನಡೆಸಲು ಸ್ವಾತಂತ್ರ್ಯ ನೀಡದೆ ತಡೆಯಲಾಗುತ್ತಿದೆ ಎಂದು ಬಿಜೆಪಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ.
ಭಾನುವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಡಿ ದರ್ಜೆ ನೌಕರರ ವರ್ಗಾವಣೆಗೂ ಮುಖ್ಯಮಂತ್ರಿಗಳ ಆಣತಿ ಬೇಕು. ಪ್ರಜಾತಂತ್ರ ವ್ಯವಸ್ಥೆಗೆ ಮಾರಕ ರೀತಿಯಲ್ಲಿ ಸಚಿವರಿಗೆ ಕೆಲಸ ಮಾಡದಂತೆ ನಿರ್ಬಂಧ ಹೇರಲಾಗಿದೆ. ಮಾರ್ಚ್ ಕೊನೆ ಬಂದಿದೆ, ರಾಜ್ಯದಲ್ಲಿ ನೀರಾವರಿ ಯೋಜನೆಗಳಿಗೆ ಅನುದಾನ ಪಡೆಯಬೇಕಿದೆ.
ಇದನ್ನೂ ಓದಿ:ಹೊಸಪೇಟೆ: ಕೇಬಲ್ ಆಪರೇಟರ್ ಬರ್ಬರ ಹತ್ಯೆ
ಗೋವಿಂದ ಕಾರಜೋಳ, ಬಸವರಾಜ ಬೊಮ್ಮಾಯಿ, ಅಶೋಕರಂಥ ಹಿರಿಯ ಹಾಗೂ ಸಮರ್ಥ ಸಚಿವರಿಗೆ ಜಲಸಂಪನ್ಮೂಲ ಖಾತೆ ಹೆಚ್ಚುವರಿ ಹೊಣೆ ನೀಡಬಹುದಿತ್ತು. ಆದರೆ ತಮ್ಮ ಮಗ ವಿಜಯೇಂದ್ರನಿಗಾಗಿ ಜಲಸಂಪನ್ಮೂಲ, ಇಂಧನ, ಬೆಂಗಳೂರು ನಗರಾಭಿವೃದ್ಧಿ, ಹಣಕಾಸು ಖಾತೆಗಳನ್ನು ಅನ್ಯ ಸಚಿವರಿಗೆ ಹಂಚಿಕೆ ಮಾಡುತ್ತಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಟೀಕಾ ಪ್ರಹಾರ ನಡೆಸಿದರು.