ಬಸವರಾಜ ಹೊರಟ್ಟಿ ಬಿಜೆಪಿ ಸೇರ್ಪಡೆಗೆ ನಡೆಯುತ್ತಿದೆ ಲೆಕ್ಕಾಚಾರ
Team Udayavani, Jan 19, 2022, 6:40 AM IST
ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಅವರ ಮುಂದಿನ ರಾಜಕೀಯ ನಡೆಯ ಬಗ್ಗೆ ಸಾಕಷ್ಟು ಕುತೂಹಲ ಉಂಟಾಗಿದ್ದು, ಬಿಜೆಪಿ ಸೇರ್ಪಡೆಯ ಕುರಿತು ಮಾತುಕತೆ ನಡೆದಿದೆಯಾದರೂ ಹೊರಟ್ಟಿಯವರ ಷರತ್ತುಗಳ ಕುರಿತು ಬಿಜೆಪಿ ಮೌನ ವಹಿಸಿದೆೆ.
ಬಿಜೆಪಿ ಬೆಂಬಲದೊಂದಿಗೆ ಸಭಾಪತಿಯಾಗಿರುವ ಬಸವರಾಜ್ ಹೊರಟ್ಟಿ ಯವರ ಸದಸ್ಯತ್ವ ಈ ವರ್ಷದ ಜು.4ಕ್ಕೆ ಮುಕ್ತಾಯವಾಗಲಿದ್ದು, ಈ ಬಾರಿ ಯಾವ ಪಕ್ಷದಿಂದ ಸ್ಪರ್ಧೆ ಮಾಡಲಿದ್ದಾರೆ ಎಂಬ ವಿಚಾರದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
ಸಭಾಪತಿಯಾದ ಅನಂತರ ಜೆಡಿಎಸ್ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಈ ಚುನಾವಣೆಯಲ್ಲಿ ಜೆಡಿಎಸ್ನಿಂದ ಸ್ಪರ್ಧಿಸಬೇಕಾ? ಬೇರೆ ಪಕ್ಷಕ್ಕೆ ಹೋಗಬೇಕಾ ಅಥವಾ ಪಕ್ಷೇತರರಾಗಿ ಸ್ಪರ್ಧಿಸಬೇಕಾ ಎನ್ನುವ ಕುರಿತು ಹೊರಟ್ಟಿ ಇನ್ನೂ ಗೊಂದಲದಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಎಲ್ಲ ಶಾಲಾ ಕಾಲೇಜುಗಳಲ್ಲಿ ಸುಭಾಷಚಂದ್ರ ಭೋಸ್ರ 125 ನೇ ಜಯಂತಿ ಆಚರಣೆ: ಸಿಎಂ
ಬಿಜೆಪಿಗೆ ಆಹ್ವಾನ
ಇದರ ನಡುವೆಯೇ ಬಿಜೆಪಿ ನಾಯಕರು ತಮ್ಮ ಪಕ್ಷಕ್ಕೆ ಬರುವಂತೆ ಹೊರಟ್ಟಿಯವರಿಗೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದ್ದು, ಪಕ್ಷದ ಮುಖಂಡರು ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.
ಹೊರಟ್ಟಿ ಅವರ ಷರತ್ತುಗಳು: ಬಿಜೆಪಿಗೆ ಸೇರಿದರೆ ಸಭಾಪತಿ ಸ್ಥಾನದಲ್ಲಿಯೇ ತಮ್ಮನ್ನು ಮುಂದುವರಿಸಬೇಕು. 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸಚಿವ ಸ್ಥಾನ ನೀಡಬೇಕು ಎಂಬ ಎರಡು ಷರತ್ತು ವಿಧಿಸಿದ್ದಾರೆ ಎನ್ನಲಾಗಿದ್ದು ಬಿಜೆಪಿ ಯಾವುದೇ ತೀರ್ಮಾನಕ್ಕೆ ಬಂದಿಲ್ಲ .