ಮುಷ್ಕರ ಸ್ಥಗಿತಗೊಳಿಸಿ, ಕೆಲಸಕ್ಕೆ ಹಾಜರಾಗಿ : ಸಾರಿಗೆ ನೌಕರರಿಗೆ ಬಸವರಾಜ ಬೊಮ್ಮಾಯಿ ಮನವಿ
Team Udayavani, Apr 19, 2021, 6:25 PM IST
ಬೆಂಗಳೂರು : ಸಾರ್ವಜನಿಕರ ಹಿತದೃಷ್ಟಿಯಿಂದ ಮುಷ್ಕರವನ್ನು ಸ್ಥಗಿತಗೊಳಿಸಿ ಕೆಲಸಕ್ಕೆ ಹಾಜರಾಗುವಂತೆ ಮುಷ್ಕರನಿರತ ಸಾರಿಗೆ ನೌಕರರಿಗೆ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಬಸವರಾಜ ಬೊಮ್ಮಾಯಿ ಮತ್ತೊಮ್ಮೆ ಮನವಿ ಮಾಡಿದರು.
ಸೋಮವಾರ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಸಾರಿಗೆ ನೌಕರರ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರು ಇಂದು ತಮ್ಮನ್ನು ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ಅವರು ಸಾರಿಗೆ ನೌಕರರ ವಿಚಾರದ ಬಗ್ಗೆ ಪ್ರಸ್ತಾಪ ಮಾಡಿದರು. ಆಗ ಅವರಿಗೆ ಹಲವು ವಿಚಾರಗಳನ್ನು ಸ್ಪಷ್ಟವಾಗಿ ಹೇಳಿದ್ದೇನೆ. ಮುಷ್ಕರ ಮಾಡಲು ಇದು ಸೂಕ್ತ ಸಂದರ್ಭ ಅಲ್ಲ . ಕೋವಿಡ್ ಎಲ್ಲರನ್ನು ಕಾಡುತ್ತಿದೆ ಎಂದರು.
ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿಯಾಗಿಲ್ಲ. ಜನ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ತಾವು ಮುಷ್ಕರ ಸ್ಥಗಿತಗೊಳಿಸಿ. ಕೆಲಸಕ್ಕೆ ಹಾಜರಾಗಿ. ನಿಮ್ಮ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರ ಗಮನಕ್ಕೆ ತರುತ್ತೇನೆ. ಮೊದಲು ಮುಷ್ಕರ ಸ್ಥಗಿತಗೊಳಿಸಿ ಕೆಲಸಕ್ಕೆ ಹಾಜರಾಗಿ ಎಂಬ ಮನವಿಯನ್ನು ಮಾಡಿದ್ದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.